janadhvani

Kannada Online News Paper

ಸುಹಾಸ್ ಕೊಲೆ: ಎಂಟು ಮಂದಿಯ ಬಂಧನ, ಶೀಘ್ರದಲ್ಲೇ ತನಿಖೆ ಪೂರ್ಣ- ಗೃಹ ಸಚಿವ ಜಿ. ಪರಮೇಶ್ವರ್

ರಾಜ್ಯದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕೋಮು ಸಂಘರ್ಷವನ್ನು ತಪ್ಪಿಸಲು ಒಂದು ಆಂಟಿ ಕಮ್ಯೂನಲ್ ಟಾಸ್ಕ್ ಫೋರ್ಸ್ ಅನ್ನು ರಚಿಸಲಾಗುವುದು

ಮಂಗಳೂರು,ಮೇ.3: ಬಜ್ಪೆ ಪೋಲೀಸ್ ಠಾಣಾ ವ್ಯಾಪ್ತಿಯ ಕಿನ್ನಿಪದವು ಎಂಬಲ್ಲಿ ಗುರುವಾರ ರಾತ್ರಿ ನಡೆದ ರೌಡಿಶೀಟರ್ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಒಟ್ಟು ಎಂಟು ಮಂದಿಯನ್ನು ಹಾಗೂ ಅಶ್ರಫ್ ಗುಂಪು ಹತ್ಯೆ ಪ್ರಕರಣದಲ್ಲಿ 21 ಮಂದಿಯನ್ನು ಪೋಲೀಸರು ಬಂಧಿಸಿದ್ದಾರೆ ಎಂದು ರಾಜ್ಯ ಗೃಹ ಸಚಿವರು ಪಿ. ಪರಮೇಶ್ವರ್ ಮಾಹಿತಿ ನೀಡಿದ್ದಾರೆ.

ಸುಹಾಸ್ ಶೆಟ್ಟಿ ಹತ್ಯೆ ಸಂಬಂಧಿಸಿದಂತೆ ಅಬ್ದುಲ್ ಸಫಾನ್, ನಿಯಾಜ್‌, ಮೊಹಮ್ಮದ್ ಮುಝಮಿಲ್, ಕಲಂದರ್ ಶಾಫಿ, ರಂಜಿತ್, ನಾಗರಾಜ್, ಮೊಹಮ್ಮದ್ ರಿಝಾನ್ ಮತ್ತು ಆದಿಲ್ ಮೆಹರೂಫ್ ಮುಂತಾದವರನ್ನು ಬಂಧಿಸಲಾಗಿದೆ.

ಈ ಕುರಿತು ಮಂಗಳೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಗೃಹಸಚಿವ ಜಿ. ಪರಮೇಶ್ವರ್, “ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಸಂಬಂಧ ತನಿಖೆ ನಡೆಯುತ್ತಿದ್ದು, ಶೀಘ್ರದಲ್ಲೇ ತನಿಖೆಯನ್ನು ಪೂರ್ಣಗೊಳಿಸಿ ಸಂಪೂರ್ಣ ಮಾಹಿತಿ ಲಭಿಸಲಿದೆ” ಎಂದು ಸಚಿವರು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು. ಯಾವುದೇ ಸಮುದಾಯದವರನ್ನು ಕಾನೂನು ಉಲ್ಲಂಘನೆ ಮಾಡಲು ಬಿಡಲ್ಲ. ಎಲ್ಲಾ ತರದ ಕಾನೂನು ಕ್ರಮಗಳನ್ನು ಕೈಗೊಳ್ಳುತ್ತೇವೆ. ಎಂದು ಹೇಳಿದರು.

ದ.ಕ.ಜಿಲ್ಲೆಯಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಯಾದ ಹಿನ್ನೆಲೆಯಲ್ಲಿ ಪರಿಸ್ಥಿತಿಯ ಅವಲೋಕನ ಮತ್ತು ಪೊಲೀಸ್‌ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸುವ ಸಲುವಾಗಿ ಪರಮೇಶ್ವ‌ರ್ ಮಂಗಳೂರಿಗೆ ಆಗಮಿಸಿದ್ದು, ಸರಣಿ ಸಭೆ ನಡೆಸಿದ್ದಾರೆ.

ಈ ಜಿಲ್ಲೆಯ ಶಾಂತಿಯನ್ನು ಕೆಡಿಸಲು ಯಾವುದೇ ದುಷ್ಟ ಶಕ್ತಿಗಳನ್ನು ಸಮ್ಮತಿವುದಿಲ್ಲ, ಅಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ರಾಜ್ಯದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕೋಮು ಸಂಘರ್ಷವನ್ನು ತಪ್ಪಿಸಲು ಒಂದು ಆಂಟಿ ಕಮ್ಯೂನಲ್ ಟಾಸ್ಕ್ ಫೋರ್ಸ್ ಅನ್ನು ರಚಿಸಲಾಗುವುದು. ಇದು ಯಾರು ಕಮ್ಯೂನಲ್ ಚಟುವಟಿಕೆಗಳನ್ನು ಮಾಡುತ್ತಾರೋ, ಅವರಿಗೆ ಸಪೋರ್ಟ್ ಮಾಡುತ್ತಾರೋ ಹಾಗೂ ಪ್ರಚೋದನಕಾರಿ ಭಾಷಣ ಮಾಡುತ್ತಾರೋ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಕ್ಕೆ ಈ ಪಡೆಯ ಅಧಿಕಾರಿಗಳಿಗೆ ಸಂಪೂರ್ಣ ಅಧಿಕಾರ ನೀಡಲಾಗುತ್ತಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ ತಿಳಿಸಿದರು.

ಕರಾವಳಿ ಜಿಲ್ಲೆಗಳಲ್ಲಿ ಶಾಂತಿಯನ್ನು ಕಾಪಾಡುವ ಉದ್ದೇಶದಿಂದ ಈ ಕಾರ್ಯಪಡೆಯನ್ನು ರಚಿಸಲಾಗುವುದು. ಈಗಾಗಲೇ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇವೆ. ರಾಜ್ಯದಲ್ಲಿ ಯಾರು ಪ್ರಚೋದನೆ ಭಾಷಣಗಳನ್ನು ಮಾಡುತ್ತಾರೋ ಅಂಥವರ ಮೇಲೆ ಕಾನೂನು ಪ್ರಕಾರನ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುವುದಕ್ಕೆ ಸೂಚನೆ ನೀಡಲಾಗಿದೆ ಎಂದರು.

ಕಾರ್ಕಳದಲ್ಲಿ ಈಗಾಗಲೇ ಇರುವ ಆಂಟಿ ನಕ್ಸಲ್ ಕಾರ್ಯಪಡೆಯ ಮಾದರಿಯಲ್ಲಿಯೇ ಇದೀಗ ಕರಾವಳಿ ಭಾಗದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಆಂಟಿ ಕಮ್ಯೂನಲ್ ಟಾಸ್ಕ್‌ ಫೋರ್ಸ್ ಆಗಿ ಮಾಡಲಾಗುವುದು. ಇದೀಗ ರಾಜ್ಯದಲ್ಲಿ ಎಲ್ಲ ನಕ್ಸಲ್ ಚಟುವಟಿಕೆ ಸಂಪೂರ್ಣವಾಗಿ ನಾಶವಾಗಿದೆ. ಈ ಹಿನ್ನೆಲೆಯಲ್ಲಿ ಕಾರ್ಕಳ ಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ನಕ್ಸಲ್ ನಿಗ್ರಹ ಪಡೆಯನ್ನು ರದ್ದುಗೊಳಿಸಿ, ಅದರಲ್ಲಿರುವ ಅಧಿಕಾರಿಗಳನ್ನೇ ಕೋಮುವಾದಿ ನಿಗ್ರಹ ದಳವನ್ನಾಗಿ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಒಂದು ಕಾಲದಲ್ಲಿ ಕರಾವಳಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗೆ ಶಾಂತಿ ನೆಲೆಸಿದ ಸ್ಥಳ ಎಂದು ಇಲ್ಲಿಗೆ ಹುಡುಕಿಕೊಂಡು ಬರುತ್ತಿದ್ದರು. ಅದೇ ರೀತಿ ಇನ್ನುಮುಂದಿನ ದಿನಗಳಲ್ಲಿಯೂ ದಕ್ಷಿಣ ಕನ್ನಡವನ್ನು ಶಾಂತಿಯುತ ಜಿಲ್ಲೆಯನ್ನಾಗಿ ಕಾಪಾಡುವುದಕ್ಕೆ ಆದ್ಯತೆ ನೀಡಲಾಗುತ್ತದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ ತಿಳಿಸಿದರು. ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗೂಂಡುರಾವು ಉಪಸ್ಥಿತರಿದ್ದರು.

ಮಂಗಳೂರಿನ ಹೊರವಲಯದ ಬಜ್ಪೆ ಕಿನ್ನಿಪದವು ಎಂಬಲ್ಲಿ ಗುರುವಾರ ರಾತ್ರಿ ರೌಡಿಶೀಟರ್ ಸುಹಾಸ್ ಶೆಟ್ಟಿ ಸಂಚರಿಸುತ್ತಿದ್ದ ಕಾರನ್ನು ಅಡ್ಡಗಟ್ಟಿ ದುಷ್ಕರ್ಮಿಗಳು ಕೊಲೆ ನಡೆಸಿ ಪರಾರಿಯಾಗಿದ್ದರು. ಘಟನೆಯ ವೀಡಿಯೋವನ್ನು ಚಿತ್ರೀಕರಿಸಿ, ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟ ಮುಸ್ಲಿಂ ಮಹಿಳೆಯರ ಪಾತ್ರವು ದುಷ್ಕರ್ಮಿಗಳ ಶೀಘ್ರ ಪತ್ತೆಯಲ್ಲಿ ನಿರ್ಣಾಯಕವಾಗಿದೆ. ದುಷ್ಕರ್ಮಿಗಳ ಕಾರು ಮತ್ತು ಪಿಕಪ್ ವಾಹನಗಳು ಸೇರಿದಂತೆ ಹಂತಕರ ಸಂಪೂರ್ಣ ಚಲನವಲನಗಳು ವೀಡಿಯೋದಲ್ಲಿ ಸೆರೆಹಿಡಿಯಲಾಗಿತ್ತು.

ಈ ಕೊಲೆಯು ಮೇಲ್ನೋಟಕ್ಕೆ ಗ್ಯಾಂಗ್ ವಾರ್ ಎಂದು ಗೋಚರಿಸಿದ್ದು, ಹಳೆ ದ್ವೇಷದಿಂದ ಕೂಡಿದ ಹತ್ಯೆಯಾಗಿದೆ ಎನ್ನಲಾಗಿದೆ. ತನಿಖೆಯು ಪೂರ್ಣಗೊಂಡ ಬಳಿಕವಷ್ಟೇ ಪ್ರಕರಣದ ಮಾಹಿತಿ ಲಭಿಸಲಿದೆ.

ಸುಹಾಸ್ ಹತ್ಯೆ ಬಳಿಕ ತೀವ್ರ ಹಿಂದುತ್ವವಾದಿಗಳು ಅದನ್ನು ಫಾಝಿಲ್ ಹತ್ಯೆಯ ಪ್ರತೀಕಾರವೆಂಬಂತೆ ವೈಭವೀಕರಿಸಿ ಹತ್ಯೆಗೆ ಕೋಮು ಬಣ್ಣವನ್ನು ಬಳಿದು ಜಿಲ್ಲಾ ಬಂದ್ ಗೆ ಕರೆ ನೀಡಿದ್ದರು. ವಿಷಯ ತಿಳಿಯುತ್ತಿದ್ದಂತೆ ಬಿಲದಿಂದ ಹೊರ ಬಂದ ರಾಜಕೀಯ ನಾಯಕರು ಸಹ ಇದರ ಲಾಭ ಕೊಯ್ಯಲು ಪ್ರಚೋದನೆಕಾರಿ ಹೇಳಿಕೆ ನೀಡಿ ಬೆಂಕಿಗೆ ತುಪ್ಪ ಸುರಿಯುವ ಪ್ರಯತ್ನ ಮಾಡಿದರು. ಇದರ ಫಲವಾಗಿ ಜಿಲ್ಲೆಯ ಹಲವು ಕಡೆಗಳಲ್ಲಿ ಅಮಾಯಕ ಮುಸ್ಲಿಮರ ಕೊಲೆ ಯತ್ನ ಹಾಗೂ ಮಾರಕ ಹಲ್ಲೆಗಳು ನಡೆದಿದೆ.