janadhvani

Kannada Online News Paper

ಸಂತ್ರಸ್ತರಿಗೆ ಸಮಾನ ನ್ಯಾಯ ಒದಗಿಸುವಂತೆ ಕೋರಿ ಸಮಾನ ಮನಸ್ಕ ಸಂಘಟನೆಗಳಿಂದ ಮನವಿ

ಈ ಧರ್ಮಾಧಾರಿತ ತಾರತಮ್ಯ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ ಮಾತ್ರವಲ್ಲ ಇದು ಜಿಲ್ಲೆಯ ನಾಗರಿಕ ಘನತೆ, ಗೌರವಕ್ಕೆ ಕೂಡಾ ಚ್ಯುತಿ ತಂದಿದೆ.

ಮಂಗಳೂರು: ದ. ಕ. ಜಿಲ್ಲಾ ಜಾತ್ಯಾತೀತ ಪಕ್ಷಗಳ ಹಾಗೂ ಸಮಾನ ಮನಸ್ಕ ಸಂಘಟನೆಗಳ ಜಂಟಿ ವೇದಿಕೆ ವತಿಯಿಂದ ಜಿಲ್ಲೆಯಲ್ಲಿ ನಡೆಯುತ್ತಿರುವ ಕೋಮು ಸಂಬಂಧಿ ಹಿಂಸಾಚಾರವನ್ನು ತಡೆಗಟ್ಟಲು, ಸಂತ್ರಸ್ತರಿಗೆ ಸಮಾನ ನ್ಯಾಯ ಒದಗಿಸಲು ಹಾಗೂ ಸಂವಿಧಾನದ ಆಶಯಗಳನ್ನು ಪಾಲಿಸುವಂತೆ ಮಾನ್ಯ ದ.ಕ.ಜಿಲ್ಲಾಧಿಕಾರಿಗಳಾದ ಡಾ. ಕೆ. ವಿ ರಾಜೇಂದ್ರ ಅವರಿಗೆ ಮನವಿ ಸಲ್ಲಿಸಿದೆ.

ಸಂಘಟನೆಯ ಅಧ್ಯಕ್ಷರಾದ ರಮಾನಾಥ ರೈ ಹಾಗೂ ಕಾರ್ಯದರ್ಶಿ ಕೆ.ಯಾದವ ಶೆಟ್ಟಿ ಅವರ ನೇತೃತ್ವದಲ್ಲಿ ತೆರಳಿದ ನಿಯೋಗವು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಮತೀಯ ಹಿಂಸೆಯ ಘಟನೆಗಳು ಸರಣಿಯಾಗಿ ನಡೆಯುತ್ತಿವೆ. ಇದು ಅತಿರೇಕಕ್ಕೆ ತಲುಪಿ ಮೂರು ಯುವಕರ ಕೊಲೆಗಳು ನಡೆದಿರುವುದು ಜಿಲ್ಲೆಯ ಜನರು ಬೆಚ್ಚಿಬೀಳುವಂತೆ ಮಾಡಿದೆ. ಹಿಜಾಬ್ ವಿವಾದ, ದ್ವೇಷ ಭಾಷಣಗಳು, ಅನೈತಿಕ ಪೊಲೀಸ್ ಗಿರಿಯಂತಹ ಮತೀಯ ಗೂಂಡಾಗಿರಿಗಳು ಪದೇ ಪದೇ ಸಂಭವಿಸುತ್ತಿರುವಾಗಲೇ ಇದು ಅತಿರೇಕಕ್ಕೆ ತಲುಪುವ ಬಗ್ಗೆ ಜಿಲ್ಲೆಯ ಪ್ರಜ್ಞಾವಂತರು, ಜಾತ್ಯಾತೀತ ರಾಜಕೀಯ ಪಕ್ಷಗಳು, ನಾಗರಿಕ ಸಂಘಟನೆಗಳು ಬಲು ಹಿಂದೆಯೇ ತೀವ್ರ ಆತಂಕ ವ್ಯಕ್ತಪಡಿಸಿದ್ದವು.

ಆ ಸಂದರ್ಭ ಸರಕಾರ, ಜಿಲ್ಲಾಡಳಿತ ನ್ಯಾಯ ಸಮ್ಮತ ಕ್ರಮಗಳನ್ನು ಸಂವಿಧಾನದ ಆಶಯದಂತೆ ಜಾತ್ಯಾತೀತ ಮತ್ತು ಸಾಮಾಜಿಕ ನ್ಯಾಯದ ನೆಲೆಯಲ್ಲಿ ಜರಗಿಸಿದ್ದರೆ ಇಂದು ಇಂತಹ ಪ್ರಕ್ಷುಬ್ಧ ಪರಿಸ್ಥಿತಿ ನಮ್ಮ ಕರಾವಳಿಯಲ್ಲಿ ನಿರ್ಮಾಣವಾಗುವುದನ್ನು ತಡೆಯಬಹುದಿತ್ತು. ಕೋಮು ದ್ವೇಷದ ಸರಣಿ ಕೊಲೆಗಳ ಸಂದರ್ಭ ಉದ್ವಿಗ್ನ ಸ್ಥಿತಿಯನ್ನು ನಿಭಾಯಿಸಲು ಜಿಲ್ಲಾಡಳಿತ ಕೈಗೊಂಡ ಕ್ರಮಗಳು ಪೊಲೀಸ್ ಬಲವನ್ನು ಮಾತ್ರ ನೆಚ್ಚಿಕೊಂಡಿರುವುದು ವಿಷಾದನೀಯ.

ಕೊರೋನಾ ಲಾಕ್ ಡೌನ್ ಕಾಲದ ಮಾದರಿಯಲ್ಲಿ ಜನರ ಚಲನ ವಲನಗಳನ್ನು ಬಲವಂತದಿಂದ ನಿಗ್ರಹಿಸಿ ಉದ್ವಿಗ್ನತೆಯನ್ನು ತಣಿಸಲು ಯತ್ನಿಸಿರುವುದು ಒಂದು ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ಮಾರಕವಾದ ಸರ್ವಾಧಿಕಾರಿ ಧೋರಣೆಯೆಂದೇ ಹೇಳಬೇಕಾಗಿದೆ.‌ ಅದೇ ಸಂದರ್ಭ ಭಿನ್ನ ಕೋಮುಗಳ ನಡುವೆ ಅಪನಂಬಿಕೆಯನ್ನು ತೊಡೆದು ಹಾಕಲು, ಪರಸ್ಪರ ವಿಶ್ವಾಸ, ಸೌಹಾರ್ದತೆಯನ್ನು ಮರು ಸ್ಥಾಪಿಸಲು ಜಿಲ್ಲಾಡಳಿತ ಯಾವುದೇ ನಿರ್ದಿಷ್ಟ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳದಿರುವುದು ಎದ್ದು ಕಾಣಿಸುತ್ತಿರುವ ಲೋಪವಾಗಿದೆ.

ಜಿಲ್ಲಾಡಳಿತ ವತಿಯಿಂದ ನಡೆದ ಶಾಂತಿ ಸಭೆಯು ಕೇವಲ ಕಾಟಾಚಾರಕ್ಕೆ ಕಣ್ಣೊರೆಸುವ ತಂತ್ರ ಎಂಬಂತೆ ಹೆಸರಿಗೆ ಮಾತ್ರ ನಡೆಸಿರುವುದು, ರಾಜಕೀಯ ಪಕ್ಷಗಳನ್ನು ಆಹ್ವಾನಿಸದಿರುವುದು, ಉಸ್ತುವಾರಿ ಸಚಿವರ ಸಹಿತ ಸ್ಥಳೀಯ ಜನಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸದಿರುವುದನ್ನು ನಾವು ಖಂಡಿಸುತ್ತೇವೆ. ಇದು ಶಾಂತಿ ಸಭೆಯನ್ನು ನಡೆಸುವ ಸರಿಯಾದ ವಿಧಾನವೇ ಅಲ್ಲವೆಂದು ಹೇಳಬೇಕಾಗಿದೆ.

ಕ್ರಿಯೆ, ಪ್ರತಿಕ್ರಿಯೆಗಳ ಹೆಸರಿನಲ್ಲಿ ನಡೆದ ಧರ್ಮಾಧಾರಿತ ಮೂರೂ ಕೊಲೆಗಳ ತನಿಖೆ ಹಾಗೂ ಸಂತ್ರಸ್ತ ಕುಟುಂಬಗಳಿಗೆ ನೀಡಬೇಕಾದ ಸಾಂತ್ವನ ಹಾಗೂ ಪರಿಹಾರ ವಿತರಣೆಯಲ್ಲಿ ಕಣ್ಣಿಗೆ ರಾಚುವ ಬಹಿರಂಗ ತಾರತಮ್ಯ ಜಿಲ್ಲಾಡಳಿತ ಹಾಗೂ ರಾಜ್ಯ ಸರಕಾರದ ವತಿಯಿಂದ ನಡೆದಿರುವುದನ್ನು ದಕ್ಷಿಣ ಕನ್ನಡ ಜಿಲ್ಲೆಯ ಜಾತ್ಯಾತೀತ ಪಕ್ಷಗಳು, ನಾಗರಿಕ ಸಂಘಟನೆಗಳು ಒಕ್ಕೊರಲಿನಿಂದ ಖಂಡಿಸುತ್ತವೆ.

ಈ ಧರ್ಮಾಧಾರಿತ ತಾರತಮ್ಯ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ ಮಾತ್ರವಲ್ಲ ಇದು ಜಿಲ್ಲೆಯ ನಾಗರಿಕ ಘನತೆ, ಗೌರವಕ್ಕೆ ಕೂಡಾ ಚ್ಯುತಿ ತಂದಿದೆ. ಎಲ್ಲರ ಆಗ್ರಹದ ಹೊರತಾಗಿಯೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ರಾಜಧರ್ಮ ಮರೆತು ಪ್ರವೀಣ್ ನೆಟ್ಟಾರು ಮನೆಗೆ ಮಾತ್ರ ಭೇಟಿ ನೀಡಿ ಸಾಂತ್ವನ ಹೇಳಿದ್ದು, ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಮಾತ್ರ ಸರಕಾರದ ವತಿಯಿಂದ ಇಪ್ಪತ್ತೈದು ಲಕ್ಷ ರೂಪಾಯಿ ಪರಿಹಾರ ವಿತರಿಸಿರುವುದು ಮಸೂದ್ ಹಾಗೂ ಫಾಝಿಲ್ ಕುಟುಂಬಗಳನ್ನು ಕಡೆಗಣಿಸಿದ್ದು ಕರ್ನಾಟಕದಲ್ಲಿ ಎಂದೂ ನಡೆಯದ ಖೇದಕರ ವಿದ್ಯಮಾನ.

ಸ್ಥಳೀಯ ಸಂಸದ, ಶಾಸಕರುಗಳು ಇದೇ ವಿಧಾನವನ್ನು ಅನುಕರಿಸಿದ್ದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಸಂವಿಧಾನದ ಆಶಯದಂತೆ ಜಿಲ್ಲಾಡಳಿತದ ಯಂತ್ರ ಚಲಿಸುವಂತೆ ನೋಡಿಕೊಳ್ಳಬೇಕಾದ ಜಿಲ್ಲಾಧಿಕಾರಿಗಳೂ ಫಾಝಿಲ್ ಹಾಗೂ ಮಸೂದ್ ರ ಸಂತ್ರಸ್ತ ಕುಟುಂಬವನ್ನು ಭೇಟಿ ಮಾಡದಿರುವುದು, ಕೋಮು ಹಿಂಸಾಚಾರದಲ್ಲಿ ಮೃತಪಟ್ಟವರಿಗೆ ಸರಕಾರದ ವತಿಯಿಂದ ದೊರಕಬೇಕಾದ ಪರಿಹಾರ ಒದಗಿಸಲು ಪ್ರಯತ್ನ ನಡೆಸದಿರುವುದು ಸಂತ್ರಸ್ತರಿಗೆ ಹಾಗೂ ನಾಗರಿಕರಿಗೆ ಅತೀವ ನೋವನ್ನುಂಟು ಮಾಡಿದೆ.

ಈಗಲಾದರೂ ಸಂವಿಧಾನದ ಆಶಯದಂತೆ ನಡೆದು ಇಂತಹ ತಾರತಮ್ಯವನ್ನು ನಿವಾರಿಸಲು ಜಿಲ್ಲಾಡಳಿತದ ವತಿಯಿಂದ ತಾವು ಮುಂದಾಗಬೇಕು, ಸಂತ್ರಸ್ತ ಕುಟುಂಬಗಳನ್ನು ಭೇಟಿಯಾಗಿ ಅವರ ದೂರುಗಳನ್ನು ಆಲಿಸಬೇಕು. ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಸರಕಾರದ ವತಿಯಿಂದ ದೊರಕಿದ ಪರಿಹಾರ ಉಳಿದಿಬ್ಬರ ಕುಟುಂಬಗಳಿಗೆ ಒದಗಿಸಿಕೊಡಲು ನಿಯಮ ಪ್ರಕಾರ ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ನಡೆಸಬೇಕು. ಈ ಕುರಿತು ನಮ್ಮ ಮನವಿಯನ್ನು ಸರಕಾರಕ್ಕೆ ತಲುಪಿಸಬೇಕು ಎಂದು ಈ ಮೂಲಕ ತಮ್ಮಲ್ಲಿ ವಿನಂತಿಸುತ್ತೇವೆ.

ಹಾಗೆಯೆ, ಮೂರೂ ಕೊಲೆಗಳು ಉಂಟು ಮಾಡಿರುವ ಸಾಮಾಜಿಕ ಪರಿಣಾಮಗಳು ಒಂದೇ ರೀತಿಯದ್ದು. ಆದರೆ ತನಿಖೆ ಹಾಗೂ ಕಾಯ್ದೆ ಅಳವಡಿಸುವುದರಲ್ಲಿ ಮಸೂದ್ ಹಾಗೂ ಫಾಝಿಲ್ ಕೊಲೆ ಪ್ರಕರಣವನ್ನು ಕಡೆಗಣಿಸಲಾಗುತ್ತಿದೆ. ಪ್ರವೀಣ್ ನೆಟ್ಟಾರು ಪ್ರಕರಣದಲ್ಲಿ ಯುಎಪಿಎ ಕಾಯ್ದೆ ಅನ್ವಯಿಸಿರುವುದು ತನಿಖೆಯನ್ನು ಎನ್ಐಎ ಗೆ ಹಸ್ತಾಂತರಿಸಿರುವುದು ಸರಕಾರ ಈ ಪ್ರಕರಣವನ್ನು ವಿಶೇಷ ಪ್ರಕರಣವನ್ನಾಗಿ ಪರಿಗಣಿಸಿರುವುದನ್ನು ಎತ್ತಿ ತೋರಿಸುತ್ತದೆ. ಜೊತೆಗೆ ನೆಟ್ಟಾರು ಪ್ರಕರಣದ ಆರೋಪಿಗಳ ಆಸ್ತಿ ಮುಟ್ಟುಗೋಲಿನ ಕುರಿತು ಮಾತುಗಳು ಕೇಳಿಬರುತ್ತಿವೆ. ಕೋಮು ಹಿಂಸಾಚಾರ ಮರುಕಳಿಸದಂತೆ ಮಾಡಲು ಇಂತಹ ದೃಢ ಕ್ರಮಗಳು ಅಗತ್ಯ ಎಂದು ಸರಕಾರ ಭಾವಿಸುವುದಾದರೆ ನಾವದನ್ನು ಸ್ವಾಗತಿಸುತ್ತೇವೆ. ಆದರೆ ಅದೇ ಸಂದರ್ಭ ಮಸೂದ್ ಹಾಗೂ ಫಾಝಿಲ್ ಕೊಲೆ ಪ್ರಕರಣವನ್ನು ಅತಿ ಸಾಮಾನ್ಯ ಪ್ರಕರಣವಾಗಿ ಪರಿಗಣಿಸಿರುವುದು ಮತ್ತು ಕಡೆಗಣಿಸಿರುವುದು ನ್ಯಾಯೋಚಿತವಲ್ಲ.

ಈ ಮೂರೂ ಕೊಲೆಗಳು ಜಿಲ್ಲೆಯ ಮತೀಯ ಸೌಹಾರ್ದಕ್ಕೆ, ಸಹಜ ಜನ ಜೀವನಕ್ಕೆ ಸಮ ಪ್ರಮಾಣದ ಘಾಸಿಯನ್ನುಂಟು ಮಾಡಿದೆ. ಫಾಝಿಲ್ ಕೊಲೆ ಪ್ರಕರಣವಂತೂ ರಾಜಕೀಯ ಬೆಂಬಲ ಪಡೆದ ಪ್ರತೀಕಾರದ ಕೊಲೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಪ್ರಕರಣದಲ್ಲಿ ಬಂಧಿತರಾದವರ ಹಿನ್ನಲೆಯೂ ಅದನ್ನೇ ವ್ಯಕ್ತ ಪಡಿಸುತ್ತದೆ. *ಪ್ರವೀಣ್ ನೆಟ್ಯಾರು ಪ್ರಕರಣದಂತೆ ಮಸೂದ್ ಹಾಗೂ ಫಾಝಿಲ್ ಕೊಲೆ ಪ್ರಕರಣದಲ್ಲೂ ಯುಎಪಿಎ ಕಾಯ್ದೆ ಅನ್ವಯಿಸಬೇಕು, ಒಟ್ಟು ಮೂರೂ ಪ್ರಕರಣವನ್ನೂ ಎನ್ಐಎ ತನಿಖೆಗೆ ಹಸ್ತಾಂತರಿಸಬೇಕು. ಆ ಮೂಲಕ ಸರಕಾರ ಕೋಮು‌ಹಿಂಸಾಚಾರದ ಪ್ರಕರಣದಲ್ಲಿ ತಾರತಮ್ಯ ಎಸಗುವುದಿಲ್ಲ ಮತ್ತು ಕೋಮು ಹಿಂಸಾಚಾರಗಳನ್ನು ತಡೆಗಟ್ಟಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತದೆ ಎಂಬ ಸ್ಪಷ್ಟ ಸಂದೇಶ ಸಾರಬೇಕೆಂದೂ ದಕ್ಷಿಣ ಕನ್ನಡ ಜಿಲ್ಲೆಯ ಸರ್ವ ನಾಗರಿಕರ ಪರವಾಗಿ ನಮ್ಮ ಒಕ್ಕೊರಲ ಆಗ್ರಹ. ಈ ಕುರಿತು ನಮ್ಮ ಈ ಅಭಿಪ್ರಾಯ ಹಾಗೂ ಮನವಿಯನ್ನು ರಾಜ್ಯ ಸರಕಾರಕ್ಕೆ ತಲುಪಿಸಬೇಕೆಂದು ತಮ್ಮಲ್ಲಿ ಕಳಕಳಿಯಿಂದ ವಿನಂತಿಸುತ್ತಿದ್ದೇವೆ.

ನಿಯೋಗದಲ್ಲಿ ಪಾಲ್ಗೊಂಡವರು, ಬಿ ರಮಾನಾಥ ರೈ (ಮಾಜಿ ಸಚಿವರು)
ಕೆ ಯಾದವ ಶೆಟ್ಟಿ (ಸಿಪಿಐಎಂ ದ. ಕ. ಜಿಲ್ಲಾ ಕಾರ್ಯದರ್ಶಿ)
ಮುನೀರ್ ಕಾಟಿಪಳ್ಳ ( ರಾಜ್ಯಾಧ್ಯಕ್ಷರು ಡಿವೈಎಫ್ಐ)
ನಜೀರ್ ಉಳ್ಳಾಲ್ (ಜೆಡಿಎಸ್ ಜಿಲ್ಲಾ ನಾಯಕರು)
ಕರುಣಾಕರ ಮಾರಿಪಳ್ಳ ( ಸಿಪಿಐ ಮಂಗಳೂರು ತಾಲೂಕು ಕಾರ್ಯದರ್ಶಿ)
ಅಭಯ ಚಂದ್ರ ಜೈನ್ (ಮಾಜಿ ಸಚಿವರು)
ಎಂ ದೇವದಾಸ್ ( ರಾಜ್ಯ ಕಾರ್ಯದರ್ಶಿ, ದಲಿತ ಸಂಘರ್ಷ ಸಮಿತಿ)
ಹರೀಶ್ ಕುಮಾರ್ (MLC. ಅಧ್ಯಕ್ಷರು ದ.ಕ. ಜಿಲ್ಲಾ ಕಾಂಗ್ರೆಸ್)
ಮಂಜುನಾಥ ಭಂಡಾರಿ (MLC)
ಬಿ ಇಬ್ರಾಹಿಂ (ಮಾಜಿ ರಾಜ್ಯ ಸಭಾ ಸದಸ್ಯರು)
ಯಶವಂತ ಮರೋಳಿ (ಅಧ್ಯಕ್ಷರು, ಅಖಿಲ ಭಾರತ ವಕೀಲರ ಸಂಘ ದಕ್ಷಿಣ ಕನ್ನಡ)
ಎಂ ಜಿ ಹೆಗ್ಡೆ (ಸಾಮಾಜಿಕ ಕಾರ್ಯಕರ್ತರು)

ಮುಸ್ಲಿಂ ಸೆಂಟ್ರಲ್ ಕಮಿಟಿ
ಮಮ್ತಾಝ್ ಅಲಿ, ಇಬ್ರಾಹಿಂ ಕೋಡಿಜಾಲ್, ಯುಪಿ ಇಬ್ರಾಹಿಂ, ಸಿ ಎಂ ಮುಸ್ತಫಾ (ಮುಸ್ಲಿಂ ಸೆಂಟ್ರಲ್ ಕಮಿಟಿ)

ಮಾಜಿ ಮೇಯರ್ ಗಳು
ಕೆ ಅಶ್ರಫ್, ಶಶಿಧರ್ ಹೆಗ್ಡೆ, ಭಾಸ್ಕರ ಮೊಯ್ಲಿ

ವಿವಿಧ ಪಕ್ಷಗಳ ಪ್ರತಿನಿಧಿಗಳು

ಶಾಲೆಟ್ ಪಿಂಟೊ (ಅಧ್ಯಕ್ಷರು, ಮಹಿಳಾ ಕಾಂಗ್ರೆಸ್)
ಸುನಿಲ್ ಕುಮಾರ್ ಬಜಾಲ್ (ಸಿಪಿಐಎಂ)
ಜೆ ಬಾಲಕೃಷ್ಣ ಶೆಟ್ಟಿ (ಸಿಪಿಐಎಂ)
ಎಚ್ ವಿ ರಾವ್ (ಸಿಪಿಐ)
ಶಾಹುಲ್ ಹಮೀದ್ (ಅಧ್ಯಕ್ಷರು, ಅಲ್ಪ ಸಂಖ್ಯಾತ ಘಟಕ, ಜಿಲ್ಲಾ ಕಾಂಗ್ರೆಸ್)
ರಕ್ಷಿತ್ ಸುವರ್ಣ (ಅಧ್ಯಕ್ಷರು, ಯುವ ಜನತಾ ದಳ ದ.ಕ.)
ಫೈಝಲ್ (ಅಧ್ಯಕ್ಷರು ವಿದ್ಯಾರ್ಥಿ ಜನತಾ ದಳ ದ.ಕ.)
ಸುಶೀಲ್ ನೊರಾನ್ಹ (ಜೆಡಿಎಸ್)
ಬೇಬಿ ಕುಂದರ್ (ಬಂಟ್ವಾಳ ಬ್ಲಾಕ್ ಕಾಂಗ್ರೆಸ್)
ಶಬ್ಬೀರ್ ಸಿದ್ದಕಟ್ಟೆ (ಪ್ರಧಾನ ಕಾರ್ಯದರ್ಶಿ, ಜಿಲ್ಲಾ ಕಾಂಗ್ರೆಸ್)

ಮನಪಾ ಹಾಲಿ, ಮಾಜಿ ಸದಸ್ಯರು
ನವೀನ್ ಡಿಸೋಜ (ಹಾಲಿ)
ಮೊಹಮ್ಮದ್ ಕುಂಜತ್ತಬೈಲ್ (ಮಾಜಿ ಉಪ ಮೇಯರ್)
ಪ್ರತಿಭಾ ಕುಳಾಯಿ (ಮಾಜಿ ಸದಸ್ಯರು)
ಪ್ರಕಾಶ್ ಸಾಲ್ಯಾನ್ (ಮಾಜಿ ಸದಸ್ಯರು)
ಜಯಂತಿ ಬಿ ಶೆಟ್ಟಿ (ಮಾಜಿ ಸದಸ್ಯರು)
ಅಬೂಬಕ್ಕರ್ ಕುದ್ರೋಳಿ (ಮಾಜಿ‌ ಸದಸ್ಯರು)

ವಿವಿಧ ಸಂಘಟನೆಗಳ ಪ್ರತಿನಿಧಿಗಳು

ಯಾಸೀನ್ ಕುದ್ರೋಳಿ (ಅಧ್ಯಕ್ಷರು, ಮುಸ್ಲಿಂ ವರ್ತಕರ ಸಂಘ)
ಭಾರತಿ ಬೋಳಾರ್ (ಅಧ್ಯಕ್ಷರು, ಜನವಾದಿ ಮಹಿಳಾ ಸಂಘಟನೆ)
ಮಂಜುಳಾ ನಾಯಕ್ (ಸಾಮರಸ್ಯ ಮಂಗಳೂರು)
ರುಘು ಎಕ್ಕಾರು (ಸಂಚಾಲಕರು, ದಲಿತ ಸಂಘರ್ಷ ಸಮಿತಿ)
ಬಿ ಕೆ ಇಮ್ತಿಯಾಜ್ (ಅಧ್ಯಕ್ಷರು dyfi ದಕ್ಷಿಣ ಕನ್ನಡ)
ಸಂತೋಷ್ ಬಜಾಲ್ (ಕಾರ್ಯದರ್ಶಿ dyfi ದಕ್ಷಿಣ ಕನ್ನಡ)
ಸರೋಜಿನಿ (ಮಹಿಳಾ ವಿಭಾಗ, ದಲಿತ ಸಂಘರ್ಷ ಸಮಿತಿ)
ಸಮರ್ಥ್ ಭಟ್ (ಸಾಮಾಜಿಕ ಕಾರ್ಯಕರ್ತರು)

error: Content is protected !! Not allowed copy content from janadhvani.com