janadhvani

Kannada Online News Paper

ಸುನ್ನೀ ಸೆಂಟರ್ ಕೊಡಂಗಾಯಿ :ರಮಳಾನ್ ನಸೀಹತ್ ಸಿಲ್’ಸಿಲಾ ಯಶಸ್ವಿ ಸಮಾಪ್ತಿ

ವಿಟ್ಲ : ಇಲ್ಲಿಗೆ ಸಮೀಪದ ಕೊಡಂಗಾಯಿ ಸುನ್ನೀ ಸೆಂಟರ್ ವತಿಯಿಂದ ಸ್ಥಳೀಯ ಸುನ್ನೀ ಯುವಜನ ಸಂಘ-SYS ಮತ್ತು ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್-SSF ಇವುಗಳ ಸಹಯೋಗದೊಂದಿಗೆ ಪವಿತ್ರ ರಮಳಾನಿನ ಎಲ್ಲಾ ರವಿವಾರಗಳಲ್ಲಿ ಬೆಳಿಗ್ಗೆ ನಡೆಸಿದ ಅಧ್ಯಯನ ತರಗತಿಯು ಅತ್ಯಂತ ಯಶಸ್ವಿಯಾಗಿ ಮುಕ್ತಾಯಗೊಂಡಿತು.

ಮೇ ತಿಂಗಳ 20 ಭಾನುವಾರದಂದು ನಡೆದ ತರಗತಿಯಲ್ಲಿ ಸುನ್ನೀ ಯುವಜನ ಸಂಘ ಕೊಡಂಗಾಯಿ ಬ್ರಾಂಚ್ ಅಧ್ಯಕ್ಷರಾದ ಪಿ ಹುಸೈನ್ ಜಾರರವರು ಅಧ್ಯಕ್ಷತೆ ವಹಿಸಿದ್ದರು. ಸುನ್ನೀ ಸೆಂಟರ್ ಇಮಾಮ್ ಕೆ.ಎ ಮುಹಮ್ಮದ್ ಅಶ್ರಫ್ ಸಅದಿ ಪಡುಬಿದ್ರೆಯವರು ಸಭೆಯನ್ನು ಉದ್ಘಾಟಿಸಿದರು. ಟಿಪ್ಪುನಗರ ದಾರುನ್ನಜಾತ್ ಸಂಸ್ಥೆಯ ಮುದರ್ರಿಸ್ ಮೌಲಾನಾ ಎಪಿ ಅಬೂಬಕರ್ ಸಖಾಫಿ ಕಲ್ಮಂಜರವರು ಕುರ್ಆನ್ ಕರೆಯುತ್ತಿದೆ ಎಂಬ ವಿಷಯದಡಿಯಲ್ಲಿ ತರಗತಿ ನಡೆಸಿದರು.

ದಿನಾಂಕ 27 ರಂದು ಆಯೋಜಿಸಿದ ತರಗತಿಯ ಅಧ್ಯಕ್ಷತೆಯನ್ನು ಎಸ್ಎಸ್ಎಫ್ ಯೂನಿಟ್ ಅಧ್ಯಕ್ಷರಾದ ಎಂ ಅಬ್ದುಲ್ ಲತೀಫ್ ರವರು ವಹಿಸಿದ್ದರು. ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ವಿಟ್ಲ ಸೌತ್ ಸೆಕ್ಟರ್ ಅಧ್ಯಕ್ಷರಾದ ಸಿಎಚ್ ಅಬ್ದುಲ್ ಖಾದರ್ ಸಭೆಯನ್ನು ಉದ್ಘಾಟಿಸಿದರು. ಖ್ಯಾತ ವಾಗ್ಮಿ ಕೆಎ ಅಬ್ದುಲ್ ಖಾದರ್ ಫೈಝಿ ಬುಳೇರಿಕಟ್ಟೆಯವರು ಪರಲೋಕ ವಿಜಯ ಎಂಬ ವಿಷಯದಲ್ಲಿ ಕ್ಲಾಸ್ ನಡೆಸಿಕೊಟ್ಟರು.
ಜೂನ್ ತಿಂಗಳ 3 ಭಾನುವಾರದಂದು ಹಮ್ಮಿಕೊಂಡ ತರಗತಿಗೆ ಸುನ್ನೀ ಸೆಂಟರ್ ಸದರ್ ಉಸ್ತಾದರೂ ವಿಟ್ಲ ಅಶ್’ಅರಿಯ್ಯ ಟೌನ್‌ ಜುಮಾ ಮಸ್ಜಿದ್ ಇಮಾಮರೂ ಆದ ಅಬ್ಬಾಸ್ ಮದನಿಯವರು ನಾಯಕತ್ವ ನೀಡಿದ್ದರು. ದಾರುನ್ನಜಾತ್ ಎಜುಕೇಶನಲ್ ಸೆಂಟರ್ ಅಧ್ಯಕ್ಷರಾದ ಉಸ್ತಾದುಲ್ ಅಸಾತೀದ್ ಪಿಕೆ ಅಬೂಬಕರ್ ಮುಸ್ಲಿಯಾರ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸುನ್ನೀ ಯುವಜನ ಸಂಘ ದ.ಕ ಜಿಲ್ಲಾ ಸದಸ್ಯರೂ ಬಂಟ್ವಾಳ ಝೋನ್ ಕಾರ್ಯದರ್ಶಿಯೂ ಆದ ಕೆಎಂ ಅಬ್ದುಲ್ ಹಮೀದ್ ಸಖಾಫಿಯವರು ನಮ್ಮ ಕರ್ತವ್ಯಗಳು ಎಂಬ ವಿಷಯವನ್ನು ಮಂಡಿಸಿ ಮಾತನಾಡಿದರು.

ಜೂನ್ 10 ರಂದು ನಡೆದ ತರಗತಿಯ ಅಧ್ಯಕ್ಷತೆಯನ್ನು ಸುನ್ನೀ ಸೆಂಟರ್ ಅಧ್ಯಕ್ಷರಾದ ಹಾಜಿ ಕೆಎ ಹಮೀದ್ ಕೊಡಂಗಾಯಿಯವರು ವಹಿಸಿದ್ದರು. ಶೈಖುನಾ ಮಹ್ಮದೂಲ್ ಫೈಝೀ ಓಲೆಮುಂಡೋವು ಸಭೆಯನ್ನು ಉದ್ಘಾಟಿಸಿದರು. ಕಲ್ಲಿಕೋಟೆಯ ಕಾರಂದೂರು ಮರ್ಕಝುಸ್ಸಖಾಫತಿಸ್ಸುನ್ನಿಯ್ಯ ವಿದ್ಯಾರ್ಥಿ,ಯುವವಾಗ್ಮಿ ಮುಹಮ್ಮದ್ ಝಿಯಾದ್ ಮುಸ್ಲಿಯಾರ್ ರವರು ನರಕ ಮೋಚನೆ ಎಂಬ ವಿಷಯದಲ್ಲಿ ಮಾತನಾಡಿದರು.
ಪ್ರಸ್ತುತ ಅವಧಿಯಲ್ಲಿ ಸಾಮೂಹಿಕ ಇಫ್ತಾರ್, ಬದ್ರ್ ಸ್ಮರಣೆ, ಖತ್ಮುಲ್ ಖುರ್ಆನ್, ರಿಲೀಫ್ ಸೆಲ್, ತಝ್ಕಿಯತ್ ನೈಟ್ ಮುಂತಾದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಎಸ್ಸೆಸ್ಸೆಫ್ ಜಿಲ್ಲಾ ಮತ್ತು ಡಿವಿಷನ್ ನಾಯಕರಾದ ಸಲೀಂ ಹಾಜಿ ಬೈರಿಕಟ್ಟೆ,ಅಬ್ದುಲ್ ರಝ್ಝಾಕ್ ಸಖಾಫಿ ಕೆಲಿಂಜ,ಅಬ್ದುಲ್ ರಹ್ಮಾನ್ ಶರಫಿ ಮೂಡಂಬೈಲು, ಅಬ್ದುಲ್ ರಝ್ಝಾಕ್ ಪೆಲ್ತಡ್ಕ ಸಹಿತ ಅನೇಕರು ಅತಿಥಿಗಳಾಗಿ ಭಾಗವಹಿಸಿದ್ದರು. ಪ್ರಾರಂಭದಲ್ಲಿ ಸುನ್ನೀ ಯುವಜನ ಸಂಘ-SYS ಕೊಡಂಗಾಯಿ ಬ್ರಾಂಚ್ ಪ್ರಧಾನ ಕಾರ್ಯದರ್ಶಿ ಎಂಕೆಎಂ ಕಾಮಿಲ್ ಸಖಾಫಿ ಸ್ವಾಗತಿಸಿ ಕೊನೆಯಲ್ಲಿ ಎಸ್ಸೆಸ್ಸೆಫ್ ಯೂನಿಟ್ ಪ್ರಧಾನ ಕಾರ್ಯದರ್ಶಿ ಎಂಕೆ ಮುಹಮ್ಮದ್ ತಮೀಮ್ ಧನ್ಯವಾದ ಸಲ್ಲಿಸಿದರು.

ಅಕ್ಷರ : ಎಂಕೆಎಂ ಕಾಮಿಲ್ ಸಖಾಫಿ ಕೊಡಂಗಾಯಿ

error: Content is protected !! Not allowed copy content from janadhvani.com