ಮಂಗಳೂರು, ಜೂ.23: ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಕೇಂದ್ರ ಮುಶಾವರ ಸದಸ್ಯರೂ, ದಕ್ಷಿಣ ಕನ್ನಡ ಜಿಲ್ಲಾ ಖಾಝಿ, ಪ್ರಸಿದ್ಧ ಇಸ್ಲಾಮಿಕ್ ವಿದ್ವಾಂಸ ಮೌಲಾನಾ ಅಲ್ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಲ್ ಅಝ್ಹರಿ (78) ಅವರು ಇಂದು (ಜೂನ್ 23, ಮಂಗಳವಾರ) ಬೆಳಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆ (ಯುನಿಟಿ ಹಾಸ್ಪಿಟಲ್) ಯಲ್ಲಿ ಅಲ್ಲಾಹನ ಕರೆಯೊಪ್ಪಿ ಇಹಲೋಕ ತ್ಯಜಿಸಿದ್ದಾರೆ.
ಕೆಲವು ಸಮಯದಿಂದ ಅನಾರೋಗ್ಯಕ್ಕೀಡಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾರೆ.
ಮೃತರು ಪತ್ನಿ, ಮೂವರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಸಂಖ್ಯೆಯ ಮುತಅಲ್ಲಿಮರು (ಶಿಷ್ಯರು), ಬಂಧುಮಿತ್ರರು ಮತ್ತು ಅಭಿಮಾನಿಗಳನ್ನು ಅಗಲಿದ್ದಾರೆ.
2010ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಖಾಝಿಯಾಗಿ ಅಧಿಕಾರ ಸ್ವೀಕರಿಸಿದ್ದ ತ್ವಾಕಾ ಉಸ್ತಾದ್ ಅವರು, ದ.ಕ. ಜಿಲ್ಲೆ ಮತ್ತು ಕೇರಳ ರಾಜ್ಯದ ಸುಮಾರು 200ಕ್ಕೂ ಅಧಿಕ ಜಮಾಅತ್ಗಳ ಜಂಟಿ ಖಾಝಿಯಾಗಿ ಸೇವೆ ಗೈದಿದ್ದಾರೆ. ಇವರು ಮುಸ್ಲಿಂ ಸಮುದಾಯದ ಅತ್ಯುನ್ನತ ಧಾರ್ಮಿಕ ಸಭೆಯಾದ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಕೇಂದ್ರ ಮುಶಾವರದ ಗೌರವಾನ್ವಿತ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.
ಇಸ್ಲಾಮಿಕ್ ಜಗತ್ತಿನ ಅತ್ಯಂತ ಪ್ರತಿಷ್ಠಿತ ಮತ್ತು ಐತಿಹಾಸಿಕ ವಿಶ್ವವಿದ್ಯಾಲಯವಾದ ಈಜಿಪ್ಟ್ನ ಅಲ್-ಅಝ್ಹರ್ ವಿಶ್ವವಿದ್ಯಾಲಯ ದಿಂದ ಉನ್ನತ ಧಾರ್ಮಿಕ ಶಿಕ್ಷಣವನ್ನು ಪಡೆದು ‘ಅಲ್ ಅಝ್ಹರಿ’ ಪದವಿ ಗಳಿಸಿದ್ದರು.
ಕರಾವಳಿ ಭಾಗದಲ್ಲಿ ಕೋಮು ಸೌಹಾರ್ದತೆ, ಶಾಂತಿ ಮತ್ತು ಸಹಬಾಳ್ವೆಯನ್ನು ಕಾಪಾಡುವಲ್ಲಿ ಇವರ ಪಾತ್ರ ದೊಡ್ಡದಾಗಿತ್ತು. ಎಲ್ಲಾ ಧರ್ಮದ ಮುಖಂಡರೊಂದಿಗೆ ಮತ್ತು ಆಡಳಿತ ವರ್ಗದೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದ ಅವರು ಸದಾ ಸಾಮಾಜಿಕ ಒಳಿತಿಗಾಗಿ ಶ್ರಮಿಸುತ್ತಿದ್ದರು.
ತ್ವಾಕಾ ಉಸ್ತಾದ್ ಅವರ ಹಠಾತ್ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಧಾರ್ಮಿಕ, ರಾಜಕೀಯ ಹಾಗೂ ಸಾಮಾಜಿಕ ವಲಯದ ಪ್ರಮುಖ ಗಣ್ಯರು ತೀವ್ರ ಆಘಾತ ಮತ್ತು ಸಂತಾಪ ವ್ಯಕ್ತಪಡಿಸಿದ್ದಾರೆ. ಅವರ ಅಗಲಿಕೆಯು ಕರಾವಳಿಯ ಮುಸ್ಲಿಂ ಸಮುದಾಯಕ್ಕೆ ಮಾತ್ರವಲ್ಲದೆ ಇಡೀ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ.
ಅಲ್ಲಾಹನು ಅವರ ಇಸ್ಲಾಮಿಕ್ ಹಾಗೂ ಸಾಮಾಜಿಕ ಸೇವೆಗಳನ್ನು ಸ್ವೀಕರಿಸಿ, ಅವರಿಗೆ ಜನ್ನತುಲ್ ಫಿರ್ದೌಸ್ ಕರುಣಿಸಲಿ. ಅವರ ಕುಟುಂಬಸ್ಥರು ಹಾಗೂ ಅಪಾರ ಅಭಿಮಾನಿಗಳಿಗೆ ಈ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ.















ಇನ್ನಷ್ಟು ಸುದ್ದಿಗಳು
ಅಂಜುಮಾನ್ ಸಿರಾಜುಲ್ ಇಸ್ಲಾಂ ಮದ್ರಸ ಮುಕ್ಕ- SBS ನೂತನ ಸಮಿತಿ ಅಸ್ತಿತ್ವಕ್ಕೆ
ರೆಸಿಡೆನ್ಸಿ ನಿಯಮ ತಿದ್ದುಪಡಿ- ವಿದೇಶಿಯರಿಗೆ ಇನ್ನು ಮುಂದೆ ಸ್ಪಾನ್ಸರ್ ರಹಿತವಾಗಿ ವೀಸಾ ಲಭ್ಯ
ಖತಾರ್ ಗ್ಯಾಸ್ ಪ್ಲಾಂಟ್ ಸ್ಫೋಟ: ಭಾರತೀಯರು ಸೇರಿದಂತೆ 13 ಮಂದಿ ಮೃತ್ಯು
ಸಮಸ್ತ ಶತಮಾನೋತ್ಸವ: ಕರ್ನಾಟಕ ರಾಜ್ಯ ಸ್ವಾಗತ ಸಮಿತಿ ಅಸ್ತಿತ್ವಕ್ಕೆ- ರಾಜ್ಯಾದ್ಯಂತ ಭವ್ಯ ಕಾರ್ಯಕ್ರಮಗಳ ರೂಪುರೇಷೆ
ಬೆಳಕು ಮತ್ತು ವಿಜ್ಞಾನದ ಅದ್ಭುತ ಸಂಗಮ: ಡಾ. ಮುಹಮ್ಮದ್ ರಾಫಿ ಚೆನ್ನಾರ್
ಕುಂಬ್ರದ ಇಂಡಿಯನ್ ಇವೆಂಟ್ಸ್ ಸಂಸ್ಥೆಗೆ ಸಿರಾಜುದ್ದೀನ್ ಖಾಸಿಮಿ ಉಸ್ತಾದ್ ಭೇಟಿ
ಖತಾರ್ನಲ್ಲಿ ಉದ್ಯೋಗಾವಕಾಶ: ಅಕೌಂಟಿಂಗ್, ಐಟಿ, ಎಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಭಾರಿ ಬೇಡಿಕೆ
‘ಮೆಟ್ರಾಶ್’ ವರ್ಕ್ ವೀಸಾಕ್ಕೆ ಅರ್ಜಿ ಸಲ್ಲಿಸಲು ಸುಲಭ ವಿಧಾನ- ಕತಾರ್ ಆಂತರಿಕ ಸಚಿವಾಲಯ
DKSC ಮಕ್ಕತುಲ್ ಮುಕರ್ರಮ ವಲಯ ಸಮಿತಿ: ನೂತನ ಅಧ್ಯಕ್ಷರಾಗಿ ಮುಹಮ್ಮದ್ ಶರೀಫ್ ಮರವೂರು ಆಯ್ಕೆ
ದೆಹಲಿಯಲ್ಲಿ ನವಜಾತ ಶಿಶುಗಳನ್ನು ಮಾರುವ ‘ಮಕ್ಕಳ’ ಮಾರುಕಟ್ಟೆ: ಬೃಹತ್ ಮಾಫಿಯಾ ಪತ್ತೆ