janadhvani

Kannada Online News Paper

‘ಸಮಸ್ತ’: ಇತಿಹಾಸ ಮತ್ತು ವರ್ತಮಾನದ ನೆನಪುಗಳನ್ನು ಮೆಲುಕು ಹಾಕಿದ ನಾಯಕರು

'ನೀನು ನಮ್ಮೊಂದಿಗೆ ಸಮಸ್ತದಲ್ಲಿ ಕೆಲಸ ಮಾಡಬೇಕು' ಎಂದು ಇ.ಕೆ. ಅಬೂಬಕರ್ ಮುಸ್ಲಿಯಾರ್ ಕೇಳಿಕೊಂಡರು," ಎಂದು ಹೇಳುವಾಗ ಉಸ್ತಾದ್ ಅವರ ಕಣ್ಣಾಲಿಗಳು ತುಂಬಿ ಬಂದವು.

ಕೋಝಿಕೋಡ್ | ಐತಿಹಾಸಿಕ ನಿಯೋಗಕ್ಕೆ ಸಾಕ್ಷಿಯಾದ ಕೋಝಿಕೋಡ್ ಟೌನ್‌ಹಾಲ್‌ನಲ್ಲಿ ಸಮಸ್ತ ಸ್ಥಾಪನಾ ದಿನದ ಸಮ್ಮೇಳನವು ಅತ್ಯಂತ ಯಶಸ್ವಿಯಾಗಿ ಜರುಗಿತು. ಅವಿಭಜಿತ ಸಮಸ್ತದ ಕೊನೆಯ ಕೊಂಡಿಯಾಗಿರುವ ಕಾಂತ್‌ಪುರಂ ಉಸ್ತಾದ್ ಅವರ ಉಪಸ್ಥಿತಿಯಲ್ಲಿ ಪಂಡಿತರು ಮತ್ತು ಸಂಘಟನೆಯ ಕಾರ್ಯಕರ್ತರು ಒಟ್ಟುಗೂಡಿದರು.

ಸಮಾಜಕ್ಕೆ ದಿಕ್ಸೂಚಿ ನೀಡಿದ ಪಂಡಿತ ಸಭೆಯ ಇತಿಹಾಸ ಮತ್ತು ವರ್ತಮಾನದ ನೆನಪುಗಳನ್ನು ಮೆಲುಕು ಹಾಕುವ ಮೂಲಕ ನಾಯಕರು ಕಾರ್ಯಕರ್ತರಲ್ಲಿ ಹೊಸ ಚೈತನ್ಯ ತುಂಬಿದರು. 100 ವರ್ಷಗಳನ್ನು ಪೂರೈಸುತ್ತಿರುವ ಈ ಸಂದರ್ಭದಲ್ಲಿ, ಸಾಮಾಜಿಕ ಪರಿಸರದಲ್ಲಿ ಹೊರಗಿಡಲಾಗದ ಪ್ರಮುಖ ಪಂಡಿತ ಸಭೆಯಾಗಿ ‘ಸಮಸ್ತ ಕೇರಳ ಜಮ್ಮ ಇಯ್ಯತುಲ್ ಉಲಮಾ’ ಬೆಳೆದು ನಿಂತಿದೆ ಎಂದು ನಾಯಕರು ನೆನಪಿಸಿದರು.ನಕಲಿ ತರೀಖತ್‌ಗಳು ಮತ್ತು ನವಪಂಥೀಯರ ವಿರುದ್ಧ ರಾಜಿರಹಿತ ಹೋರಾಟ ನಡೆಸಿದ ಸಮಸ್ತ ನಾಯಕರನ್ನು ಸಮ್ಮೇಳನದಲ್ಲಿ ಸ್ಮರಿಸಲಾಯಿತು.

ಇ. ಸುಲೈಮಾನ್ ಮುಸ್ಲಿಯಾರ್, ಕಾಂತ್‌ಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್, ಸಯ್ಯಿದ್ ಅಲಿ ಬಾಫಕಿ, ಪೊನ್ಮಳ ಅಬ್ದುಲ್ ಖಾದಿರ್ ಮುಸ್ಲಿಯಾರ್, ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ, ಸಯ್ಯಿದ್ ಇಬ್ರಾಹಿಂ ಖಲೀಲುಲ್ ಬುಖಾರಿ, ಪಿ.ವಿ. ಮೊಯ್ದೀನ್‌ಕುಟ್ಟಿ ಮುಸ್ಲಿಯಾರ್ ತಾಳಪ್ರ, ಪಿ. ಹಸನ್ ಮುಸ್ಲಿಯಾರ್ ವಯನಾಡ್, ಪೊನ್ಮಳ ಮೊಯ್ದೀನ್‌ಕುಟ್ಟಿ ಬಾಖವಿ, ಅಬ್ದುರ್ರಹ್ಮಾನ್ ಬಾವಾ ಮುಸ್ಲಿಯಾರ್ ಕೊಡಂಪುಝ, ಸಿ. ಮುಹಮ್ಮದ್ ಫೈಝಿ, ಅಬ್ದುಲ್ ಜಲೀಲ್ ಸಖಾಫಿ ಚೆರುಸ್ಸೋಲ, ಇಝುದ್ದೀನ್ ಸಖಾಫಿ ಕೊಲ್ಲಂ, ವಿ.ಪಿ.ಎಂ. ಫೈಝಿ ವಿಲ್ಯಾಪ್ಪಳ್ಳಿ, ಅಬೂಹನೀಫಲ್ ಫೈಝಿ ತೆನ್ನಲ, ವಂಡೂರ್ ಅಬ್ದುರ್ರಹ್ಮಾನ್ ಫೈಝಿ, ಅಬ್ದುಲ್ ಅಝೀಝ್ ಸಖಾಫಿ ವೆಳ್ಳಯೂರ್, ಅಬ್ದುನ್ನಾಸಿರ್ ಅಹ್ಸನಿ ಒಳವತ್ತೂರ್, ಎಮ್.ವಿ. ಅಬ್ದುರ್ರಹ್ಮಾನ್ ಮುಸ್ಲಿಯಾರ್ ಪರಿಯಾರಂ, ಮುಹ್ಯಿದ್ದೀನ್ ಕುಟ್ಟಿ ಮುಸ್ಲಿಯಾರ್ ಪುರಕ್ಕಾಡ್, ಐ.ಎಂ.ಕೆ. ಫೈಝಿ, ಪಿ.ಎಸ್.ಕೆ. ಮೊಯ್ದು ಬಾಖವಿ ಮಾಡವನ, ಅಲವಿ ಸಖಾಫಿ ಕೊಳತ್ತೂರ್, ಡಾ. ಮುಹಮ್ಮದ್ ಅಬ್ದುಲ್ ಹಕೀಮ್ ಅಝ್ಹರಿ, ಒ.ಕೆ. ಅಬ್ದುರ್ರಶೀದ್ ಮುಸ್ಲಿಯಾರ್, ಅಬ್ದುಲ್ಲಾ ಅಹ್ಸನಿ ಚೆಂಗಾನಿ, ಅಬ್ದುಲ್ ಗಫೂರ್ ಬಾಖವಿ ಪರುಮುಖಂ, ಹಸನ್ ಬಾಖವಿ ಪಲ್ಲಾರ್ ಮುಂತಾದ ನಾಯಕರು ಭಾಗವಹಿಸಿದ್ದರು.
ನೆನಪುಗಳಿಂದ ಗದ್ಗದಿತರಾದ ಕಾಂತಪುರಂ ಉಸ್ತಾದ್
ಕೋಝಿಕೋಡ್ | ಸಮಸ್ತದಲ್ಲಿ ಸದಸ್ಯತ್ವ ಪಡೆದ ದಿನಗಳು ಮತ್ತು ಹಿಂದಿನ ನಾಯಕರ ನೆನಪುಗಳನ್ನು ಸ್ಮರಿಸಿ ಕಾಂತ್‌ಪುರಂ ಉಸ್ತಾದ್ ಭಾವುಕರಾದರು. ನಿನ್ನೆ ಕೋಝಿಕೋಡ್ ಟೌನ್‌ಹಾಲ್‌ನಲ್ಲಿ ನಡೆದ ಸಮಸ್ತ ಸ್ಥಾಪನಾ ದಿನದ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡುವಾಗ ಉಸ್ತಾದ್ ಅವರ ಕಣ್ಣುಗಳು ತೇವಗೊಂಡವು ಮತ್ತು ಧ್ವನಿ ಗದ್ಗದಿತವಾಯಿತು.

ಸಮಸ್ತದ ಸಾಮಾಜಿಕ ಅಗತ್ಯತೆ ಮತ್ತು ಅದರ ಚಟುವಟಿಕೆಗಳ ಕುರಿತು ಪ್ರಸ್ತಾಪಿಸಿ ಭಾಷಣ ಪ್ರಾರಂಭಿಸಿದ ಅವರು, ತಮಗೆ ಸಂಸ್ಥೆಯ ಸದಸ್ಯತ್ವ ಸಿಕ್ಕ ದಿನಗಳನ್ನು ನೆನಪಿಸಿಕೊಂಡರು. “ಕೋಝಿಕೋಡ್ ಹಿದಾಯತುಸ್ವಿಬಿಯಾನ್ ಮದ್ರಸಾದಲ್ಲಿ ನಡೆದ ಕೋಝಿಕೋಡ್ ಜಿಲ್ಲಾ ಸಮಿತಿ ಸಭೆಯಲ್ಲಿ ನಾನು ಸಮಸ್ತದ ಅಧಿಕೃತ ಪದವಿಗೆ ಬಂದೆ. ಮರ್ಹೂಮ್ ಅಯನಿಕ್ಕಾಡ್ ಇಬ್ರಾಹಿಂ ಮುಸ್ಲಿಯಾರ್ ಅಧ್ಯಕ್ಷರಾಗಿ ಮತ್ತು ಅಂಡೋನ ಅಬ್ದುಲ್ಲಾ ಮುಸ್ಲಿಯಾರ್ ಪ್ರಧಾನ ಕಾರ್ಯದರ್ಶಿಯಾಗಿದ್ದ ಕೋಝಿಕೋಡ್ ಜಿಲ್ಲಾ ಸಮಸ್ತದ ಜಂಟಿ ಕಾರ್ಯದರ್ಶಿಯಾಗಿ ನಾನು ಆಯ್ಕೆಯಾದೆ.

ಪೂನೂರ್ ಬಳಿಯ ಕೋಳಿಕ್ಕಲ್‌ನಲ್ಲಿ ಕೊರೂರ್ ತರೀಖತ್ ವಿರುದ್ಧ ಸಮ್ಮೇಳನವೊಂದನ್ನು ಆಯೋಜಿಸಲಾಗಿತ್ತು. ಶಂಸುಲ್ ಉಲಮಾ ಇ.ಕೆ. ಅಬೂಬಕರ್ ಮುಸ್ಲಿಯಾರ್ ಸೇರಿದಂತೆ ಹಲವರು ಭಾಗವಹಿಸಿದ್ದ ಆ ಸಮ್ಮೇಳನದಲ್ಲಿ ಸ್ವಾಗತ ಭಾಷಣ ಮಾಡಿದ್ದು ನಾನೇ. ಸ್ಥಳೀಯ ನಿವಾಸಿ ಎಂಬ ನೆಲೆಯಲ್ಲಿ ನಾನು ಎಲ್ಲರನ್ನು ಸ್ವಾಗತಿಸಿದ್ದೆ. ಸಮ್ಮೇಳನದ ನಂತರ ನನ್ನನ್ನು ಕರೆದು, ‘ನೀನು ನಮ್ಮೊಂದಿಗೆ ಸಮಸ್ತದಲ್ಲಿ ಕಾರ್ಯಾಚರಿಸಬೇಕು’ ಎಂದು ಶಂಸುಲ್ ಉಲಮಾ ಇ.ಕೆ. ಅಬೂಬಕರ್ ಮುಸ್ಲಿಯಾರ್ ಕೇಳಿಕೊಂಡರು,” ಎಂದು ಹೇಳುವಾಗ ಉಸ್ತಾದ್ ಅವರ ಕಣ್ಣಾಲಿಗಳು ತುಂಬಿ ಬಂದವು.

“ನಮ್ಮನ್ನು ಯಾಕೆ ಪರಸ್ಪರ ಭಿನ್ನಿಸಲಾಯಿತು ಎಂದು ಯೋಚಿಸಿದಾಗ ಈಗಲೂ ನನಗೆ ಅಳು ಬರುತ್ತದೆ. ನಾವು ಪರಸ್ಪರ ದೂರ ಸರಿದರೆ ಮಾತ್ರ ಇಲ್ಲಿ ನವೀನ ವಿಚಾರಧಾರೆಗಳ ಜನರಿಗೆ ನುಸುಳಲು ಸಾಧ್ಯ ಎಂದು ಕೆಲವು ಜನರು ಅರ್ಥಮಾಡಿಕೊಂಡಿದ್ದರಿಂದ ಹಾಗೆ ಸಂಭವಿಸಿತು’ ಎಂದು ಉಸ್ತಾದ್ ಹೇಳಿದರು. ಆದಾಗ್ಯೂ, ಅಂದಿನಿಂದ ಇಂದಿನವರೆಗೆ ತಾನು ಸಮಸ್ತದ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಮುಂದುವರಿಯುತ್ತಿದ್ದೇನೆ” ಎಂದು ಅವರು ತಿಳಿಸಿದರು. ಸಮಸ್ತ ಸ್ಥಾಪಕ ನಾಯಕರ ಈಮಾನ್ (ವಿಶ್ವಾಸ) ಮತ್ತು ತಖ್ವಾ (ದೇವಭಯ) ಗಳೇ ನೂರು ವರ್ಷಗಳ ನಂತರವೂ ನಾವೆಲ್ಲರೂ ಅದೇ ವೇದಿಕೆಯಲ್ಲಿ ಒಟ್ಟುಗೂಡಲು ಕಾರಣವಾಗಿದೆ ಎಂದು ಉಸ್ತಾದ್ ನೆನಪಿಸಿದರು.

ಇದನ್ನೂ ಓದಿರಿ...