ಮಂಗಳೂರು,ಮಾ.24: ವ್ಯಾಪಕವಾಗಿ ಹರಡುತ್ತಿರುವ ಕೊರೋನಾ ವೈರಸ್ ತಡೆಗೆ ರಾಜ್ಯ ಸರಕಾರ ಹಲವು ರೀತಿಯ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದು, 9 ಜಿಲ್ಲೆಗಳನ್ನು ಸಂಪೂರ್ಣ ಲಾಕ್ ಡೌನ್ ಮಾಡಲಾಗಿದೆ.
ಜನರಲ್ಲಿ ಹೆಚ್ಚುತ್ತಿರುವ ಆತಂಕದ ನಡುವೆ ಮಂಗಳೂರಿನಲ್ಲಿರುವ ಜಿಲ್ಲಾ ಸರಕಾರಿ ಆಸ್ಪತ್ರೆ ವೆನ್ ಲಾಕ್ ನಲ್ಲಿನ ಅಸೌಕರ್ಯ ಕುರಿತು ಟೆಲಿಫೋನ್ ಸಂಭಾಷಣೆ ಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಜನರನ್ನು ಆತಂಕಕ್ಕೀಡು ಮಾಡಿದೆ.
ಈ ಕುರಿತು ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ಅವರು ಸ್ಪಷ್ಟೀಕರಣೆ ನೀಡಿದ್ದು,”ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಕೊರೋನಾ ಶಂಕಿತರನ್ನು ತಪಾಸಣೆ ನಡೆಸಲು “ಆಯುಶ್” ಕಟ್ಟಡದಲ್ಲಿ ಪ್ರತ್ಯೇಕ ಕೊಠಡಿಗಳನ್ನು ಸಜ್ಜುಗೊಳಿಸಲಾಗಿದೆ”
“ಅಲ್ಲಿ ಶಂಕಿತರನ್ನು ತಪಾಸಣೆ ನಡೆಸಿ, ನಿರ್ದೇಶಗಳನ್ನು ನೀಡಿ, ಕೊರೋನಾ ನೆಗಟೀವ್ ಬಂದಲ್ಲಿ ಮನೆಗೆ ಕಳಿಸಲಾಗುತ್ತದೆ. ಪಾಸಟೀವ್ ಇದ್ದಲ್ಲಿ ಚಿಕಿತ್ಸೆಯನ್ನು ಮುಂದುರಿಸಲಾಗುತ್ತದೆ” ಎಂದರು.
ಸಾಮಾನ್ಯ ರೋಗಿಗಳು ಮತ್ತು ಕೊರೋನಾ ಶಂಕಿತರನ್ನು ಒಟ್ಟಾಗಿ ಕುಳ್ಳಿರಿಸುವುದೋ, ಒಟ್ಟಿಗೆ ಬೆಸೆಯುವಂತಹಾ ಯಾವುದೇ ಸಂದರ್ಭವಿಲ್ಲ, ಎಲ್ಲವೂ ಅಚ್ಚುಕಟ್ಟಾಗಿ ನಡೆಯುತ್ತಿದೆ” ಎಂದಿದ್ದಾರೆ.
“ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿರುವ ಆಡಿಯೋ, ಹಾಗೂ ಊಹಾಪೋಹಗಳಿಗೆ ಯಾರೂ ಕಿವಿಗೊಡಬಾರದು. ಅಂತಹಾ ಯಾವುದೇ ತೊಂದರೆ ವೆನ್ಲಾಕ್ ಆಸ್ಪತ್ರೆಯಲ್ಲಿ ಇಲ್ಲ, ಅದೇ ರೀತಿ ಕೊರೋನಾ ಹರಡುವಿಕೆ ಬಗ್ಗೆ ಜನರು ಭಯಪಡುವ ಅಗತ್ಯವಿಲ್ಲ, ಆದನ್ನು ಎದುರಿಸುವ ಸರ್ವ ಸಾಮರ್ಥ್ಯ ನಮ್ಮಲ್ಲಿದೆ” ಎಂದು ಅವರು ಹೇಳಿದರು.