janadhvani

Kannada Online News Paper

ಕೆ.ಸಿ.ಎಫ್. ಖತ್ತರ್ – ಫ್ರೀಡಂ’75 ಅಮೃತ ಮಹೋತ್ಸವ

ದೋಹಾ : ಕರ್ನಾಟಕ ಕಲ್ಚರಲ್ ಫೌಂಡೇಶನ್ – ಕೆಸಿಎಫ್ ಖತ್ತರ್ ರಾಷ್ಟ್ರೀಯ ಸಮಿತಿ ವತಿಯಿಂದ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಫ್ರೀಡಂ’75 ಕಾರ್ಯಕ್ರಮವು ದಿನಾಂಕ 19-08-2022 ರಂದು ದೋಹಾದ ಐಐಸಿಸಿ ಸಭಾಂಗಣದಲ್ಲಿ ನಡೆಯಿತು.

ಕೆಸಿಎಫ್ ಖತ್ತರ್ ರಾಷ್ಟ್ರೀಯ ಅಧ್ಯಕ್ಷರಾದ ಹನೀಫ್ ಪಾತೂರು ರವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮವನ್ನು ಐಸಿಎಫ್ ಖತ್ತರ್ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಡಾ| ಬಶೀರ್ ಪುತ್ತುಪಾಡಂ ಉದ್ಘಾಟಿಸಿ, ಭಾರತದ ರಾಜಕೀಯ ಇತಿಹಾಸದ ಜೊತೆಗೆ ಸಾಮಾಜಿಕ ಹಾಗೂ ಆರ್ಥಿಕ ಇತಿಹಾಸವನ್ನೂ ಅರಿತಿರುವುದು ಇಂದಿನ ಪೀಳಿಗೆಯ ಅಗತ್ಯವಾಗಿರುತ್ತದೆ ಎಂದರು. ಸಭಾಧ್ಯಕ್ಷರಾದ ಹನೀಫ್ ಪಾತೂರುರವರು ಮಾತನಾಡುತ್ತಾ, ಕೆಸಿಎಫ್ ನ ಸಂಪೂರ್ಣ ಪರಿಚವನ್ನು ಹೇಳುತ್ತಾ, ಸಂಘಟನೆಯು ನಡೆಸುತ್ತಿರುವ ಸಮಾಜಮುಖಿ ಚಟುವಟಿಕೆಗಳ ಬಗ್ಗೆ ವಿವರಿಸಿದರು

ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಮಹ್’ರೂಫ್ ಸುಲ್ತಾನಿ ಆತೂರುರವರು ಭಾರತ ಯಾವ ಧರ್ಮಕ್ಕೂ ಸೇರಿದ್ದಲ್ಲ, ಭಾರತ ಭಾರತೀಯರಿಗೆ ಸೇರಿದ್ದು ಎಂಬ ಆಶಾಭಾವನೆಯನ್ನು ವ್ಯಕ್ತಪಡಿಸುವುದರ ಮೂಲಕ ಭಾರತ ಸ್ವಾತಂತ್ರ್ಯ ಹೋರಾಟಗಾರ ಸವಿನೆನಪು ಹಾಗೂ ಅವರ ತ್ಯಾಗದ ಜೀವನವನ್ನು ಸ್ಮರಿಸಿದರು. ವಿಶೇಷ ಆಹ್ವಾನಿತ ಅತಿಥಿಗಳಾಗಿ ಆಗಮಿಸಿದ್ದ ಎಟಿಸ್ ಖತ್ತರ್ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರಾದ ಡಾ। ರವಿ ಶೆಟ್ಟಿಯವರು ಮತ್ತು ರ್ನಾಟಕ ಮುಸ್ಲಿಂ ಕಲ್ಚರಲ್ ಅಸೋಸಿಯೇಶನ್(ಕೆಎಂಸಿಎ) ಇದರ ಮಾಜಿ ಅಧ್ಯಕ್ಷರು ಹಾಗೂ ಸಲಹೆಗಾರರಾದ ಅಬ್ದುಲ್ಲಾ ಮೋನುರವರು ಸಭೆಯನ್ನುದ್ದೇಶಿಸಿ ಮಾತನಾಡುತ್ತಾ ಕೆಸಿಎಫ್ ನಡೆಸುತ್ತಿರುವ ಕಾರ್ಯವೈಖರಿಯನ್ನು ಶ್ಲಾಘಿಸಿದರು.

ಕರ್ನಾಟಕ ಸಂಘ ಖತ್ತರ್ ಇದರ ಪ್ರಧಾನ ಕಾರ್ಯದರ್ಶಿ ಪ್ರದೀಪ್ ದಿಲೀಪ್, ಕರ್ನಾಟಕ ಮುಸ್ಲಿಂ ಕಲ್ಚರಲ್ ಅಸೋಸಿಯೇಶನ್(ಕೆಎಂಸಿಎ) ಇದರ ಹಾಲಿ ಅಧ್ಯಕ್ಷರಾದ ಫಯಾಝ್ ಅಹ್ಮದ್, ಸೌತ್ ಕೆನರಾ ಮುಸ್ಲಿಂ ವೆಲ್ಫೇರ್ ಅಸೋಸಿಯೇಶನ್ ಇದರ ನಾಯಕರಾದ ಅಬ್ದುಲ್ ರಝಾಕ್ ಪುತ್ತೂರು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ ಶುಭಹಾರೈಸಿದರು.

ವೇದಿಕೆಯಲ್ಲಿ ಐಸಿಎಫ್ ನಾಯಕರಾದ ಕೆ.ಬಿ ಅಬ್ದುಲ್ಲ ಹಾಜಿ, ಕೆ.ಸಿ.ಎಫ್ ಅಂತರಾಷ್ಟ್ರೀಯ ಸಮಿತಿ ಸದಸ್ಯರು ಹಾಗೂ ಕೊಡಗು ಸುನ್ನೀ ವೆಲ್ಫೇರ್ ಅಸೋಸಿಯೇಶನ್ ಖತ್ತರ್ ಸಮಿತಿ ಅಧ್ಯಕ್ಷರಾದ ಯೂಸುಫ್ ಸಖಾಫಿ ಅಯ್ಯಂಗೇರಿ, ಕೆ.ಸಿ.ಎಫ್ ಅಂತರಾಷ್ಟ್ರೀಯ ಸಮಿತಿ ಸದಸ್ಯರಾದ ಕಬೀರ್ ದೇರಳಕಟ್ಟೆ, ಕೆ.ಸಿ.ಎಫ್. ಖತ್ತರ್ ರಾಷ್ಟ್ರೀಯ ನಾಯಕರಾದ ಸಯ್ಯಿದ್ ಅರ್ಶದ್ ಅಲಿ ತಂಙಳ್, ಮುನೀರ್ ಮಾಗುಂಡಿ, ಸತ್ತಾರ್ ಅಶ್ರಫಿ ಮಠ ಹಾಗೂ ಅಂದುಮಾಯಿ ನಾವುಂದರವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಭಾಗವಾಗಿ ರಾಷ್ಟ್ರೀಯ ಸಮಿತಿ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಹಸೈನಾರ್ ಕಾಟಿಪಳ್ಳ (ಪ್ರಥಮ) ಹಾಗೂ ಸಲಾಂ ಕೆ.ಸಿ ರೋಡ್ (ದ್ವಿತೀಯ) ರವರಿಗೆ ಪ್ರಶಸ್ತಿಯನ್ನು ನೀಡಿ ಅಭಿನಂದಿಸಲಾಯಿತು.

ಹಾಫಿಳ್ ಉಮರುಲ್ ಫಾರೂಖ್ ಸಖಾಫಿ ಎಮ್ಮೆಮಾಡು ದುಆ ಮತ್ತು ಕೆಸಿಎಫ್ ಸದಸ್ಯರಿಂದ ರಾಷ್ಟ್ರಗೀತೆ ಹಾಡುವ ಮೂಲಕ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಲಾಯ್ತು. ಆಸಿಫ್ ಅಹ್ಸನಿ ಅನ್ವಾರಿ ಕೊಡಗು, ಇಸ್ಹಾಖ್ ನಿಝಾಮಿ ಸಂಗಡಿಗರಿಂದ ದಫ್ ಕಾರ್ಯಕ್ರಮವು ನೆರೆದಿರುವ ಅತಿಥಿಗಳು ಮತ್ತು ಕಾರ್ಯಕರ್ತರಿಗೆ ವಿಶೇಷ ಮನರಂಜನೆಯಾಗಿತ್ತು. ಕೆಸಿಎಫ್ ಖತ್ತರ್ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಫಾರೂಕ್ ಕೃಷ್ಣಾಪುರ ಸ್ವಾಗತಿಸಿದರು. ರಾಷ್ಟ್ರೀಯ ಸಮಿತಿ ಆಡಳಿತ ವಿಭಾಗ ಕಾರ್ಯದರ್ಶಿ ಅಬ್ದುಲ್ ಹಕೀಂ ಪಾತೂರು ಧನ್ಯವಾದಗೈದರು. ಕೆಸಿಎಫ್ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾದ ಝಾಕಿರ್ ಚಿಕ್ಕಮಗಳೂರು ಕಾರ್ಯಕ್ರಮ ನಿರೂಪಿಸಿದರು.

error: Content is protected !! Not allowed copy content from janadhvani.com