ಬೆಂಗಳೂರು, ಮೇ 3: ರಾಜ್ಯದಲ್ಲಿ ಇಲಿ ಜ್ವರದ ಆತಂಕ ಎದುರಾಗಿದೆ. ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಲೆಪ್ಟೊಸ್ಪೈರೋಸಿಸ್ ಎಂದು ಕರೆಯಲ್ಪಡುವ ಇಲಿ ಜ್ವರ ಪ್ರಕರಣಗಳು ಹೆಚ್ಚಾಗುತ್ತಿವೆ . ರಾಜ್ಯದಲ್ಲಿ ಕಳೆದ ಒಂದು ವಾರದಲ್ಲಿ 169 ಜನರನ್ನು ಇಲಿ ಜ್ವರ ಪತ್ತೆ ಪರೀಕ್ಷೆಗೆ ಒಳಪಡಿಸಿದ್ದು 24 ಜನರಲ್ಲಿ ಇಲಿ ಜ್ವರ ಪತ್ತೆಯಾಗಿದೆ.
ರಾಜ್ಯದಲ್ಲಿ ಜನವರಿಯಿಂದ ಏಪ್ರಿಲ್ ಕೊನೆಯ ದಿನದ ವರೆಗೆ ಸುಮಾರು 372 ಕ್ಕೂ ಹೆಚ್ಚು ಇಲಿ ಜ್ವರ ಪ್ರಕರಣಗಳು ಪತ್ತೆಯಾಗಿವೆ ಎಂದು ಆರೋಗ್ಯ ಇಲಾಖೆ ದೃಢಪಡಿಸಿದೆ. ಪರೀಕ್ಷೆಗೊಳಪಟ್ಟ 3,163 ಮಂದಿಯಲ್ಲಿ 372 ಮಂದಿಗೆ ಸೋಂಕು ದೃಢವಾಗಿದ್ದು, ವಾರಕ್ಕೆ 6 ರಿಂದ 8 ಪ್ರಕರಣ ಪತ್ತೆಯಾಗಿದೆ.ಕಳೆದ ವಾರ 7 ಪ್ರಕರಣ ದಾಖಲಾಗಿದೆ ಎಂದು ಆರೋಗ್ಯ ಇಲಾಖೆಯ ಜಂಟಿ ನಿರ್ದೇಶಕ ಅನ್ಸಾರ್ ಅಹ್ಮದ್ ತಿಳಿಸಿದ್ದಾರೆ.
ಬೆಂಗಳೂರು ವೈದ್ಯರು ಇಲಿ ಜ್ವರದ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ. ಇಲಿಯ ಎಂಜಲು, ಮೂತ್ರ, ಮಲ ಅಥವಾ ಅದರ ದೇಹದ ಯಾವುದೇ ದ್ರವ ಮಾನವರ ಚರ್ಮಕ್ಕೆ ತಾಗುವುದರಿಂದ ಈ ಸೋಂಕು ಹರಡುತ್ತದೆ. ಹೀಗಾಗಿ ತೀವ್ರ ಜ್ವರ , ತಲೆನೋವು, ಕಣ್ಣು ಕೆಂಪಾಗುವುದು, ವಾಕರಿಕೆ ಅಥವಾ ವಾಂತಿ, ಮೈಕೈ ನೋವು, ಮೈಮೇಲೆ ಗುಳ್ಳೆಗಳು ಹಾಗೂ ಸೋಂಕು ಉಂಟಾದ ಎರಡು ದಿನಗಳ ನಂತರ ಮತ್ತು ಕೀಲುನೋವು ಕಂಡುಬಂದಲ್ಲಿ ಪರೀಕ್ಷೆ ಮಾಡಿಸಿಕೊಳ್ಳುವಂತೆ ವೈದ್ಯರು ಸಲಹೆ ನೀಡಿದ್ದಾರೆ.
ಸಾಮಾನ್ಯವಾಗಿ ಮಳೆಗಾಲದಲ್ಲಿ ಇಲಿ ಜ್ವರ ಪ್ರಕರಣಗಳು ಹೆಚ್ಚು ಕಂಡುಬರುತ್ತವೆ. ಆದರೆ ಈ ವರ್ಷ ಮಳೆಗಾಲ ಆರಂಭಕ್ಕೂ ಮೊದಲೇ ಇಲಿಜ್ವರ ಪ್ರಕರಣಗಳು ಪತ್ತೆಯಾಗುತ್ತಿವೆ ಎಂದು ಆರೋಗ್ಯ ಇಲಾಖೆ ನಿರ್ದೇಶಕ ಅನ್ಸಾರ್ ಅಹ್ಮದ್ ತಿಳಿಸಿದ್ದಾರೆ.
ಜ್ವರದ ಲಕ್ಷಣಗಳು ಏನು?
- ತಲೆನೋವು
- ಕಣ್ಣು ಕೆಂಪಾಗುವುದು
- ವಾಕರಿಕೆ ಅಥವಾ ವಾಂತಿ
- ಮೈಕೈ ನೋವು
- ಮೈಮೇಲೆ ಗುಳ್ಳೆಗಳು
- ತೀವ್ರ ಜ್ವರ
- ಸೋಂಕು ಉಂಟಾದ ಎರಡು ದಿನಗಳ ನಂತರ ಕೀಲುನೋವು
ಇಲಿ ಜ್ವರದ ಆತಂಕ ಹೆಚ್ಚಾಗಿರುವುದರಿಂದ ಮನೆಯ ಸಂಪ್ಗಳ, ಬಳಸುವ ನೀರಿನ ಬಗ್ಗೆ ಎಚ್ಚರ ವಹಿಸಿ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ. ಮನೆಯಲ್ಲಿ ಅಥವಾ ಉಗ್ರಾಣಗಳಲ್ಲಿ ಆಹಾರ ಪದಾರ್ಥಗಳು, ದವಸ ಧಾನ್ಯಗಳನ್ನು ಎಲ್ಲೆಂದರಲ್ಲಿ ಎಸೆಯದೆ ಸ್ವಚ್ಛತೆ ಕಾಪಾಡಿಕೊಳ್ಳುವುದರ ಮೂಲಕ ಹಾಗೂ ಸಾಧ್ಯವಾದಷ್ಟು ಬಿಸಿ ನೀರು ಸೇವನೆ ಮಾಡುವ ಮೂಲಕ ಇಲಿ ಜ್ವರ ಹರಡುವುದನ್ನು ನಿಯಂತ್ರಿಸಬಹುದು ಎಂದು ಕೆಸಿ ಜನರಲ್ ಆಸ್ಪತ್ರೆ ವೈದ್ಯ ಡಾ ಜಗದೀಶ್ ಸಲಹೆ ನೀಡಿದ್ದಾರೆ.