janadhvani

Kannada Online News Paper

ಕೊರೋನಾ ತಡೆಗೆ ಕಠಿಣ ಕ್ರಮ: 21 ದಿವಸ ಇಡೀ ದೇಶಕ್ಕೇ ‘ಬೀಗ ಮುದ್ರೆ’- ಪ್ರಧಾನಿ ಘೋಷಣೆ

ನವದೆಹಲಿ,ಮಾ.24: ಇಂದಿನ ಮಧ್ಯರಾತ್ರಿಯಿಂದ ಮುಂದಿನ 21 ದಿನಗಳ ಕಾಲ ಇಡೀ ದೇಶವೇ ಲಾಕ್ಡೌನ್ ಆಗಲಿದೆ. ದೇಶವನ್ನು ಕೊರೋನಾದಿಂದ ಬಚಾವ್ ಮಾಡಲು ನಾವು ಮನೆಯಲ್ಲೇ ಉಳಿಯಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಕೊರೋನಾ ವೈರಸ್ ವಿರುದ್ಧ ಹೋರಾಟಕ್ಕೆ ಸರ್ಕಾರದೊಂದಿಗೆ ಜನ ಕೈ ಜೋಡಿಸಬೇಕಿದೆ. ಎಷ್ಟೇ ಮುನ್ನೆಚ್ಚರಿಕೆ ವಹಿಸಿದರೂ ಪರಿಸ್ಥಿತಿ ಕೈಮೀರುವ ಹಂತದಲ್ಲಿದೆ. ಇಂದು ರಾತ್ರಿ 12 ಗಂಟೆಯಿಂದ ಇಡೀ ದೇಶ ಸಂಪೂರ್ಣ ಲಾಕ್ ಡೌನ್ ಆಗಲಿದೆ. ದೇಶಾದ್ಯಂತ ಲಾಕ್ ಡೌನ್ ಮಾಡಲಾಗುವುದು. ಜನತಾ ಕರ್ಫ್ಯೂ ಮಾದರಿಯಲ್ಲಿ ಸಂಪೂರ್ಣ ಲಾಕ್ಡೌನ್ ಮಾಡಲಾಗುವುದು. ಹಾಗಾಗಿ ಕೇಂದ್ರದ ಆದೇಶವನ್ನು ಪಾಲಿಸಿ 21 ದಿನಗಳ ಕಾಲ ಮನೆಯಲ್ಲೇ ಇರಬೇಕಿದೆ. ನಾವು ಮುಂದಿನ 21 ದಿನ ದೇಶಕ್ಕಾಗಿ ಮನೆಯಲ್ಲೇ ಇರದೆ ಹೋದಲ್ಲಿ, ಭಾರತವೂ 21 ವರ್ಷಗಳ ಹಿಂದಕ್ಕೆ ಹೋಗಬೇಕಾಗುತ್ತದೆ ಎಂದರು.

ಕೋವಿಡ್-19 ತಡೆಗೆ ಸಾಮಾಜಿಕ ಅಂತರ ಮುಖ್ಯ. ಈ ಮಾರಕ ವೈರಾಣು ಹೇಗೆ ಹರಡುತ್ತದೆ ಎಂದು ಇಲ್ಲಿಯವರೆಗೂ ಸ್ಪಷ್ಟತೆ ಸಿಕ್ಕಿಲ್ಲ. ಇದರ ಪ್ರಾಥಮಿಕ ಗುಣಲಕ್ಷಣಗಳು ಏನು ಎಂಬುದು ಯಾರಿಗೂ ಅರ್ಥ ಆಗಿಲ್ಲ. ಸಾಮಾಜಿಕ ಅಂತರವೂ ನನಗೂ ಸೇರಿದಂತೆ ಎಲ್ಲರಿಗೂ ಅನ್ವಯಿಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.

ನಾವು ಕಾರ್ಯಪ್ರವೃತ್ತರಾಗಬೇಕಾದ ಹಂತದಲ್ಲಿದ್ದೇವೆ. ಈ ಕೊರೋನಾ ಮುಂದಿನ ಹಂತಕ್ಕೆ ಹೋಗುವ ಮುನ್ನ ನಾವು ಇದನ್ನು ಬಗ್ಗುಬಡಿಯಬೇಕಿದೆ. ಹೀಗೆ ಧೃಡ ನಿರ್ಧಾರ ಮಾಡಬೇಕಾದ ಸಮಯ ಇದಾಗಿದೆ. ಜನರಿಗೆ ಮೂಲಭೂತ ವಸ್ತುಗಳನ್ನು ಪೂರೈಕೆ ಮಾಡುವ ಜವಾಬ್ದಾರಿ ಕೇಂದ್ರ ಸರ್ಕಾರದ್ದು. ಅದಕ್ಕಾಗಿ ಕೇಂದ್ರ 15 ಸಾವಿರ ಕೋಟಿ ಘೋಷಣೆ ಮಾಡಿದೆ ಎಂದು ಭರವಸೆ ನೀಡಿದರು.

ಜಗತ್ತಿನ ಬಲಿಷ್ಠ ರಾಷ್ಟ್ರಗಳನ್ನೇ ಕೋರೋನಾ ವೈರಸ್ ಸಂಕಷ್ಟಕ್ಕೆ ದೂಡಿದೆ. ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಿದೆ. ಜನತಾ ಕರ್ಫ್ಯೂ ಬೆಂಬಲಿಸಿದಂತೆಯೇ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ನಾವು ಇದನ್ನು ಪಾಲಿಸುತ್ತೇವೆ ಎಂಬ ಅಚಲ ನಂಬಿಕೆ ಇದೆ. ನೀವು ಸುರಕ್ಷಿತವಾಗಿದ್ದು, ನಿಮ್ಮ ಮನೆಯವರನ್ನು ಸುರಕ್ಷಿತವಾಗಿ ಇರಿಸುತ್ತೀರಿ ಎಂಬ ವಿಶ್ವಾಸವಿದೆ ಎಂದರು.

error: Content is protected !! Not allowed copy content from janadhvani.com