ಮುಂಬೈ: ಪ್ರಸ್ತುತ ಲಾಕ್ಡೌನ್ ಹಿನ್ನೆಲೆಯಲ್ಲಿ ಬಡ ಸ್ಲಂ ನಿವಾಸಿಗಳಿಗೆ ಆಮಿರ್ ಖಾನ್ ಹಣ ಹಂಚಿದ್ದಾರೆ ಎಂದು ವ್ಯಕ್ತಿಯೊಬ್ಬರು ವಿಡಿಯೋ ಮೂಲಕ ಧನ್ಯವಾದ ತಿಳಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ಆ ವಿಡಿಯೋ ವೈರಲ್ ಆಗಿತ್ತು.
ದೆಹಲಿಯಲ್ಲಿ ಹಂಚಲು ತಂದಿದ್ದ ಪ್ರತಿ ಒಂದು ಕೆಜಿ ಗೋಧಿ ಹಿಟ್ಟಿನ ಚೀಲದಲ್ಲಿ ಆಮಿರ್ ಖಾನ್ 15 ಸಾವಿರ ರೂ. ಹಣ ಇಟ್ಟು ಕಳಿಸಿದ್ದಾರೆ ಎಂದು ವಿಡಿಯೋದಲ್ಲಿ ಹೇಳಲಾಗಿತ್ತು. ಜೊತೆಗೆ ಒಂದು ಫೋಟೋ ಕೂಡ ಗಮನ ಸೆಳೆದಿತ್ತು.
ಆದರೆ ಈ ಬಗ್ಗೆ ಆಮಿರ್ ಖಾನ್ ಯಾವುದೇ ಸ್ಪಷ್ಟನೆ ನೀಡಿರಲಿಲ್ಲ. ಸಹಾಯ ಮಾಡಿದ್ದನ್ನು ಹೇಳಿಕೊಳ್ಳುವ ಗುಣ ಅವರದ್ದಲ್ಲ. ಹಾಗಾಗಿ ಈ ವಿಚಾರವನ್ನು ಗೌಪ್ಯವಾಗಿ ಮಾಡುತ್ತಿದ್ದಾರೆ ಎಂದು ಆಮಿರ್ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈ ಬಗ್ಗೆ ಪರ-ವಿರೋಧದ ಚರ್ಚೆ ಜೋರಾಗಿಯೇ ನಡೆಯುತ್ತಿತ್ತು. ಈಗ ಆದರ ಬಗ್ಗೆ ಸ್ವತಃ ಆಮಿರ್ ಖಾನ್ ಬಾಯಿ ಬಿಟ್ಟಿದ್ದಾರೆ.
ಈ ಬಗ್ಗೆ ಟ್ವಿಟರ್ ಮೂಲಕ ಸ್ಪಷ್ಟನೆ ನೀಡಿದ ಖಾನ್. ‘ಗೈಸ್, ಗೋಧಿ ಚೀಲದಲ್ಲಿ ಹಣ ಇಟ್ಟವನು ನಾನಲ್ಲ. ಅದು ಸಂಪೂರ್ಣ ಸುಳ್ಳು ಸುದ್ದಿ ಆಗಿರಬಹುದು ಅಥವಾ ರಾಬಿನ್ ಹುಡ್ ತಮ್ಮ ಬಗ್ಗೆ ಹೇಳಿಕೊಳ್ಳಲು ಇಷ್ಟ ಇಲ್ಲದಿರಬಹುದು. ಮನೆಯಲ್ಲೇ ಇರಿ’ ಎಂದು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.
Guys, I am not the person putting money in wheat bags. Its either a fake story completely, or Robin Hood doesn’t want to reveal himself!
Stay safe.
Love.
a.— Aamir Khan (@aamir_khan) May 4, 2020
ಆಮಿರ್ ಖಾನ್ ಈ ಕೆಲಸ ಮಾಡಿಲ್ಲ ಎಂಬುದಾದರೆ ನಿಜಕ್ಕೂ ಆ ಗೋಧಿ ಚೀಲಗಳಲ್ಲಿ ಹಣ ಇಟ್ಟು ಹಂಚಿದವರು ಯಾರು ಎಂಬ ಪ್ರಶ್ನೆ ಈಗ ಮೂಡಿದೆ.