ನವದೆಹಲಿ: ಕೊರೋನಾ ಹರಡುವಿಕೆಯನ್ನು ತಡೆಗಟ್ಟುವ ಉದ್ದೇಶದಿಂದ ಜಾರಿಮಾಡಲಾಗಿರುವ ಲಾಕ್ಡೌನ್ ಮೂರನೇ ಹಂತವನ್ನು ದಾಟಿ ಇದೀಗ ನಾಲ್ಕನೇ ಹಂತಕ್ಕೆ ತಲುಪಿದೆ. ಸೋಂಕು ಹರಡುವಿಕೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದರೂ, ಲಾಕ್ ಡೌನ್ ನಿರ್ಬಂಧಗಳು ಮಾತ್ರ ಸಡಿಲಿಕೆಯಾಗುತ್ತಿದೆ.
ಮೇ 31ರವರೆಗೆ ನಾಲ್ಕನೇ ಹಂತದ ಲಾಕ್ಡೌನ್ನ ವಿಸ್ತರಿಸಿ ಕೇಂದ್ರ ಸರ್ಕಾರದ ಆದೇಶವನ್ನು ಹೊರಡಿಸಿದೆ. ಈ ಹಿಂದಿನಂತೆಯೇ ಗ್ರೀನ್, ಆರೆಂಜ್ ಹಾಗೂ ರೆಡ್ ಝೋನ್ ಗಳನ್ನು ಮುಂದುವರಿಸಲಾಗಿದೆ. ಯಾವ ಭಾಗವನ್ನು ಯಾವ ಝೋನ್ ಅನ್ನಾಗಿ ಮಾರ್ಪಡಿಸಬೇಕೆನ್ನುವುದನ್ನು ರಾಜ್ಯ ಸರಕಾರಗಳೇ ನಿರ್ಧರಿಸಲು ಅವಕಾಶ ಕಲ್ಪಿಸಲಾಗಿದೆ.
ಎಲ್ಲರೂ ಕಡ್ಡಾಯವಾಗಿ ಆರೋಗ್ಯ ಸೇತು ಆ್ಯಪ್ ಬಳಕೆಯನ್ನು ಕಡ್ಡಾಯಗೊಳಿಸಲಾಗಿದೆ. ದೇಶದಾದ್ಯಂತ ವಿಮಾನಯಾನ, ರೈಲ್ವೆ, ಬಸ್ ಸೇವೆಗಳನ್ನು ನಿಷೇಧ ಹೇರಲಾಗಿದೆ. ರಾತ್ರಿ 7 ಗಂಟೆಯಿಂದ ಬೆಳಿಗ್ಗೆ 7 ಗಂಟೆಯವರೆಗೂ ನಿಷೇಧಾಜ್ಞೆ ಹೇರಲಾಗಿದೆ. ಶೈಕ್ಷಣಿಕ ಸಂಸ್ಥೆಗಳು, ಥಿಯೇಟರ್, ಮಾಲ್, ಬಾರ್, ಪಬ್ ಗಳ ಮೇಲಿನ ನಿಷೇಧವನ್ನು ಮುಂದುವರಿಸಲಾಗಿದೆ.
ಹೊಸ ಮಾರ್ಗಸೂಚಿಯಲ್ಲಿ ಏನೇನು ಇರಲಿದೆ? ಏನಿರಲ್ಲ?
ಯಾವುದಕ್ಕೆ ಅವಕಾಶ :
ಮದುವೆ ಸಮಾರಂಭ ನಡೆಸಲು ಅವಕಾಶವಿದ್ದು, ಕೇವಲ 50 ಮಂದಿ ಮಾತ್ರವೇ ಪಾಲ್ಗೊಳ್ಳಬಹುದಾಗಿದೆ. ಅಲ್ಲದೇ ಅಂತ್ಯಸಂಸ್ಕಾರದಲ್ಲಿ 20 ಜನರಿಗೆ ಮಾತ್ರವೇ ಅವಕಾಶ ನೀಡಲಾಗಿದೆ. ಆಟೋ, ಕ್ಯಾಬ್ ಷರತ್ತುಬದ್ಧ ಅವಕಾಶ, ಮದ್ಯ ಮಾರಾಟ ಇರುತ್ತೆ ಆದರೆ ಪಾರ್ಸಲ್ ಗೆ ಮಾತ್ರ ಅವಕಾಶ, ಎರಡು ರಾಜ್ಯಗಳು ಒಪ್ಪಿದರೆ ಮಾತ್ರ ಬಸ್ ಸಂಚಾರಕ್ಕೆ ಅವಕಾಶ, ಅಂತರ್ ಜಿಲ್ಲಾ ಓಡಾಟ ರಾಜ್ಯ ಸರಕಾರಗಳು ತೀರ್ಮಾನ ಮಾಡುತ್ತದೆ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಯಾವುದಕ್ಕೆ ನಿಷೇಧ ?
ಕಾಲೇಜು, ಶಿಕ್ಷಣ ಸಂಸ್ಥೆ ಬಂದ್, ಸ್ವಿಮ್ಮಿಂಗ್ ಪೂಲ್, ಶಾಪಿಂಗ್ ಮಾಲ್, ಧಾರ್ಮಿಕ ಕೇಂದ್ರಗಳು, ಧಾರ್ಮಿಕ, ಸಾಂಸ್ಕೃತಿಕ ಸಮಾರಂಭ, ಸಭೆ, ರೈಲು, ಬಸ್, ಓಲಾ, ಉಬರ್, ಟ್ಯಾಕ್ಸಿ ಸಂಚಾರ ರದ್ದು, ಥಿಯೇಟರ್, ವಿಮಾನ ಸಂಚಾರ ಬಂದ್, 10 ವರ್ಷದ ಮಕ್ಕಳು ಹಾಗೂ 65 ವರ್ಷ ಮೇಲ್ಪಟ್ಟರಿಗೆ ಮನೆಯಿಂದ ಹೊರಗಡೆ ಬರಲು ಅವಕಾಶವಿಲ್ಲ. ಇನ್ನು ಹೋಟೆಲ್ ಮತ್ತು ರೆಸ್ಟೋರೆಂಟ್ ಗಳ ಮೇಲೂ ನಿಷೇಧ ಹೇರಲಾಗಿದೆ. ಆದ್ರೆ ಹೋಮ್ ಡೆಲಿವರಿಗೆ ಹಾಗೂ ಪಾರ್ಸೆಲ್ ನೀಡೋದಕ್ಕೆ ಮಾತ್ರವೇ ಹೋಟೆಲ್ ಗಳಿಗೆ ಅವಕಾಶ ಕಲ್ಪಿಸಲಾಗಿದೆ.