janadhvani

Kannada Online News Paper

ಹೊಸ ರೂಪದಲ್ಲಿ ಆನ್‌ಲೈನ್‌ ವಂಚನೆ- ಗ್ರಾಹಕರಿಗೆ ಎಚ್ಚರಿಕೆ ನೀಡಿದ ಎಸ್‌ಬಿಐ

ಇತ್ತೀಚಿಗಷ್ಟೆ WhatsApp ನಲ್ಲಿ ಬಂದಂತಹ ಒಂದು ಲಿಂಕ್‌ ಕ್ಲಿಕ್ ಮಾಡಿ ಬರೋಬ್ಬರಿ 21 ಲಕ್ಷ ರೂಪಾಯಿ ಕಳೆದುಕೊಂಡಿರುವ ಘಟನೆ ಇತ್ತೀಚೆಗೆ ನಡೆದಿದೆ.

ಫೇಸ್‌ಬುಕ್ (Facebook) , ವಾಟ್ಸಾಪ್ (WhatsApp) ಮತ್ತು ಟ್ವಿಟ್ಟರ್ (Twitter) ನಂತಹ ಸಾಮಾಜಿಕ ಜಾಲತಾಣಗಳ ಮೂಲಕ ಗ್ರಾಹಕರನ್ನು ಟಾರ್ಗೆಟ್ ಮಾಡಲಾಗುತ್ತಿದ್ದು, ಎಸ್‌ಬಿಐ (SBI) ತನ್ನ 67ನೇ ವಾರ್ಷಿಕೋತ್ಸವದಂದು ತನ್ನ ಗ್ರಾಹಕರಿಗೆ 6,000 ರೂಪಾಯಿ ನೀಡುತ್ತಿದೆ ಎಂಬ ಸಂದೇಶವು ವಂಚಕರಿಂದ ರವಾನೆಯಾಗುತ್ತಿದೆ.

ಭಾರತದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) ಸ್ಥಾಪನೆಯಾಗಿ 67 ವರ್ಷಗಳಾಗಿವೆ. ಈ ಸಂಭ್ರಮಾಚರಣೆಯ ಭಾಗವಾಗಿ ದೇಶದ ಪ್ರತಿ ಗ್ರಾಹಕರಿಗೆ ಉಚಿತವಾಗಿ 6,000 ರೂ. ಹಣವನ್ನು ನಿಡಲಾಗುತ್ತಿದೆ. ಇದಕ್ಕೆ ನೀವು ಮಾಡಬೇಕಿರುವುದು ಇಷ್ಟೇ. ನಿಮ್ಮ ಹೆಸರನ್ನು ಮಾತ್ರ ನಮೂದಿಸಿ ಎಂಬ ಸಂದೇಶದವನ್ನು ನೀವು ಸ್ವೀಕರಿಸಿದ್ದೀರಾ?. ಹಾಗಿದ್ದರೆ, ಖಂಡಿತವಾಗಿಯೂ ಈ ಕೂಡಲೇ ಎಚ್ಚೆತ್ತುಕೊಳ್ಳಿ. ಏಕೆಂದರೆ, ಇಂತಹದೊಂದು ವಂಚನೆಯನ್ನು ನೋಡಿ ಎಸ್‌ಬಿಐ ಬ್ಯಾಂಕ್ ಗಾಬರಿಯಾಗಿದೆ. ದೇಶದ ಹಲವು ಜನರು ಇಂತಹ ಸಂದೇಶವನ್ನು ಸ್ವೀಕರಿಸಿ ವಂಚನೆಗೆಗೆ ಒಳಗಾಗಿರುವುದನ್ನು ಗಮನಿಸಿರುವ ಎಸ್‌ಬಿಐ ಬ್ಯಾಂಕ್ ಅಧಿಕಾರಿಗಳು ಈ ಬಗ್ಗೆ ಟ್ವೀಟ್ ಮಾಡಿ ಎಚ್ಚರಿಸಿದ್ದಾರೆ.

ಅನೇಕರು ವಂಚಕರ ಸಂದೇಶಕ್ಕೆ ಪ್ರತಿಕ್ರಿಯಿಸಿ, ತಮ್ಮ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದಾರೆ. ಅಲ್ಲದೆ ಅನೇಕ ಲಿಂಕ್‌ಗಳನ್ನು ಕ್ಲಿಕ್ ಮಾಡುವುದರ ಜೊತೆಗೆ ಗ್ರಾಹಕರ ಹೆಸರು, ವಿಳಾಸ, ಆಧಾರ್ ಸಂಖ್ಯೆ, ಕ್ರೆಡಿಟ್ ಕಾರ್ಡ್ ಸಂಖ್ಯೆ ಇತ್ಯಾದಿ ವೈಯಕ್ತಿಕ ಮಾಹಿತಿಯನ್ನು ವಂಚಕರೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಹೀಗೆ ಮಾಡುವುದರಿಂದ ಲಾಭಯಗಳಿಸುವ ಬದಲು ಅವರ ಸಂಪಾದನೆಯು ಒಂದೇ ಕ್ಷಣದಲ್ಲಿ ಮಾಯವಾಗಲಿದೆ.

ಜನರನ್ನು ಮೋಸಗೊಳಿಸಲು ಮತ್ತು ಅವರ ಗಳಿಕೆಯನ್ನು ಕದಿಯಲು ವಂಚಕರು ಹೊಸ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಇವುಗಳಲ್ಲಿ ಸಂದೇಶ ಕಳುಹಿಸುವ ಮೂಲಕ ಜನರನ್ನು ವಂಚಿಸುವುದು ಸಾಮಾನ್ಯ ವಿಧಾನಗಳಲ್ಲಿ ಒಂದಾಗಿದೆ. ಸಂದೇಶದ ಮೂಲಕ ಲಿಂಕ್ ಅನ್ನು ಕಳುಹಿಸಿ ಖಾಸಗಿ ಮಾಹಿತಿಗಳನ್ನು ಪಡೆದು ವಂಚಿಸಿರುವ ಹಲವು ಘಟನೆಗಳು ನಡೆದಿವೆ.

ಇತ್ತೀಚಿಗಷ್ಟೆ WhatsApp ನಲ್ಲಿ ಬಂದಂತಹ ಒಂದು ಲಿಂಕ್‌ ಕ್ಲಿಕ್ ಮಾಡಿ ಬರೋಬ್ಬರಿ 21 ಲಕ್ಷ ರೂಪಾಯಿ ಕಳೆದುಕೊಂಡಿರುವ ಭಯಾನಕ ಘಟನೆಯೊಂದು ಆಂಧ್ರ ಪ್ರದೇಶದಲ್ಲಿ ವರದಿಯಾಗಿದೆ. WhatsApp ನಲ್ಲಿ ಅನಾಮಿಕರು ಕಳುಹಿಸಿದ ವಂಚನೆಯ ಲಿಂಕ್ ಮೇಲೆ ಕ್ಲಿಕ್ ಮಾಡಿದ ಆಂಧ್ರ ಪ್ರದೇಶದ ಮದನಪಲ್ಲೆ ಪಟ್ಟಣದ ನಿವೃತ್ತ ಶಿಕ್ಷಕಿಯೋರ್ವರ ಬ್ಯಾಂಕ್ ಖಾತೆಯಿಂದ 21 ಲಕ್ಷ ರೂಪಾಯಿಯನ್ನು ಎಗರಿಸಲಾಗಿದ್ದು, ಸ್ಮಾರ್ಟ್‌ಫೋನ್, ಸೈಬರ್ ಸುರಕ್ಷತೆ ಮತ್ತು ಆಧುನಿಕ ತಂತ್ರಜ್ಞಾನದ ಅರಿವಿಲ್ಲದಿದ್ದರೆ ನಮ್ಮ ಜೀವನ ಹೇಗೆ ಸರ್ವನಾಶವಾಗುತ್ತದೆ ಎಂಬುದಕ್ಕೆ ಇದೊಂದು ದೊಡ್ಡ ನಿದರ್ಶನವಾಗಿದೆ.

ಏನಿದು WhatsApp ಲಿಂಕ್ ವಂಚನೆ?
WhatsApp ಬಳಕೆದಾರರಿಗೆ ಆಸೆ ಹುಟ್ಟಿಸುವಂತಹ ಲಿಂಕ್‌ಗಳನ್ನು ಕಳುಹಿಸುವ ಮೂಲಕ ವಂಚನೆ ಎಸಗುತ್ತಿರುವ ಹಲವಾರು ಪ್ರಕರಣಗಳು ನಡೆದಿವೆ. ವಂಚಕರು ದುಬಾರಿ ಉಡುಗೊರೆಗಳನ್ನು ನೀಡುವುದಾಗಿ ಭರವಸೆ ನೀಡುವ ನಕಲಿ ಲಿಂಕ್‌ಗಳನ್ನು ಹಂಚಿಕೊಂಡಿದ್ದಾರೆ. ಈ ಸ್ಪ್ಯಾಮ್ ಲಿಂಕ್‌ಗಳು ವಿಂಡೋಸ್ ಪಿಸಿ, ಆಂಡ್ರಾಯ್ಡ್ ಮತ್ತು ಐಒಎಸ್ ಸ್ಮಾರ್ಟ್‌ಫೋನ್‌ಗಳಿಗೆ ವೈರಸ್ ಅನ್ನು ತರುತ್ತಿದೆ ಎಂದು CNBC ವರದಿ ಮಾಡಿದೆ.

ಈ ಹಗರಣದಲ್ಲಿ ಕೆಲವರು ದುಬಾರಿ ಉಡುಗೊರೆಗಳ ಆಸೆಗೆ ಬಿದ್ದು ತಮ್ಮ ಬ್ಯಾಂಕ್ ಖಾತೆಯ ವಿವರವನ್ನು ನೀಡಿ ಹಣ ಕಳೆದುಕೊಂಡಿದ್ದರೆ, ಮತ್ತೆ ಹಲವರು ತಮ್ಮ ವೈಯಕ್ತಿಕ ಡೇಟಾವನ್ನು ಹಂಚಿಕೊಂಡಿದ್ದಾರೆ. ಇವೆರಡನ್ನೂ ಮಾಡದಂತಹ ಜನರ ಸ್ಮಾರ್ಟ್‌ಫೋನ್ ಅನ್ನೇ ಸಂಪೂರ್ಣ ನಿಯಂತ್ರಣಕ್ಕೆ ತೆಗೆದುಕೊಂಡು ಸಹ ವಂಚನೆ ಎಸಗಿರುವ ಘಟನೆಗಳು ಹಲವಾರು ನಡೆದಿವೆ. ಇದನ್ನು ಒಟ್ಟಾರೆಯಾಗಿ WhatsApp ಲಿಂಕ್ ವಂಚನೆ ಎಂದು ಗುರುತಿಸಲಾಗಿದೆ.

WhatsApp ಲಿಂಕ್ ಕ್ಲಿಕ್ ಮಾಡಿದರೆ ಏನಾಗುತ್ತದೆ?
ವಂಚಿಸುವ ಸಲುವಾಗಿಯೇ ವಂಚಕರು ದುಬಾರಿ ಉಡುಗೊರೆಗಳನ್ನು ನೀಡುವುದಾಗಿ ಭರವಸೆ ನೀಡುವ ನಕಲಿ ಲಿಂಕ್‌ಗಳನ್ನು ಕಳುಹಿಸುತ್ತಾರೆ. ಈ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಿದರೆ, ಸಮೀಕ್ಷೆಯನ್ನು ಭರ್ತಿ ಮಾಡಿ ಮತ್ತು ಬಹುಮಾನವನ್ನು ಗೆಲ್ಲಲು ಹೇಳುವ ವೆಬ್‌ಸೈಟ್ ತೆರೆಯುತ್ತದೆ.ಬಳಕೆದಾರರು ಪ್ರಶ್ನೆಗಳಿಗೆ ಉತ್ತರಿಸಿದ ನಂತರ, ಹೆಸರು, ವಯಸ್ಸು, ವಿಳಾಸ, ಬ್ಯಾಂಕ್ ಮಾಹಿತಿ ಮತ್ತು ಇತರ ವಿವರಗಳಂತಹ ಕೆಲವು ವಿವರಗಳನ್ನು ಭರ್ತಿ ಮಾಡಲು ಅವರನ್ನು ಕೇಳಲಾಗುತ್ತದೆ.

ಬಳಕೆದಾರರು ಎಲ್ಲಾ ವಿವರಗಳನ್ನು ನಮೂದಿಸಿದ ನಂತರ ಅವರಿಗೆ ಭಾರೀ ಹಣವನ್ನು ಗೆದ್ದಿರುವ ಆಸೆ ತೋರಿಸಿ ಮೋಸ ಮಾಡಲಾಗುತ್ತಿದೆ. ಇದು ಒಂದೆಡೆಯಾದರೆ, ಸ್ಕ್ಯಾಮರ್‌ಗಳು ಡಾರ್ಕ್ ವೆಬ್‌ನಲ್ಲಿನ ಬಳಕೆದಾರರ ವಿವರಗಳನ್ನು ಸಹ ಮಾರಾಟ ಮಾಡುತ್ತಿದ್ದಾರೆ. ಇಲ್ಲಿನ ಕಳ್ಳ ಸೈಬರ್ ಕ್ರಮಿನಲ್‌ಗಳು ತಮ್ಮ ಬಳಿ ಇರುವ ಮಾಹಿತಿಯ ಸಹಾಯದಿಂದ ಸ್ಮಾರ್ಟ್‌ಫೋನ್‌ಗಳನ್ನೇ ಹ್ಯಾಕ್ ಮಾಡುವಷ್ಟು ಸಮರ್ಥರಿದ್ದಾರೆ.

ಒಂದು ಲಿಂಕ್ ನಿಂದ ಸ್ಮಾರ್ಟ್‌ಫೋನ್‌ ಹ್ಯಾಕ್ ಮಾಡಬಹುದೇ?

ಹೌದು, ಖಂಡಿತವಾಗಿಯೂ ಸಾಧ್ಯವಿದೆ. Whatsapp ನಲ್ಲಿ ಅಥವಾ ಇನ್ಯಾವುದೇ ತಾಣದಲ್ಲಿ ಬಂದಂತಹ ಲಿಂಕ್ ಮೂಲಕ ಸ್ಮಾರ್ಟ್‌ಫೋನ್ ಅನ್ನು ಹ್ಯಾಕ್ ಮಾಡುವುದು ಸಾಧ್ಯವಾಗುತ್ತದೆ. ಆದರೆ, ಇದು ಸ್ವಲ್ಪ ಕಷ್ಟಸಾಧ್ಯವಾಗಿರುವುದರಿಂದ ಮಾಲ್‌ವೇರ್, ಆಡ್‌ವೇರ್ ಅಥವಾ PUA ಗಳಿಂದ ಸೈಬರ್ ಕ್ರಿಮಿನಲ್‌ಗಳು ನಮ್ಮ ಸ್ಮಾರ್ಟ್‌ಫೋನ್ ಅನ್ನು ದೂರದಿಂದಲೇ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಶಕ್ತರಾಗಿದ್ದಾರೆ.

anydesk ಸಾಫ್ಟ್‌ವೇರ್ ಮೂಲಕ ಒಂದು ಕಂಪ್ಯೂಟರ್ ಸ್ಕ್ರೀನ್ ಅನ್ನು ಹೇಗೆ ಮತ್ತೊಬ್ಬರು ದೂರದಲ್ಲಿ ಎಲ್ಲೋ ಕುಳಿತು ನಿಯಂತ್ರಿಸುವ ರೀತಿಯಲ್ಲಿ ನಮ್ಮ ಸ್ಮಾರ್ಟ್‌ಫೋನ್ ಅನ್ನು ಕ್ರಿಮಿನಲ್‌ಗಳು ದೂರದಿಂದಲೇ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಾರೆ. ಇದಕ್ಕಾಗಿ ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ನಿಮಗೆ ತಿಳಿಯದಂತಹ ಮಾಲ್‌ವೇರ್ ಒಂದು ಅವರಿಗೆ ಸಹಾಯ ಮಾಡುತ್ತಿರುತ್ತದೆ. ಇಷ್ಟು ಸಿಕ್ಕರೆ ಸಾಕು ನಿಮ್ಮ ಬ್ಯಾಂಕ್ ವ್ಯವಹಾರಗಳ ಮಾಹಿತಿ ಎಲ್ಲವೂ ಅವರ ಕೈಯಲ್ಲಿರುತ್ತದೆ.

ಆನ್‌ಲೈನ್ ನಲ್ಲಿ ವಂಚನೆಯಾದರೆ ಹಣ ವಾಪಸ್ ಸಿಗುವ ಸಾಧ್ಯತೆ ಇದೆಯೇ.. ?
ನಿಮ್ಮನ್ನು ಪಕ್ಕದಲ್ಲಿರುವ ವ್ಯಕ್ತಿಯೋರ್ವ ಮೋಸಗೊಳಿಸದರೆ ಪೊಲೀಸರು ಅವನನ್ನು ಪತ್ತೆ ಮಾಡಬಹುದು. ಆದರೆ, ಆನ್‌ಲೈನ್ ಮೂಲಕ ವಂಚನೆಯಾದರೆ ಖಂಡಿತವಾಗಿಯೂ ಆ ಹಣ ವಾಪಸ್ ಸಿಗುವ ಮಾತೇ ಇಲ್ಲ.!

ಹೌದು, ಎಲ್ಲಿಯೋ ಸಾವಿರಾರು ಕಿಲೋಮೀಟರ್ ದೂರದಲ್ಲಿ ಕುಳಿತ ವ್ಯಕ್ತಿಯಿಂದ ನೀವು ವಂಚನೆಗೆ ಒಳಗಾಗಿದ್ದರೆ ಆತನನ್ನು ಹಿಡಿದು ಹಣವನ್ನು ವಾಪಸ್ ಪಡೆಯುವುದು ಪೊಲೀಸರಿಗೂ ಅಸಾಧ್ಯವಾದ ಕೆಲಸವಾಗಿದೆ. ಇಲ್ಲಿಯವರೆಗೂ ದಾಖಲಾದ ಪ್ರಕರಣಗಳಲ್ಲಿ ಶೇ.10 ರಷ್ಟು ಪ್ರಕರಣಗಳಲ್ಲಿಯೂ ಸಹ ಹಣ ವಾಪಸ್ ಸಿಕ್ಕ ಉದಾಹರಣೆ ಇಲ್ಲ. ಹಾಗಾಗಿ, ಆನ್‌ಲೈನಿನಲ್ಲಿ ಹಣ ಕಳೆದುಕೊಂಡರೆ ನಿಮ್ಮ ಕಥೆ ಮುಗಿದಂತೆಯೇ ಸರಿ.! ನಿಮಗೆ ನ್ಯಾಯವನ್ನು ಒದಗಿಸಲು ಪೊಲೀಸರು ಪ್ರಯತ್ನಿಸುತ್ತಿರುತ್ತಾದರೂ, ಅವರಿಗೂ ಇತ್ತೀಚಿನ ತಂತ್ರಜ್ಞಾನದ ಕೊರತೆ ಇದೆ ಮತ್ತು ಈ ಪ್ರಕರಣಗಳನ್ನು ಭೇಧಿಸುವುದು ದುಬಾರಿ ಕೂಡ ಹೌದು. ಹಾಗಾಗಿ, ನಿಮ್ಮ ಎಚ್ಚರಿಕೆಯಲ್ಲಿ ನೀವಿರಬೇಕು.!

ಎಚ್ಚರವಹಿಸುವುದು ಹೇಗೆ?
ಆನ್‌ಲೈನ್ ಬ್ಯಾಂಕಿಂಗ್ ಬಗ್ಗೆ ತಿಳಿಯದಿದ್ದರೆ ಯಾವುದೇ ಕಾರಣಕ್ಕೂ ಆನ್‌ಲೈನ್ ಬ್ಯಾಂಕಿಂಗ್ ಬಳಸಬೇಡಿ. ಆನ್‌ಲೈನ್ ಬ್ಯಾಂಕಿಂಗ್ ಸೇವೆ ನನಗೆ ಬೇಡ ಎಂದು ಬ್ಯಾಂಕ್ ನವರಿಗೆ ತಿಳಿಸಿ.
ವೈಯಕ್ತಿಕ ವಿವರ ಕೇಳಿಕೊಂಡು ಅಪರಿಚಿತರು ಕರೆ ಮಾಡಿದರೆ ಉತ್ತರಿಸಬಾರದು. ಅದರಲ್ಲೂ ಓಟಿಪಿ, ಬ್ಯಾಂಕಿಂಗ್, ಆಧಾರ್, ಪಾನ್ ಪಾಹಿತಿಗಳನ್ನು ಹಂಚಿಕೊಂಡರೆ ನಿಮ್ಮ ಕಥೆ ಮುಗಿದಂತೆ.

ಲಾಭಾಂಶದ ನೆಪದಲ್ಲಿ ವ್ಯವಸ್ಥಿತವಾಗಿ ಮಾಹಿತಿ ನೀಡಿ ಹಣ ಪಾವತಿ ಮಾಡಿ ಎನ್ನುವವರ ಬಗ್ಗೆ ಹುಷಾರಾಗಿರಿ. ಇಂತಹ ಜನರು ಇದೀಗ ಆನ್‌ಲೈನ್ ವಂಚನೆಯನ್ನು ಕಂಡುಕೊಂಡಿದ್ದಾರೆ
ಅಪರಿಚಿತರು ಕಳುಹಿಸುವ ಯಾವುದೇ ಲಿಂಕ್‌ ಕ್ಲಿಕ್‌ ಮಾಡಲೇಬೇಡಿ. ಇದರಿಂದ ಈ ಮೇಲಿನ ಘಟನೆಗೆ ನೀವು ಆಹಾರವಾಗಬಹುದು.
ಕರೆಗಳ ಬಗ್ಗೆ ಅನುಮಾನ ಇದ್ದರೆ ಸಂಬಂಧಪಟ್ಟ ಸಂಸ್ಥೆ ಅಥವಾ ಪೊಲೀಸ್‌ ಠಾಣೆಗೆ ಮಾಹಿತಿ ನೀಡಿ.
ಯಾವುದೇ ಸೇವೆ, ಹಣಕಾಸಿನ ವಿವರಗಳ ಕುರಿತು ಮಾಹಿತಿಗೆ ಸಮೀಪದ ಶಾಖಾ ಕಚೇರಿಗೆ ಭೇಟಿ ನೀಡಿ.

error: Content is protected !! Not allowed copy content from janadhvani.com