ಕುಪ್ಪೆ ಪದವು:ಕೋವಿಡ್ 19 ನ ಸಂದಿಘ್ನ ಪರಿಸ್ಥಿತಿಯಲ್ಲಿ ವಿಶ್ವವೇ ಬೆಚ್ಚಿ ಬಿದ್ದು,ಹಲವಾರು ವಿಪತ್ತುಗಳು ಕಣ್ಣ ಮುಂದೆ ನಡೆಯುತ್ತಿರುವ ಪ್ರಸ್ತುತ ಸನ್ನಿವೇಶದಲ್ಲಿ ಸೃಷ್ಟಿಕರ್ತನಾದ ಅಲ್ಲಾಹನ ಸಂಪ್ರೀತಿ ಗಳಿಸುವ ಮೂಲಕ ಇಸ್ಲಾಮಿನ ನೈಜ ಪರಂಪರೆಗೆ ಮರಳೋಣ ಎಂದು ಬದ್ರಿಯಾ ಜುಮಾ ಮಸ್ಜಿದ್ ಕುಪ್ಪೆ ಪದವು ಖತೀಬರಾದ ಅಬೂ ಝೈದ್ ಶಾಫಿ ಮದನಿ ಕರಾಯ ಜುಮಾ ನಂತರದ ಪ್ರಭಾಷಣದಲ್ಲಿ ತಿಳಿಸಿದರು.
ಜುಮುಅ ಖುತುಬಾದ ಸಾರಾಂಶವನ್ನು ವಿವರಿಸುತ್ತಾ, ನೆರೆ ಹೊರೆಯವರನ್ನು ಗೌರವಿಸುವ ಮೂಲಕ ಈಮಾನ್ ಸದೃಢಗೊಳಿಸಬೇಕಾಗಿದೆ ಎಂದ ಅವರು, ದಿನದ 5 ಹೊತ್ತಿನ ನಮಾಝಿನ ಗೌರವತೆಯ ಬಗ್ಗೆ ಅರ್ಥ ಗಂಭೀರವಾಗಿ ತಿಳಿಸಿದರು. ಪರಸ್ಪರ ಪ್ರೀತಿ, ವಿಶ್ವಾಸ, ಸಂಯಮ, ಸೌಹಾರ್ದತೆಯಿಂದ ಬಾಳುವುದರೊಂದಿಗೆ ನೈಜ ಮಾನವರಾಗಬೇಕೆಂದರು.
ಹಾದಿ ತಪ್ಪುತ್ತಿರುವ ಯುವ ಜನತೆಗೆ ದಾರಿ ತೋರಿಸುತ್ತಿರುವ ಧರ್ಮವಾಗಿದೆ ಇಸ್ಲಾಂ. ನೈಜ ಇಸ್ಲಾಮಿನ ತತ್ವ ಆದರ್ಶಗಳನ್ನು ಪಾಲಿಸುವ ಮೂಲಕ ಯುವ ಸಮುದಾಯ ಅಲ್ಲಾಹನ ಮಸೀದಿಯ ಸಾಮೀಪ್ಯ ಉಳ್ಳವರಾಗಬೇಕೆಂದು ತಿಳಿಸಿದರು.
ಸರ್ವ ವಿಪತ್ತುಗಳ ತಡೆಗೆ ಪ್ರಾರ್ಥನೆಯೇ ಅತೀ ದೊಡ್ಡ ಅಸ್ತ್ರವಾಗಿದ್ದು ಆದುದರಿಂದ ಮನನೊಂದು ಪ್ರಾರ್ಥಿಸುವುದರೊಂದಿಗೆ ಕೊರೋನಾ ಮುಂಜಾಗ್ರತಾ ಕ್ರಮವಾಗಿ ಸರ್ಕಾರ ಆದೇಶಿಸಿದ ಪಾಲನೆಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವ ಮೂಲಕ ಸ್ವಸ್ತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕೆಂದು ಕರೆ ನೀಡಿದರು.