janadhvani

Kannada Online News Paper

ಹಿಂದೂ ಮಹಾಸಭಾ ಉತ್ತರಪ್ರದೇಶ ರಾಜ್ಯಾಧ್ಯಕ್ಷ ಗುಂಡೇಟಿನಲ್ಲಿ ಸಾವು

ಲಕ್ನೋ, ಫೆ.2- ಅಖಿಲಭಾರತ ಹಿಂದೂ ಮಹಾಸಭಾದ ಉತ್ತರಪ್ರದೇಶ ರಾಜ್ಯಾಧ್ಯಕ್ಷ ರಣಜಿತ್ ಬಚನ್ (40) ಅವರನ್ನು ದುಷ್ಕರ್ಮಿಗಳು ಲಕ್ನೋದಲ್ಲಿ ಇಂದು ಬೆಳಗ್ಗೆ ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ಹರ್ಜಾಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರದೇಶದಲ್ಲಿ ರಣಜಿತ್ ಇಂದು ಬೆಳಗ್ಗೆ ಎಂದಿನಂತೆ ಬೆಳಗಿನ ವಾಯು ವಿಹಾರದಲ್ಲಿ ತೊಡಗಿದ್ದಾಗ ದ್ವಿಚಕ್ರ ವಾಹನದಲ್ಲಿ ಬಂದ ದುಷ್ಕರ್ಮಿಗಳು ತೀರಾ ಸನಿಹದಿಂದ ಅವರ ಮೇಲೆ ಗುಂಡು ಹಾರಿಸಿ ಪರಾರಿಯಾದರು.

ರಂಜಿತ್ ತಲೆಗೆ ಹಲವು ಬುಲೆಟ್‌ಗಳು ತಗಲಿದ್ದ ಹಿನ್ನೆಲೆಯಲ್ಲಿ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ನಗರದ ಜನನಿಬಿಡ ಪ್ರದೇಶ ಹಝ್ರತ್‌ಗಂಜ್‌ನಲ್ಲಿ ಹತ್ಯೆ ಘಟನೆ ನಡೆದಿದೆ. ಭಾರತೀಯ ಹಿಂದೂ ಮಹಾಸಭಾ ಸಂಘಟನೆಗೆ ಸೇರುವ ಮೊದಲು ಸಮಾಜವಾದಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು. ಹತ್ಯೆ ಪ್ರಕರಣದ ತನಿಖೆ ನಡೆಸಲು ಆರು ಪೊಲೀಸರ ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕೌಟುಂಬಿಕ ಕಲಹ ಮತ್ತು ಕೆಲವರೊಂದಿಗೆ ದ್ವೇಷ ಕಟ್ಟಿಕೊಂಡಿದ್ದ ರಂಜಿತ್ ಬಚನ್ ಹತ್ಯೆಗೆ ಹಳೇ ವೈಷಮ್ಯವೇ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

ಇತ್ತೀಚೆಗಿನ ದಿನಗಳಲ್ಲಿ ಎರಡನೇ ಬಾರಿ ಹಿಂದೂ ಸಂಘಟನೆಗೆ ಸೇರಿದ ನಾಯಕನನ್ನು ಲಕ್ನೋದಲ್ಲಿ ಹತ್ಯೆಗೈಯ್ಯಲಾಗಿದೆ. ಅಕ್ಟೋಬರ್‌ನಲ್ಲಿ ಹಿಂದೂ ಸಮಾಜ ಪಾರ್ಟಿ ಅಧ್ಯಕ್ಷ ಕಮಲೇಶ್ ತಿವಾರಿ ಅವರನ್ನು ಅವರ ಮನೆಯಲ್ಲೇ ದುಷ್ಕರ್ಮಿಗಳು ಮುಖಕ್ಕೆ ಗುಂಡಿಟ್ಟು, ಇರಿದು ಸಾಯಿಸಿದ್ದರು.

error: Content is protected !! Not allowed copy content from janadhvani.com