ಮಂಗಳೂರು,ಮೇ.3: ಇಲ್ಲಿನ ಹೊರವಲಯದ ಬಜ್ಪೆಯಲ್ಲಿ ರೌಡಿಶೀಟರ್ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಎಂಟು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.

ಈ ಕುರಿತು ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕರಣ ಸಂಬಂಧ ಅಬ್ದುಲ್ ಸಫ್ವಾನ್, ನಿಯಾಜ್, ಮೊಹಮ್ಮದ್ ಮುಝಮ್ಮಿಲ್, ಕಲಂದರ್ ಶಾಫಿ, ಆದಿಲ್ ಮೆಹರೂಪ್, ನಾಗರಾಜ್, ಮೊಹಮ್ಮದ್ ರಿಜ್ವಾನ್ ಮತ್ತು ರಂಜಿತ್ ಎಂಬುವರನ್ನು ಬಂಧಿಸಲಾಗಿದೆ ಎಂದರು.
ಆರು ಜನ ಸೇರಿ ಸುಹಾಸ್ ಶೆಟ್ಟಿಯನ್ನು ಕೊಲೆ ಮಾಡಿದ್ದಾರೆ. ಇದರಲ್ಲಿ ಆರೋಪಿ ಸಫ್ವಾನ್ ಮೇಲೆ 2023 ರಲ್ಲಿ ಮಾರಣಾಂತಿಕ ಹಲ್ಲೆಯಾಗಿತ್ತು. ಸುಹಾಸ್ ಶೆಟ್ಟಿ ಸ್ನೇಹಿತರಾದ ಪ್ರಶಾಂತ್, ಪುನೀತ್ ಮತ್ತು ಧನರಾಜ್ ಹಲ್ಲೆ ಮಾಡಿದ್ದರು. ಇದರಿಂದ ಸಫ್ವಾನ್ ಗೆ ಸುಹಾಸ್ ನಿಂದ ಕೊಲೆ ಆತಂಕ ಇತ್ತು. ಈ ಹಿನ್ನಲೆ ಸುಹಾಸ್ ಕೊಲೆ ಮಾಡಲು ತೀರ್ಮಾನ ಮಾಡಿದ್ದ ಎಂದು ಹೇಳಿದರು.
ಈ ಹಿನ್ನೆಲೆಯಲ್ಲಿ ಈ ಹಿಂದೆ ಕೊಲೆಯಾದ ಫಾಝಿಲ್ ಸಹೋದರ ಆದಿಲ್ ಅವರನ್ನು ಸಫ್ವಾನ್ ಸಂಪರ್ಕಿಸಿ ಕೊಲೆ ಮಾಡೋಕೆ ತೀರ್ಮಾನ ಮಾಡುತ್ತಾರೆ. ಸುಹಾಸ್ ಕೊಲೆಗೆ ಆದಿಲ್ ನಿಂದ ಸಫ್ವಾನ್ ತಂಡ ಐದು ಲಕ್ಷ ರೂಪಾಯಿ ಪಡೆಯುತ್ತದೆ. ಆ ಬಳಿಕ ನಿಯಾಜ್ ತನ್ನ ಇಬ್ಬರು ಸ್ನೇಹಿತರಾದ ನಾಗಾರಾಜ್ ಮತ್ತು ರಂಜಿತ್ ನ ಸಂಪರ್ಕ ಮಾಡುತ್ತಾರೆ. ಈ ಇಬ್ಬರು ಸಫ್ವಾನ್ ಮನೆಯಲ್ಲಿ ಎರಡು ದಿನಗಳಿಂದ ವಾಸ ಮಾಡಿ, ಮೇ 1 ರಂದು ಸುಹಾಸ್ ಚಲನವಲನಗಳನ್ನು ಗಮನಿಸಿ ಕೊಲೆ ಮಾಡಿದ್ದಾರೆ ಎಂದರು.
ಕೊಲೆಯಾದ ಸಂದರ್ಭದಲ್ಲಿ ಇಬ್ಬರು ಬುರ್ಖಾಧಾರಿ ಮಹಿಳೆಯರು ಆರೋಪಿಗಳಿಗೆ ಸಹಾಯ ಮಾಡುತ್ತಿದ್ದ ವಿಡಿಯೋ ವೈರಲ್ ಆಗಿದ್ದು, ಈ ಬಗ್ಗೆ ಈ ಇಬ್ಬರು ಮಹಿಳೆಯರನ್ನು ಕರೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
ಈ ಪ್ರಕರಣದಲ್ಲಿ ಹತ್ಯೆಯಾದ ಫಾಝಿಲ್ ಅವರ ಅಣ್ಣ ಆದಿಲ್ ಹಣ ನೀಡಿದ್ದಾದರೆ, ಅದು ಫಾಝಿಲ್ ಹತ್ಯೆಗೆ ಪ್ರತೀಕಾರವಲ್ಲವೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಕಮಿಷನರ್, ಇದನ್ನು ಪ್ರತೀಕಾರದ ಹತ್ಯೆ ಎಂದು ಹೇಳಲಾಗದು, ಇದೊಂದು ಮಿಶ್ರಿತ ಕೃತ್ಯವಾಗಿದೆ. ಸಫ್ವಾನ್ ಮತ್ತು ತಂಡವು ನಡೆಸಲು ತೀರ್ಮಾನಿಸಿದ ಹತ್ಯೆ ಸಂಚಿಗೆ, ಆದಿಲನ್ನು ಸಂಪರ್ಕಿಸಿ ಫಂಡ್ ಪಡೆದಿದ್ದಾರೆ ಎಂದರು.
ಒಟ್ಟಿನಲ್ಲಿ ಹೇಳುವುದಾದರೆ, ಆದಿಲ್ ನಿಂದ ಹಣ ಪಡೆದು, ಸಫ್ವಾನ್ ಮತ್ತು ತಂಡ ತಮ್ಮ ಹಳೆಯ ಸೇಡನ್ನು ತೀರಿಸಿದ್ದಾರೆ. ಇದು ನಿಜಕ್ಕೂ ಒಂದು ಗ್ಯಾಂಗ್ ವಾರ್ ಆಗಿದ್ದು, ಜಿಲ್ಲೆಯ ಶಾಂತಿ ಕದಡುವ ಕೃತ್ಯವಾಗಿದೆ. ಇಂತಹಾ ಕೃತ್ಯಗಳು ಮರುಕಳಿಸದಂತೆ ರೌಡಿ ನಿಗ್ರಹ ದಳ ಮತ್ತಷ್ಟು ಚುರುಕುಗೊಳ್ಳಬೇಕಾಗಿದೆ.