janadhvani

Kannada Online News Paper

ಸಚಿವ ಸಂಪುಟ ವಿಸ್ತರಣೆ: ಅಹಿಂದ, ಮುಸ್ಲಿಂ ಸಮುದಾಯಕ್ಕೆ ಅನ್ಯಾಯ- ದ.ಕ.ಜಿಲ್ಲಾ ಸಮಾನ ಮನಸ್ಕ ಸಂಘಟನೆಗಳ ಒಕ್ಕೂಟ ತೀವ್ರ ಆಕ್ಷೇಪ

ಇದು ಕೇವಲ ಒಬ್ಬ ವ್ಯಕ್ತಿಗೆ ಆದ ಅನ್ಯಾಯವಲ್ಲ, ಬದಲಿಗೆ ಲಕ್ಷಾಂತರ ಅಲ್ಪಸಂಖ್ಯಾತ ಮತದಾರರ ಭಾವನೆಗಳನ್ನು ನಿರ್ಲಕ್ಷಿಸಿದಂತಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಮಂಗಳೂರು, ಜೂ.20: ರಾಜ್ಯದಲ್ಲಿ ಸಾಮಾಜಿಕ ನ್ಯಾಯ, ಅಹಿಂದ ತತ್ವ ಹಾಗೂ ಅಲ್ಪಸಂಖ್ಯಾತರ ಹಕ್ಕುಗಳ ಪರವಾಗಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್‌ ಸರ್ಕಾರವು ಇತ್ತೀಚಿನ ಸಚಿವ ಸಂಪುಟ ವಿಸ್ತರಣೆಯಲ್ಲಿ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯ ಹಾಗೂ ಅಹಿಂದ ವರ್ಗದ ಆಶೋತ್ತರಗಳನ್ನು ಸಂಪೂರ್ಣವಾಗಿ ಕಡೆಗಣಿಸಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಸಮಾನ ಮನಸ್ಕ ಸಂಘಟನೆಗಳ ಒಕ್ಕೂಟ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ಕುರಿತು ಮಂಗಳೂರಿನಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿರುವ ಒಕ್ಕೂಟದ ಪ್ರಮುಖರು ಸರ್ಕಾರದ ನಡೆಗೆ ತೀವ್ರ ನಿರಾಶೆ ಹಾಗೂ ಆಕ್ರೋಶ ಹೊರಹಾಕಿದ್ದಾರೆ.

ರಾಜ್ಯದ ಆಡಳಿತ ಮತ್ತು ರಾಜಕೀಯ ವ್ಯವಸ್ಥೆಯಲ್ಲಿ ಅಲ್ಪಸಂಖ್ಯಾತರಿಗೆ ಸಮರ್ಪಕ ಪ್ರಾತಿನಿಧ್ಯ ದೊರೆಯಬೇಕು ಎಂಬುದು ದೀರ್ಘಕಾಲದ ಬೇಡಿಕೆಯಾಗಿದ್ದರೂ, ಪ್ರಸ್ತುತ ಸಂಪುಟ ವಿಸ್ತರಣೆಯಲ್ಲಿ ಈ ಸಮುದಾಯದ ಭಾವನೆಗಳಿಗೆ ತಕ್ಕ ಗೌರವ ಸಿಕ್ಕಿಲ್ಲ ಎಂದು ಮುಖಂಡರು ದೂರಿದ್ದಾರೆ. ವಿಶೇಷವಾಗಿ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ಪ್ರಬಲ ಧ್ವನಿಯಾಗಿ ಗುರುತಿಸಿಕೊಂಡಿರುವ, ಪಕ್ಷದ ಬೆಳವಣಿಗೆಗೆ ಶ್ರಮಿಸಿರುವ ಸಚಿವರಾದ ಬಿ. ಝಡ್. ಜಮೀರ್ ಅಹಮದ್ ಖಾನ್ ಅವರಿಗೆ ಸಚಿವ ಸಂಪುಟದಲ್ಲಿ ಇನ್ನಷ್ಟು ಮಹತ್ವದ ಸ್ಥಾನಮಾನ ನೀಡದಿರುವುದು ಹಾಗೂ ಮೊದಲ ಹಂತದ ಸಂಪುಟ ವಿಸ್ತರಣೆಯಲ್ಲಿ ಅವರನ್ನು ಪರಿಗಣಿಸದಿರುವುದು ಸಮುದಾಯಕ್ಕೆ ಎಸಗಿದ ಅತಿದೊಡ್ಡ ಅನ್ಯಾಯವಾಗಿದೆ ಎಂದು ಒಕ್ಕೂಟದ ನಾಯಕರು ಪ್ರತಿಪಾದಿಸಿದ್ದಾರೆ.

ಇದು ಕೇವಲ ಒಬ್ಬ ವ್ಯಕ್ತಿಗೆ ಆದ ಅನ್ಯಾಯವಲ್ಲ, ಬದಲಿಗೆ ಲಕ್ಷಾಂತರ ಅಲ್ಪಸಂಖ್ಯಾತ ಮತದಾರರ ಭಾವನೆಗಳನ್ನು ನಿರ್ಲಕ್ಷಿಸಿದಂತಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಒಕ್ಕೂಟದ ಪ್ರಮುಖ ಆಗ್ರಹಗಳು:
ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸಮಾನ ಮನಸ್ಕ ಸಂಘಟನೆಗಳ ಒಕ್ಕೂಟವು ರಾಜ್ಯ ಸರ್ಕಾರ ಹಾಗೂ ಕಾಂಗ್ರೆಸ್ ಹೈಕಮಾಂಡ್‌ಗೆ ಕೆಳಕಂಡ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಒಕ್ಕೊರಲಿನಿಂದ ಆಗ್ರಹಿಸಿದೆ:

  • ನ್ಯಾಯಯುತ ಪ್ರಾತಿನಿಧ್ಯ: ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯಕ್ಕೆ ಸಚಿವ ಸಂಪುಟ ಮತ್ತು ಪ್ರಮುಖ ಆಡಳಿತಾತ್ಮಕ ಹುದ್ದೆಗಳಲ್ಲಿ ನ್ಯಾಯಯುತ ಪ್ರಾತಿನಿಧ್ಯ ನೀಡಬೇಕು ಹಾಗೂ ಕನಿಷ್ಠ 5 ಸಚಿವ ಸ್ಥಾನಗಳನ್ನು ಮುಸ್ಲಿಂ ಸಮುದಾಯಕ್ಕೆ ಒದಗಿಸಬೇಕು.
  • ಡಿಸಿಎಂ ಸ್ಥಾನಕ್ಕೆ ಒತ್ತಾಯ: ಮುಸ್ಲಿಂ ಸಮುದಾಯದ ಪ್ರಬಲ ಪ್ರತಿನಿಧಿಯಾಗಿರುವ ಬಿ. ಝಡ್. ಜಮೀರ್ ಅಹಮದ್ ಖಾನ್ ಅವರ ರಾಜಕೀಯ ಅನುಭವ ಮತ್ತು ಜನಬೆಂಬಲಕ್ಕೆ ತಕ್ಕ ಗೌರವಯುತ ಸ್ಥಾನಮಾನ ಕಲ್ಪಿಸಬೇಕು. ಮುಸ್ಲಿಂ ಹಾಗೂ ಅಹಿಂದ ವರ್ಗವು ಅವರನ್ನು ಉಪಮುಖ್ಯಮಂತ್ರಿಯಾಗಿ (ಡಿಸಿಎಂ) ಕಾಣಲು ಬಯಸುತ್ತದೆ.
  • ಡಾ. ಎಚ್. ಸಿ. ಮಹಾದೇವಪ್ಪ ಅವರಿಗೆ ಸ್ಥಾನ: ದಲಿತ ಸಮುದಾಯದ ಹಿರಿಯ ಅನುಭವಿ ನಾಯಕ ಮತ್ತು ಪ್ರಗತಿಪರ ಸಂಘಟನೆಗಳ ಪ್ರೋತ್ಸಾಹಕರಾದ ಡಾ. ಎಚ್. ಸಿ. ಮಹಾದೇವಪ್ಪ ಅವರನ್ನು ಸಚಿವ ಸಂಪುಟ ರಚನೆಯಲ್ಲಿ ನಿರ್ಲಕ್ಷಿಸಿರುವುದು ಸರಿಯಲ್ಲ, ಅವರನ್ನು ತಕ್ಷಣವೇ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬೇಕು.
  • ಅಹಿಂದ ಕಡೆಗಣನೆಗೆ ತಡೆ: ಅಹಿಂದ ವರ್ಗಗಳ ರಾಜಕೀಯ ಹಕ್ಕುಗಳನ್ನು ಕಡೆಗಣಿಸುವ ಪ್ರವೃತ್ತಿಯನ್ನು ಸರ್ಕಾರ ತಕ್ಷಣವೇ ನಿಲ್ಲಿಸಬೇಕು.
  • ಸಮಾನ ಪಾಲು: ಮುಂದಿನ ಎಲ್ಲಾ ರಾಜಕೀಯ ಹಾಗೂ ಆಡಳಿತಾತ್ಮಕ ನೇಮಕಾತಿಗಳಲ್ಲಿ ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಮತ್ತು ದಲಿತರಿಗೆ ನ್ಯಾಯಸಮ್ಮತ ಪಾಲನ್ನು ಖಚಿತಪಡಿಸಬೇಕು.

“ಸಾಮಾಜಿಕ ನ್ಯಾಯ ಮತ್ತು ಸಮಾನ ಅವಕಾಶಗಳ ಬಗ್ಗೆ ಮಾತನಾಡುವ ಸರ್ಕಾರವು ಕೇವಲ ಭಾಷಣಕ್ಕೆ ಸೀಮಿತವಾಗದೆ, ತನ್ನ ಕಾರ್ಯಗಳ ಮೂಲಕವೂ ಅದನ್ನು ಸಾಬೀತುಪಡಿಸಬೇಕು. ಅಲ್ಪಸಂಖ್ಯಾತ ಸಮುದಾಯದ ಭಾವನೆಗಳಿಗೆ ಗೌರವ ನೀಡಿ ಸರ್ಕಾರ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಒಕ್ಕೂಟವು ಎಚ್ಚರಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದವರು:

ಲೋಲಾಕ್ಷ (ಅಧ್ಯಕ್ಷರು, ಪರಿಶಿಷ್ಟ ಜಾತಿಗಳು ಮತ್ತು ಬುಡಕಟ್ಟುಗಳ ಸಂಘ ಸಂಸ್ಥೆಗಳ ಮಹಾ ಒಕ್ಕೂಟ), ಭರತೇಷ್ ಬಜಾಲ್ (ಅಧ್ಯಕ್ಷರು, ಅಹಿಂದ ಮಂಗಳೂರು), ಸಿರಾಜ್ ಬಟ್ಟೆ (ಅಧ್ಯಕ್ಷರು: ದಕ್ಷಿಣ ಕನ್ನಡ ಮುಸ್ಲಿಂ ಜನಪ್ರತಿನಿಧಿಗಳ ಒಕ್ಕೂಟ ಮತ್ತು ಕಾಂಗ್ರೆಸ್‌ ಮುಖಂಡರು), ಇರ್ಷಾದ್ UT (ಮಾಜಿ ಅಧ್ಯಕ್ಷರು, ಮುಸ್ಲಿಂ ಜಸ್ಟಿಸ್ ಫೋರಂ), ಹನೀಫ್ ಖಾನ್ ಕೊಡಾಜೆ (ಪ್ರಧಾನ ಕಾರ್ಯದರ್ಶಿ, ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಸಮಾಜ), ಅಶ್ರಫ್ ಕಲ್ಲೇಗ (ಅಧ್ಯಕ್ಷರು, ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ (ರಿ), ಪುತ್ತೂರು), ಸಲಾಂ ಉಚ್ಚಿಲ್ (ಸಾಮಾಜಿಕ ಹೋರಾಟಗಾರರು), ಸಲೀಂ ಫರಂಗಿಪೇಟೆ (ಸಾಮಾಜಿಕ ಹೋರಾಟಗಾರರು, ಪಬ್ಲಿಕ್ ವಾಯ್ಸ್ ಮುಖ್ಯಸ್ಥರು) ಹಾಗೂ ಇಯ್ತಿಯಾಝ್ ಕೆದುಂಬಾಡಿ (ಪ್ರಧಾನ ಕಾರ್ಯದರ್ಶಿ, MNG ಫೌಂಡೇಷನ್ (ರಿ), ಮಂಗಳೂರು).

ಇದನ್ನೂ ಓದಿರಿ...