ಬೆಂಗಳೂರು: ರಾಜ್ಯದಲ್ಲಿ 6 ನೇ ತರಗತಿಯಿಂದ ಉನ್ನತ ಶಿಕ್ಷಣದವರೆಗಿನ ಎಲ್ಲ ವಿದ್ಯಾರ್ಥಿಗಳಿಗೂ ಶಾಲೆ ಕಾಲೇಜುಗಳ ಭೌತಿಕ ತರಗತಿ ಆರಂಭವಾಗಿದೆ. ಶಾಲೆ ತೆರೆಯಲು ಉಳಿದಿದ್ದು 1 ರಿಂದ 5 ತರಗತಿ ಮಕ್ಕಳಿಗೆ ಮಾತ್ರ. ಇದೀಗ ಈ ತರಗತಿಗಳಿಗೆ ಶಾಲೆ ಓಪನ್ ಮಾಡುವ ದಿನಾಂಕ ಸನ್ನಿಹಿತವಾಗಿದೆ.
1 ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ದಸರಾ ರಜೆ ಮುಗಿದ ನಂತರ ಶಾಲೆ ಓಪನ್ ಮಾಡಲು ಚಿಂತಿಸಲಾಗಿದೆ. ಆದರೆ ಕೊರೊನಾ ತಾಂತ್ರಿಕ ಸಮಿತಿ ಅನುಮತಿ ನೀಡಿದಲ್ಲಿ ಮಾತ್ರ ಶಾಲೆ ತೆರೆಯಲಾಗುತ್ತದೆ. ಒಂದು ವೇಳೆ ಅನುಮತಿ ನೀಡದಿದ್ದಲ್ಲಿ, 3, 4, 5 ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲೆ ತೆರೆಯಲು ಅವಕಾಶ ನೀಡಬೇಕೆಂದು ಮನವಿ ಮಾಡಿಕೊಳ್ಳಲಾಗುತ್ತದೆ. ಅದು ಸಹ ದಸರಾ ರಜೆ ನಂತರವೇ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ ಸಿ ನಾಗೇಶ್ ತಿಳಿಸಿದ್ದಾರೆ.
ದಸರಾ ರಜೆ ನಂತರ 1ನೇ ತರಗತಿ ಮತ್ತು 2ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲೆ ತೆರೆಯಲು ಅವಕಾಶ ನೀಡದಿದ್ದರೆ ನವೆಂಬರ್ ಆರಂಭದಿಂದ ಶಾಲೆ ಓಪನ್ ಮಾಡಲು ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಸಚಿವರು ಹೇಳಿದ್ದಾರೆ.