ರಿಯಾದ್: ಅಪಘತಕ್ಕೀಡಾಗಿ ತುಂಬಾ ತೊಂದರೆಗೆ ಸಿಲುಕಿದ್ದ, ಸೌದಿ ಅರೇಬಿಯಾದ ಖಮೀಸ್ ಮುಶಾಯ್ತ್ ನಲ್ಲಿ ಕೆಲಸ ಮಾಡುತ್ತಿದ್ದ ಕರ್ನಾಟಕದ ಮಹ್ಬೂಬ್ ಪಾಷಾ ಎಂಬವರನ್ನು ಕೆಸಿಎಫ್ ನೆರವಿನಿಂದ ತಾಯಿನಾಡಿಗೆ ಕಳಿಸಲಾಯಿತು.
ತನ್ನ ಸ್ಪೊನ್ಸರ್ ಹುರೂಬ್ ಮಾಡಿ, ಪಾಸಪೋರ್ಟ್, ಇಖಾಮ ಇನ್ನಿತರ ಯಾವುದೇ ದಾಖಲೆ ಪತ್ರಗಳಿಲ್ಲದೆ ಅನಧಿಕೃತವಾಗಿ ವಾಸವಾಗಿದ್ದ ಇವರು ಸೈಕಲ್ನಲ್ಲಿ ಸಮೋಸ ಮಾರಿ ದೊರೆಯುತ್ತಿದ್ದ ಹಣದಿಂದ ಜೀವನ ನಡೆಸುತ್ತಿದ್ದರು.ಆದರೆ ದುರ್ವಿಧಿ ಎಂಬಂತೆ ಅವರ ಸೈಕಲ್ಗೆ ಕಾರು ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿ ಆಸ್ಪತ್ರೆ ಸೇರಿದ ಅವರಿಗೆ ಸಹಾಯಕ್ಕಾಗಿ ಯಾವುದೇ ಬಂದು ಮಿತ್ರರಿಲ್ಲದೆ ಏಕಾಂಗಿಯಾಗಿ ಸಂಕಷ್ಟದಲ್ಲಿದ್ದರು.
ಅತ್ತ ಕೆಲಸ ಮಾಡಲಾಗದೆ ಇತ್ತ ಊರಿಗೂ ಹೋಗಲಾರದೆ ಮಾನಸಿಕವಾಗಿ ನೊಂದು ಆಸ್ಪತ್ರೆಯಲ್ಲಿದ್ದ ಅವರನ್ನು ಭೇಟಿಯಾದ ಕೆಸಿಎಫ್ ಖಮೀಸ್ ಮುಶಾಯ್ತ್ ಸೆಕ್ಟರ್ ಅಧ್ಯಕ್ಷರಾದ ಅಬ್ದುಲ್ ರಝಾಕ್ ಬನ್ನೂರು ಅವರು ಭಾರತೀಯ ರಾಯಭಾರ ಕಛೇರಿ ಹಾಗೂ ಸೌದಿ ಪೊಲೀಸ್ ಅಧಿಕಾರಿಯನ್ನು ಭೇಟಿಯಾಗಿ ಅವರಿಗೆ ಊರಿಗೆ ಹೋಗಲು ಅಗತ್ಯವಿದ್ದ ತಾತ್ಕಾಲಿಕ ಪಾಸ್ಪೋರ್ಟ್ ಸಹಿತ ಎಲ್ಲಾ ದಾಖಲೆಗಳನ್ನು ಸರಿಪಡಿಸಿ ಟಿಕೆಟ್ ವ್ಯವಸ್ಥೆಯನ್ನು ಕೂಡ ಮಾಡಿ ಅವರನ್ನು ಅಬಹ ಏರ್ಪೋರ್ಟ್ ತಲುಪಿಸಿ ಸುರಕ್ಷಿತವಾಗಿ ಯಾವುದೇ ಅಡೆತಡೆಗಳಿಲ್ಲದೆ ಊರಿಗೆ ತಲುಪುವಂತೆ ಮಾಡಿದ್ದಾರೆ.