janadhvani

Kannada Online News Paper

ಕೊರೋನಾ: ದೇಶದಲ್ಲಿ ಬಲಿಯಾದವರ ಸಂಖ್ಯೆ 10ಕ್ಕೆ ಏರಿಕೆ- 500 ಕ್ಕೂ ಮಿಕ್ಕವರಿಗೆ ಸೋಂಕು ದೃಢ

ನವದೆಹಲಿ,ಮಾ.24: ದೇಶದಲ್ಲಿ ಕೊರೋನಾ ವೈರಸ್​​​ಗೆ ಬಲಿಯಾಗುವವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಇಂದು ಮುಂಬೈನಲ್ಲಿ 65 ವರ್ಷದ ವ್ಯಕ್ತಿ ಕೊರೋನಾ ವೈರಸ್​​ನಿಂದಾಗಿ ಮೃತಪಟ್ಟಿದ್ದು, ದೇಶದಲ್ಲಿ ಬಲಿಯಾದವರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಸುಮಾರು 500 ಕ್ಕೂ ಹೆಚ್ಚು ಮಂದಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ಮುಂಬೈನಲ್ಲಿ ಕೊರೋನಾಗೆ ಬಲಿಯಾದ ವ್ಯಕ್ತಿ ಯುಎಇ ಯಿಂದ ಅಹಮದಾಬಾದ್​​ಗೆ ಮರಳಿದ್ದರು ಎಂದು ತಿಳಿದು ಬಂದಿದೆ. ಬಳಿಕ ಅವರಿಗೆ ಜ್ವರ, ಕೆಮ್ಮು ಮತ್ತು ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು ಎಂದು ಬಿಎಂಸಿ ತಿಳಿಸಿದೆ. ಜೊತೆಗೆ ಬಿಪಿ, ಮಧುಮೇಹದಿಂದಲೂ ಆ ವ್ಯಕ್ತಿ ಬಳಲುತ್ತಿದ್ದರು ಎನ್ನಲಾಗಿದೆ. ಆ ಮೂಲಕ ಮಹಾರಾಷ್ಟ್ರದಲ್ಲಿ ಕೊರೋನಾ ವೈರಸ್​​ನಿಂದ ಮೃತಪಟ್ಟವರ ಸಂಖ್ಯೆ 3ಕ್ಕೆ ಏರಿದೆ.

ಇನ್ನು, ಈಶಾನ್ಯ ರಾಜ್ಯ ಮಣಿಪುರದಲ್ಲಿ ಮೊದಲ ಕೊರೋನಾ ಪ್ರಕರಣ ಪತ್ತೆಯಾಗಿದೆ. 23 ವರ್ಷದ ಮಹಿಳೆಯಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಸೋಂಕಿತ ಮಹಿಳೆಯು ಇತ್ತೀಚೆಗೆ ಇಂಗ್ಲೆಂಡ್​ನಿಂದ ವಾಪಸ್​ ಬಂದಿದ್ದಳು. ದೆಹಲಿ ಮತ್ತು ಗುಹಾವಟಿ ವಿಮಾನ ನಿಲ್ದಾಣಗಳ ಮೂಲಕ ಇಂಫಾಲ್​ಗೆ ಮರಳಿದ್ದಳು ಎಂದು ತಿಳಿದು ಬಂದಿದೆ.

ಇನ್ನು, ಭಾರತದಲ್ಲಿ ಕೊರೋನಾ ಪ್ರಭಾವ ಹೆಚ್ಚಾಗುತ್ತಲೇ ಇದ್ದು, ಜನರಲ್ಲಿ ಆತಂಕ ಮನೆ ಮಾಡಿದೆ. ಈವರೆಗೆ ಸುಮಾರು 500 ಕ್ಕೂ ಹೆಚ್ಚು ಜನರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಈ ಕೊರೋನಾ ನಿಗ್ರಹಕ್ಕಾಗಿ ಇಡೀ ದೇಶಾದ್ಯಂತ ಲಾಕ್​ಡೌನ್​​ ಘೋಷಣೆ ಮಾಡಲಾಗಿದೆ. 30 ರಾಜ್ಯಗಳ 548 ಜಿಲ್ಲೆಗಳನ್ನು ಮಾರ್ಚ್​​ 31ರವರೆಗೆ ಲಾಕ್​ಡೌನ್​ ಮಾಡಲಾಗಿದೆ. ಅಗತ್ಯ ಮತ್ತು ತುರ್ತು ಸೇವೆ ಹೊರತುಪಡಿಸಿ ಯಾವುದೇ ಸೇವೆ ಲಭ್ಯವಿರುವುದಿಲ್ಲ. ಇಂದು ಮಧ್ಯರಾತ್ರಿಯಿಂದ ಎಲ್ಲಾ ದೇಶೀಯ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ.

error: Content is protected !! Not allowed copy content from janadhvani.com