janadhvani

Kannada Online News Paper

ಮುಜಫರ್​ ನಗರ:120ಕ್ಕೂ ಹೆಚ್ಚು ಮಕ್ಕಳು ಮೃತ್ಯು- ಮಿದುಳು ಜ್ವರಕ್ಕೆ ಲಿಚಿ ಹಣ್ಣು ಕಾರಣವಲ್ಲ

ಪಾಟ್ನಾ: ಬಿಹಾರದ ಮುಜಫರ್‌ ನಗರ ಹಾಗೂ ಸುತ್ತಮುತ್ತ ಜಿಲ್ಲೆಗಳಲ್ಲಿ ಮಿದುಳು ಸಂಬಂಧಿ ವೈರಾಣು ರೋಗ (ಅಕ್ಯುಟ್ ಎನ್‌ಸೆಫಾಲಿಟಿಸ್ ಸಿಂಡ್ರೋಮ್ -ಎಇಎಸ್)ಕ್ಕೆ ತುತ್ತಾಗಿ ಸುಮಾರು 120ಕ್ಕೂ ಹೆಚ್ಚು ಮಕ್ಕಳು ಮೃತಪಟ್ಟಿದ್ದರು. ಈ ವೇಳೆ ಮೃತ ಮಕ್ಕಳ ದೇಹದಲ್ಲಿ ಲಿಚಿಹಣ್ಣಿನ ಅಂಶವು ಪತ್ತೆಯಾಗಿತ್ತು. ಹಾಗಾಗಿ ಈ ಸೋಂಕು ಬರಲು ಲಿಚಿ ಹಣ್ಣು ಕಾರಣ ಎಂದು ವೈದ್ಯರು ಹೇಳಿದ್ದರು.

ಆದರೆ ಲಿಚಿ ಹಣ್ಣು ಮತ್ತು ಮಾರಕ ಅಕ್ಯುಟ್​ ಎನ್​ಸೆಫಾಲಿಟಿಸ್ ಸಿಂಡ್ರೋಮ್​ ವೈರಾಣುವಿಗೆ ಯಾವುದೇ ಸಂಬಂಧವಿಲ್ಲ ಎಂದು ರಾಷ್ಟ್ರೀಯ ಸಂಶೋಧನಾ ಕೇಂದ್ರದ ನಿರ್ದೇಶಕರು ತಿಳಿಸಿದ್ದಾರೆ.

ಲಿಚಿ ಹಣ್ಣಿನ ಅಧ್ಯಯನ ನಡೆಸುವ ಮುಜಫರ್​ ಮೂಲದ ರಾಷ್ಟ್ರೀಯ ಸಂಶೋಧನಾ ಕೇಂದ್ರದ ನಿರ್ದೇಶಕ ವಿಶಾಲ್​ ನಾಥ್​ ಈ ಬಗ್ಗೆ ತಿಳಿಸಿದ್ದು, ಲಿಚಿ ಒಂದು ರುಚಿಕರ ಹಣ್ಣು. ಮಿದುಳು ಜ್ವರಕ್ಕೆ ಕಾರಣವಾಗುತ್ತಿಲ್ಲ. ಒಂದೊಮ್ಮೆ 10 ವರ್ಷದೊಳಗಿನ ಮಕ್ಕಳು ಲಿಚಿ ತಿನ್ನುವುದರಿಂದಲೇ ಅಕ್ಯುಟ್​ ಎನ್‌ಸೆಫಾಲಿಟಿಸ್ ಸಿಂಡ್ರೋಮ್​ಗೆ ತುತ್ತಾಗಿ ಸಾಯುತ್ತಿದ್ದಾರೆ ಎಂದಾದರೆ ದೇಶದ ಬೇರೆ ರಾಜ್ಯಗಳ, ಬೇರೆಬೇರೆ ಪ್ರದೇಶಗಳಲ್ಲೂ ಇದೇ ತರಹ ಘಟನೆ ನಡೆಯುತ್ತಿತ್ತು. ಲಿಚಿ ಹಣ್ಣಿನಿಂದ ಯಾವುದೇ ಸೋಂಕು ಉಂಟಾಗಿಲ್ಲ ಎಂಬುದನ್ನು ನಮ್ಮ ಅಧ್ಯಯನ ಸ್ಪಷ್ಟಪಡಿಸಿದೆ. ಅಲ್ಲದೆ ಈ ಹಣ್ಣಿನಲ್ಲಿ ಹೇರಳವಾಗಿ ವಿಟಮಿನ್​ ಬಿ, ಕ್ಯಾಲ್ಸಿಯಂ, ಪೊಟ್ಯಾಷಿಯಂ, ಸೋಡಿಯಂ ಮತ್ತು ಫಾಸ್ಪರಸ್​ ಅಂಶವಿದ್ದು ಆರೋಗ್ಯಕ್ಕೆ ಒಳ್ಳೆಯದೂ ಎಂದು ತಿಳಿಸಿದ್ದಾರೆ.

ಜನರಿಗೆ ಮಾರಕ ವೈರಾಣು ಬಗ್ಗೆ ಅರಿವು ಮೂಡಿಸುವ ಅಗತ್ಯತೆ ತುರ್ತಾಗಿ ಆಗಬೇಕಿದೆ ಎಂದು ಹೇಳಿದ್ದಾರೆ.

error: Content is protected !! Not allowed copy content from janadhvani.com