janadhvani

Kannada Online News Paper

ಮಂಗಳೂರು: ಗೃಹ ಸಚಿವರನ್ನು ಭೇಟಿ ಮಾಡಿ ಮುಸ್ಲಿಮರ ನೋವುಗಳನ್ನು ಹಂಚಿಕೊಂಡ ಮುಖಂಡರು

ವಕ್ಫ್ ಪ್ರತಿಭಟನೆ ಮಾಡಿದವರ ಮೇಲೆ ಕೇಸ್ ದಾಖಲಿಸಿರುವ ಪೊಲೀಸರು, ನಿಷೇಧಾಜ್ಞೆ ಜಾರಿಯಲ್ಲಿರುವಾಗ ಬಲವಂತದ ಬಂದ್ ಮಾಡಿಸಿ ಸಾವಿರಾರು ಜನರ ಮೆರವಣಿಗೆಗೆ ಹೇಗೆ ಅವಕಾಶ ಕೊಟ್ಟರು? ಹೈಕೋರ್ಟ್‌ ಆದೇಶಗಳು ಕೇವಲ ಮುಸ್ಲಿಮರಿಗೆ ಮಾತ್ರ ಅನ್ವಯವಾಗುವುದಾ ಅಥವಾ ಸಂಘಪರಿವಾರಕ್ಕೂ ಅನ್ವಯವಾಗುತ್ತಾ ಎಂದು ಗೃಹ ಮಂತ್ರಿಗಳು ನಮಗೆ ಹೇಳಬೇಕು.

ಮಂಗಳೂರು,ಮೇ.3: ನಗರದ ಸರ್ಕಿಟ್ ಹೌಸ್ ನಲ್ಲಿ ರಾಜ್ಯ ಗೃಹ ಸಚಿವ ಮತ್ತು ಉಸ್ತುವಾರಿ ಸಚಿವರನ್ನು ಭೇಟಿಯಾದ ಮುಸ್ಲಿಂ ಮುಖಂಡರ ನಿಯೋಗ ಜಿಲ್ಲೆಯ ಹಲವು ವಿಚಾರಗಳನ್ನು ಪ್ರಸ್ತಾಪಿಸಿ ಮುಸ್ಲಿಮರ ಆತಂಕಗಳು ಮತ್ತು ನೋವುಗಳನ್ನು ಹಂಚಿಕೊಂಡರು.

ಇತ್ತೀಚೆಗೆ ಮಂಗಳೂರು ನಗರದ ಹೊರವಲಯದಲ್ಲಿ ನಡೆದ ಎರಡು ಕೊಲೆ ಪ್ರಕರಣಗಳು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೇಳಿಬಂದ ದ್ವೇಷ ಭಾಷಣಗಳು, ಪ್ರಚೋದನಕಾರಿ ಹೇಳಿಕೆಗಳು ಮತ್ತು ಅಹಿತಕರ ಘಟನೆಗಳಿಗೆ ಸಂಬಂಧಿಸಿ ಜಿಲ್ಲಾ ಕಾಂಗ್ರೆಸ್‌ ಅಲ್ಪಸಂಖ್ಯಾತ ಘಟಕದ ನಾಯಕರು ಮತ್ತು ಮುಸ್ಲಿಂ ಮುಖಂಡರು ಗೃಹ ಸಚಿವ ಡಾ. ಜಿ.ಪರಮೇಶ್ವ‌ರ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಜಿಲ್ಲೆಯಲ್ಲಿ ನಡೆದ ಮುಸ್ಲಿಂ ದ್ವೇಷ ಭಾಷಣಗಳ ವಿರುದ್ಧ ಮತ್ತು ಮುಸ್ಲಿಮರ ನಂಬಿಕೆ ಆಚಾರ ವಿಚಾರವನ್ನು ಅವಹೇಳನ ಮಾಡಿದವರ ವಿರುದ್ಧ ಕಠಿಣ ಕ್ರಮಕೈಗೊಳ್ಳದಿರುವುದು, ಕುಡುಪು ಗುಂಪು ಹತ್ಯೆಯನ್ನು ಪೊಲೀಸರು ಮತ್ತು ಸರ್ಕಾರ ನಿರ್ಲಕ್ಷಿಸಿದ್ದು, ಸುಹಾಸ್‌ ಹತ್ಯೆ ಸಂಬಂಧ ಮುಸ್ಲಿಮರ ಮೇಲಿನ ಆರೋಪಗಳು ಮತ್ತು ಮುಸ್ಲಿಮರ ಮೇಲೆ ನಡೆದ ದಾಳಿಗಳು, ಸಂಘಪರಿವಾರ ಕರೆಕೊಟ್ಟ ಬಂದ್‌ ವೇಳೆ ಜಿಲ್ಲಾಡಳಿತ ಕಣ್ಮುಚ್ಚಿ ಕುಳಿತಿದ್ದು, ದಕ್ಷಿಣ ಕನ್ನಡ ಮತ್ತು ಮಂಗಳೂರು ನಗರ ಪೊಲೀಸರ ತಾರತಮ್ಯ ಮತ್ತು ನಿರ್ಲಕ್ಷ್ಯ.. ಹೀಗೆ ಹಲವು ವಿಚಾರಗಳನ್ನು ಪ್ರಸ್ತಾಪಿಸಿ ಸಚಿವರಿಬ್ಬರಿಗೆ ಕಾಂಗ್ರೆಸಿನ ಮುಸ್ಲಿಂ ಮುಖಂಡರು ಕ್ಲಾಸ್ ನೀಡಿದ್ದಾರೆ.

ದ.ಕ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಕೆ.ಕೆ ಶಾಹುಲ್‌ ಹಮೀದ್‌ ಮಾತನಾಡಿ, ಕುಡುಪು ಗುಂಪು ಹತ್ಯೆ ಪ್ರಕರಣದಲ್ಲಿ ಪೊಲೀಸರ ವೈಫಲ್ಯವನ್ನು ವಿವರವಾಗಿ ಸಚಿವರಿಬ್ಬರಿಗೆ ತಿಳಿಸಿದರು. ಆರಂಭದ 36 ಗಂಟೆಗಳ ಕಾಲ ಪೋಲೀಸರು ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ಮಾಡಿದ್ದರು. 48 ಗಂಟೆಗಳ ಬಳಿಕ ಗುಂಪು ಹತ್ಯೆ ನಡೆದಿದೆ ಎಂದು ಒಪ್ಪಿಕೊಂಡರು.

ಮೃತದೇಹದಲ್ಲಿ ಗಾಯಗಳಿಲ್ಲ ಎಂದು ಪೊಲೀಸರು ಸುಳ್ಳು ಮಾಹಿತಿ ನೀಡಿದ್ದರು, ಮುಸ್ಲಿಂ ಮುಖಂಡರ ನಿಯೋಗ ಭೇಟಿ ನೀಡಿದಾಗ ಮೃತದೇಹ ಪೂರ್ತಿ ಗಾಯಗಳಿತ್ತು, ಪೊಲೀಸರು ಕರ್ತವ್ಯ ಲೋಪ ಮಾಡಿದ್ದಾರೆ ಎಂದರು. ಗುಂಪು ಹತ್ಯೆಯ ಪ್ರಮುಖ ಆರೋಪಿ ರವೀಂದ್ರ ನಾಯಕ್ ಇನ್ನೂ ಬಂಧನ ಆಗಿಲ್ಲ, ಆತ 27ನೇ ತಾರೀಖಿನಂದು ಇದೇ ಸರ್ಕಿಟ್ ಹೌಸ್ ಗೆ ಬಂದು ಪೊಲೀಸ್ ಅಧಿಕಾರಿಗಳ ಜೊತೆ ಮಾತನಾಡಿ ಹೋಗಿರುವ ಮಾಹಿತಿ ಇದೆ, ಆ ಬಗ್ಗೆ ಸರ್ಕಿಟ್ ಹೌಸ್ ನ ಸಿಸಿಟಿವಿ ಪರಿಶೀಲಿಸಿ ಕ್ರಮ ತೆಗೆದುಕೊಳ್ಳಬೇಕು, ಮಂಗಳೂರು ಪೊಲೀಸರ ತನಿಖೆಯಲ್ಲಿ ನಮಗೆ ನಂಬಿಕೆ ಇಲ್ಲ, ತನಿಖೆಗಾಗಿ ವಿಶೇಷ ತನಿಖಾ ತಂಡ ರಚನೆ ಮಾಡಬೇಕು ಎಂದು ಒತ್ತಾಯಿಸಿದರು.

ರೌಡಿಶೀಟರ್ ಸುಹಾಸ್ ಹತ್ಯೆಗೆ ಪ್ರತೀಕಾರವಾಗಿ ಮುಸ್ಲಿಮರ ಹೆಣ ಬೀಳಿಸುತ್ತೇವೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಬಹಿರಂಗವಾಗಿ ಬೆದರಿಕೆ ಹಾಕಲಾಗುತ್ತಿದ್ದರೂ ಪೊಲೀಸರು ಕ್ರಮಕೈಗೊಳ್ಳುತ್ತಿಲ್ಲ, ದ್ವೇಷ ಭಾಷಣ ಮಾಡುವವರು ಮತ್ತು ಪ್ರಚೋದನೆ ಮಾಡುವವರ ಮೇಲೆಯೂ ಕಾನೂನು ಕ್ರಮಗಳಾಗುತ್ತಿಲ್ಲ, ಜಿಲ್ಲೆಯ ಮುಸ್ಲಿಮರು ಆತಂಕದಲ್ಲಿದ್ದಾರೆ, ಮುಸ್ಲಿಮರ ಆತಂಕವನ್ನು ದೂರ ಮಾಡಿ ಜಿಲ್ಲೆಯಲ್ಲಿ ಶಾಂತಿ ಸ್ಥಾಪಿಸಬೇಕು, ಜಿಲ್ಲೆಯ ಪೊಲೀಸರ ಮೇಲೆ ಮುಸ್ಲಿಮರಿಗೆ ಯಾವ ವಿಶ್ವಾಸವೂ ಉಳಿದಿಲ್ಲ, ದಕ್ಷ ಪೊಲೀಸ್‌ ಅಧಿಕಾರಿಗಳನ್ನು ಜಿಲ್ಲೆಗೆ ಕರೆತಂದು ಸಮಾಜಘಾತುಕರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಕಾಂಗ್ರೆಸ್‌ ಮುಖಂಡ ಸುಹೈಲ್ ಕಂದಕ್ ನೇರವಾಗಿ ಗೃಹ ಸಚಿವರು ಮತ್ತು ಉಸ್ತುವಾರಿ ಸಚಿವರನ್ನು ತರಾಟೆಗೆ ತೆಗೆದುಕೊಂಡರು. ಮೇಜು ತಟ್ಟಿ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳಿ ತಮ್ಮ ಆಕ್ರೋಶ ಹೊರಹಾಕಿದರು. ಕುಡುಪು ಗುಂಪು ಹತ್ಯೆ ಸಂಬಂಧ ಮೃತ ಅಶ್ರಫ್ ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾನೆ ಎಂದು ಪೊಲೀಸ್‌ ಕಮಿಷನ‌ರ್ ಹೇಳದಿದ್ದರೂ ನೀವು ಯಾಕೆ ಆ ಮಾತನ್ನು ಹೇಳಿದ್ದೀರಿ ಎಂಬುದಕ್ಕೆ ಗೃಹ ಸಚಿವರು ಸ್ಪಷ್ಟನೆ ನೀಡಬೇಕು. ಅಶ್ರಫ್‌ ಕೊಲೆ ನಡೆದ ನಂತರದಲ್ಲಿ ನೀವು ಜಿಲ್ಲೆಗೆ ಬರಲು ಯಾಕೆ ಇಷ್ಟು ತಡ ಮಾಡಿದ್ರಿ ಎಂದು ಸಮುದಾಯ ಪ್ರಶ್ನಿಸುತ್ತಿದೆ, ನಾವು ಅವರಿಗೆ ಏನು ಉತ್ತರ ಕೊಡಬೇಕು? ಗುಂಪು ಹತ್ಯೆಯ ಪ್ರಮುಖ ಆರೋಪಿ ಇವತ್ತು ಕೂಡ ಶಾಸಕ ಭರತ್ ಶೆಟ್ಟಿ ಮನೆಯಲ್ಲಿದ್ದಿದ್ದನ್ನು ಕಂಡವರಿದ್ದಾರೆ, ಆತನನ್ನು ಯಾಕೆ ಅರೆಸ್ಟ್ ಮಾಡ್ತಿಲ್ಲ ಎಂಬ ನಮ್ಮ ಪ್ರಶ್ನೆಗೆ ಗೃಹ ಸಚಿವರು ಉತ್ತರ ಕೊಡಬೇಕು ಎಂದು ಪಟ್ಟು ಹಿಡಿದರು.

ಉಸ್ತುವಾರಿ ಸಚಿವರು ಅನ್ಯಸಮುದಾಯದ ಯುವಕ ಎಂದು ಹೇಳಿಕೆ ಕೊಟ್ಟಿದ್ದಾರೆ. ಹಾಗಾದ್ರೆ ಸುಹೈಲ್ ಕಂದಕ್ ನಾಳೆ ಸತ್ತಾಗ ಅನ್ಯಸಮುದಾಯದ ವ್ಯಕ್ತಿ ಆಗುತ್ತಾನಾ ಎಂದು ಉಸ್ತುವಾರಿ ಸಚಿವರು ಹೇಳಬೇಕು? ವಕ್ಫ್ ಪ್ರತಿಭಟನೆ ಮಾಡಿದವರ ಮೇಲೆ ಕೇಸ್ ದಾಖಲಿಸಿರುವ ಪೊಲೀಸರು, ನಿಷೇಧಾಜ್ಞೆ ಜಾರಿಯಲ್ಲಿರುವಾಗ ಬಲವಂತದ ಬಂದ್ ಮಾಡಿಸಿ ಸಾವಿರಾರು ಜನರ ಮೆರವಣಿಗೆಗೆ ಹೇಗೆ ಅವಕಾಶ ಕೊಟ್ಟರು? ಹೈಕೋರ್ಟ್‌ ಆದೇಶಗಳು ಕೇವಲ ಮುಸ್ಲಿಮರಿಗೆ ಮಾತ್ರ ಅನ್ವಯವಾಗುವುದಾ ಅಥವಾ ಸಂಘಪರಿವಾರಕ್ಕೂ ಅನ್ವಯವಾಗುತ್ತಾ ಎಂದು ಗೃಹ ಮಂತ್ರಿಗಳು ನಮಗೆ ಹೇಳಬೇಕು.

ಶರಣ್ ಪಂಪೈಲ್ ಮೇಲೆ ಹಲವಾರು ಕ್ರಿಮಿನಲ್‌ ಪ್ರಕರಣಗಳಿದ್ದರೂ ಆತನನ್ನು ಬಂಧಿಸಲು ಯಾಕೆ ಸಾಧ್ಯವಾಗುತ್ತಿಲ್ಲ? ಇಲ್ಲಿ ಗೃಹ ಮಂತ್ರಿ ಯಾರು, ಬಿಜೆಪಿಯವರಾ, ಕಾಂಗ್ರೆಸಿನವರಾ? ಎಂದು ಜನರು ಕೇಳುತ್ತಿದ್ದಾರೆ. ಆ ಪ್ರಶ್ನೆಗೆ ನಮಗೆ ಉತ್ತರಿಸಲು ಆಗುತ್ತಿಲ್ಲ. ಶರಣ್ ಪಂಪೈಲ್ ನನ್ನು ಬಂಧಿಸದಿದ್ದರೆ ಅಡ್ಯಾ‌ರ್ ಮಾದರಿಯಲ್ಲಿ ಮತ್ತೊಂದು ಪ್ರತಿಭಟನೆ ನಡೆಸಬೇಕಾದ ಪ್ರಸಂಗ ಬರಬಹುದು ಎಂದು ಎಚ್ಚರಿಸಿದರು.

ದಕ್ಷಿಣ ಕನ್ನಡದ ಇವತ್ತಿನ ಆತಂಕಗಳಿಗೆ ಮಾಧ್ಯಮಗಳು ಕೂಡ ಕಾರಣವಾಗಿದೆ, ಕೆಲ ಮಾಧ್ಯಮಗಳು ಜನರನ್ನು ಹಿಂದೂ ಮುಸ್ಲಿಂ ಎಂದು ಗಲಾಟೆ ಮಾಡಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದೆ. ಬಿಜೆಪಿಯ ಶಾಸಕರು ಧರ್ಮ ದ್ವೇಷದ ಮಾತುಗಳನ್ನಾಡುತ್ತಿದ್ದಾರೆ, ಅವರನ್ನು ಕಟ್ಟಿ ಹಾಕಲು ಸರ್ಕಾರ ವಿಫಲವಾಗಿರುವುದು ಯಾಕೆ? ಮುಸ್ಲಿಮರು ಇಲ್ಲಿ ಎರಡನೇ ದರ್ಜೆ ಪ್ರಜೆಗಳಾ? ನಮಗೆ ಜೀವಿಸುವ ಹಕ್ಕು ಇಲ್ಲವೇ? ಎಂದು ಪ್ರಶ್ನಿಸಿದರು. ನಾವೇನು ಲಜ್ಜೆಗೆಟ್ಟವರಾ? ನಮಗೆ ಮಾನ ಮರ್ಯಾದೆ ಇಲ್ವಾ? ಎಂದು ಮುಸ್ಲಿಂ ಸಮುದಾಯ ಅಸಹಾಯಕವಾಗಿ ಪ್ರಶ್ನಿಸುತ್ತಿದೆ. ನಮ್ಮ ಸಮುದಾಯಕ್ಕೆ ಉತ್ತರ ಕೊಡಲು ನಮಗೆ ಸಾಧ್ಯವಾಗುತ್ತಿಲ್ಲ, ಅವರಿಗೆ ಮುಖ ತೋರಿಸಲು ನಮಗೆ ಸಾಧ್ಯವಾಗುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಸಮುದಾಯದ ಸಮಸ್ಯೆಯನ್ನು ನಿಮಗೆ ತಿಳಿಸಿ ಅದನ್ನು ನೀವು ಪರಿಹರಿಸದಿದ್ದರೆ ನಾವು ಪಕ್ಷದಲ್ಲಿ ಇರುವುದಿಲ್ಲ. ನಮಗೆ ಅಷ್ಟು ಬೇಸರ ಇದೆ. ಸಮುದಾಯದ ನೋವನ್ನು ಅರ್ಥ ಮಾಡಿಕೊಳ್ಳಲು ಇಲ್ಲಿ ಯಾರೂ ಇಲ್ಲ. ನಮ್ಮ ಸಮುದಾಯಕ್ಕೆ ಸಮಸ್ಯೆಯಾದರೆ ಯು.ಟಿ ಖಾದ‌ರ್, ಇನಾಯತ್ ಅಲಿ, ರಮಾನಾಥ ರೈ, ಐವನ್ ಡಿಸೋಜಾ, ಪದ್ಮರಾಜ್, ಮಿಥುನ್ ರೈ ಬಿಟ್ರೆ ಬೇರೆ ಯಾರು ನಾಯಕರು ಇಲ್ವಾ? ವಿರೋಧಿಗಳು ನಮ್ಮ ನಾಯಕರನ್ನು ತೇಜೋವಧೆ ಮಾಡುವಾಗ ಅದನ್ನು ಎದುರಿಸಲು ನಮ್ಮಲ್ಲಿ ಅಸ್ತ್ರಗಳೇ ಇಲ್ಲದಂತಾಗಿದೆ. ನಮ್ಮ ಮನಸ್ಸಿನಲ್ಲಿ ಅಷ್ಟು ನೋವಿದೆ, ಹಾಗಾಗಿ ಇವತ್ತು ಅವಕಾಶ ಸಿಕ್ಕಿದ್ದರಿಂದ ನಮ್ಮ ನೋವನ್ನು ಹೊರಗೆ ಹಾಕುತ್ತಿದ್ದೇವೆ ಎಂದರು.

ಮಾಜಿ ಮೇಯ‌ರ್ ಕೆ.ಅಶ್ರಫ್‌ ಏರುಧ್ವನಿಯಲ್ಲಿ ಮಾತಾಡಿದರು. ಜಿಲ್ಲೆಯ ಬಿಜೆಪಿಯ ಶಾಸಕರು, ಸಂಘಪರಿವಾರದ ಮುಖಂಡರು ನಿರಂತರವಾಗಿ ಮುಸ್ಲಿಂ ದ್ವೇಷ ಭಾಷಣ ಮಾಡುತ್ತಿದ್ದಾರೆ, ಕೋಮು ದ್ವೇಷದ ಹೇಳಿಕೆ ನೀಡುತ್ತಿದ್ದಾರೆ, ಇದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಅಶ್ರಫ್ ಅವರ ಗುಂಪು ಹತ್ಯೆ ನಡೆದಾಗ ಮುಸ್ಲಿಮರು ಸಂಯಮ ಪಾಲಿಸಿದ್ದರು. ಆದರೆ ಸುಹಾಸ್ ಹತ್ಯೆಯಾದಾಗ ಕಾನೂನು ಸುವ್ಯವಸ್ಥೆ ಹಾಳಾಯಿತು. ಮುಸ್ಲಿಮರ ಮೇಲೆ ದಾಳಿಗಳು ನಡೆದಿದೆ. ಶರಣ್ ಪಂಪೈಲ್ ಬಂದ್ ಗೆ ಕರೆಕೊಟ್ಟಿದ್ದರಿಂದ ಹಿಂಸೆ ನಡೆದಿದೆ, ಶರಣ್ ಪಂಪೈಲ್ ಮೇಲೆ ಕೇಸ್ ದಾಖಲಿಸಿ ಆತನನ್ನು ಬಂಧನ ಮಾಡಬೇಕು. ಆತನನ್ನು ಇಷ್ಟರವರೆಗೆ ಬಂಧಿಸದೆ ಬಿಟ್ಟಿರುವುದೇ ತಪ್ಪು. ಗುಂಪು ಹತ್ಯೆ ಪ್ರಕರಣದಲ್ಲಿ ಬಿಜೆಪಿಯ ಮಾಜಿ ಕಾರ್ಪೊರೇಟ‌ರ್ ಪತಿ ರವೀಂದ್ರ ನಾಯಕ್ ನನ್ನು ಬಂಧನ ಮಾಡಲೇಬೇಕು. ಚೂರಿ ಇರಿತಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿರುವ ಕೂಲಿಕಾರ್ಮಿಕ ನೌಶಾದ್ ಅವರ ಆಸ್ಪತ್ರೆ ಖರ್ಚುವೆಚ್ಚಗಳನ್ನು ಸರ್ಕಾರ ಭರಿಸಬೇಕು ಎಂದರು.

ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ನಾಸಿರ್ ಲಕ್ಕಿಸ್ಟಾರ್ ಮಾತನಾಡಿ, ಮುಸ್ಲಿಮರು ಕಾಂಗ್ರೆಸಿಗೆ ಮತ ನೀಡುತ್ತಾ ಬಂದಿದ್ದಾರೆ, ಹೀಗೆ ಮುಂದುವರಿದರೆ ನಮ್ಮ ವಾರ್ಡ್ ನಲ್ಲಿ ಹೋಗಿ ಮತ ಕೇಳಲು ನಮಗೆ ಸಾಧ್ಯವಿಲ್ಲ, ನಮ್ಮನ್ನು ಓಡಿಸುವ ಪರಿಸ್ಥಿತಿ ಬರಬಹುದು. ನಾವು 90 ಪರ್ಸೆಂಟ್ ಮತವನ್ನು ಕಾಂಗ್ರೆಸಿಗೆ ಕೊಟ್ಟರೂ ನಮ್ಮ ಕಷ್ಟ ಸಮಸ್ಯೆಗಳಿಗೆ ಯಾವ ನಾಯಕರೂ ಸ್ಪಂದಿಸುತ್ತಿಲ್ಲ ಎಂದು ಮುಸ್ಲಿಮರು ದೂರುತ್ತಿದ್ದಾರೆ. ಮುಸ್ಲಿಮರು ಇಲ್ಲಿಯವರೆಗೆ ಶಾಂತಿ ಕಾಪಾಡುತ್ತಾ ಬಂದಿದ್ದಾರೆ. ಅಶ್ರಫ್ ಅವರ ಮೃತದೇಹವನ್ನಿಟ್ಟು ಪ್ರತಿಭಟಿಸಲು ನಮಗೂ ಅವಕಾಶ ಇತ್ತು, ಆದರೆ ನಾವು ಕಾನೂನು ಸುವ್ಯವಸ್ಥೆ ಮತ್ತು ಶಾಂತಿ ಕಾಪಾಡಲು ಮೃತದೇಹವನ್ನು ಮುಂಜಾನೆ ಹೊತ್ತಲ್ಲಿ ಕಳಿಸಿಕೊಟ್ಟಿದ್ದೇವೆ.

ದ್ವಿಚಕ್ರದಲ್ಲಿ ತಲ್ವಾರ್ ಹಿಡಿದುಕೊಂಡು ಬಂದು ಮುಸ್ಲಿಮರ ಮೇಲೆ ದಾಳಿ ನಡೆಸುತ್ತಿದ್ದಾರೆ. ಸಾಮಾಜಿಕ ಖಾತೆಗಳಲ್ಲಿ ಮುಸ್ಲಿಮರನ್ನು ಕೊಲ್ಲುವ ಬೆದರಿಕೆ ಹಾಕುತ್ತಿದ್ದಾರೆ. ಮುಸ್ಲಿಮರನ್ನು ಕೊಂದವರು ಮತ್ತು ದ್ವೇಷ ಭಾಷಣ ಮಾಡುವವರು ಇಲ್ಲಿ ಹೀರೋಗಳಾಗುತ್ತಿದ್ದಾರೆ. ಹೀಗಾದರೆ ನಮ್ಮ ಪರಿಸ್ಥಿತಿ ಏನಾಗಬಹುದು? ನಾವು ಯಾರತ್ರ ಹೋಗಿ ಹೇಳಬೇಕು? ಇದಕ್ಕೆಲ್ಲಾ ಕಡಿವಾಣ ಹಾಕಲೇಬೇಕು ಎಂದರು.

ಇನಾಯತ್ ಅಲಿ ಮಾತನಾಡಿ, ಜಿಲ್ಲೆಯಲ್ಲಿ ನಡೆಯುವ ಕೋಮು ಸಂಘರ್ಷ ಮತ್ತು ಅಹಿತಕರ ಘಟನೆಗಳ ಹಿಂದಿನ ಶಕ್ತಿಗಳನ್ನು ಬಯಲಿಗೆ ತರಬೇಕು, ಮೂಲವನ್ನು ಹಿಡಿಯುವ ಕೆಲಸವಾಗಬೇಕು ಎಂದರು. ಪಾತ್ರಧಾರಿಗಳ ಜೊತೆ ಸೂತ್ರಧಾರಿಗಳ ವಿರುದ್ಧವೂ ಕಾನೂನು ಕ್ರಮಗಳು ಜರುಗಬೇಕು ಎಂದು ಹೇಳಿದರು.

ಮುಸ್ಲಿಂ ಮುಖಂಡರ ಅಹವಾಲುಗಳನ್ನು ಮೌನವಾಗಿ ಆಲಿಸಿದ ಸಚಿವರು ಪರಿಹಾರಗಳ ಭರವಸೆ ನೀಡಿದರು. ಗುಂಡೂರಾವ್ ಮಾತನಾಡಿ ಜಿಲ್ಲೆಯ ಬಗ್ಗೆ ನಮಗೆ ಮಾಹಿತಿ ಇದೆ, ಮುಸ್ಲಿಮರ ನೋವುಗಳು ನಮಗೆ ಅರ್ಥ ಆಗಿದೆ, ಆ ಬಗ್ಗೆ ಸರಕಾರದ ಮಟ್ಟದಲ್ಲಿ ಗಂಭಿರವಾಗಿ ಚರ್ಚೆ ನಡೆಸುತ್ತೇವೆ ಎಂದು ಭರವಸೆ ನೀಡಿದರು.

ಗೃಹ ಸಚಿವ ಪರಮೇಶ್ವ‌ರ್ ಮಾತನಾಡಿ, ಅಧಿಕಾರಿಗಳು ನೀಡಿದ ಮಾಹಿತಿಯಂತೆ ನಾನು ಕುಡುಪು ಘಟನೆ ಬಗ್ಗೆ ಹೇಳಿಕೆ ನೀಡಿದೆ. ಮಾಧ್ಯಮಗಳು ನನ್ನ ಹೇಳಿಕೆಯನ್ನು ತಿರುಚಿದೆ ಎಂದರು. ನಾನು ಬಿಜೆಪಿಯ ಗೃಹ ಸಚಿವನಲ್ಲ, ನನ್ನ ರಕ್ತವೇ ಕಾಂಗ್ರೆಸ್, ನಾನು ಹುಟ್ಟಾ ಕಾಂಗ್ರೆಸ್, ಸಾಯುವುದು ಕಾಂಗ್ರೆಸ್ ನಲ್ಲೇ, ನನ್ನ ಬಗ್ಗೆ ಕೇಳಿದವನಿಗೆ ಇದನ್ನು ಹೋಗಿ ಹೇಳಿ ಎಂದರು. ಪ್ರಚೋದನೆಗಳಿಗೆ ಮುಸ್ಲಿಮರು ಒಳಗಾಗಬೇಡಿ, ನೀವು ಸಂಯಮ ಪಾಲಿಸಿ, ಮಿಕ್ಕಿದ್ದನ್ನು ನಮಗೆ ಬಿಡಿ, ಸರ್ಕಾರ ನಿಮ್ಮ ಜೊತೆ ಇದೆ ಎಂದು ಗೃಹ ಸಚಿವರು ಭರವಸೆ ನೀಡಿದರು.

ಸಭೆಯಲ್ಲಿ ರಮಾನಾಥ ರೈ, ಮಂಜುನಾಥ್ ಭಂಡಾರಿ, ಪದ್ಮರಾಜ್‌ ಪೂಜಾರಿ, ಜಿ.ಎ ಬಾವ, ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದರು.