ಮಂಗಳೂರು: ರೌಡಿ ಶೀಟರ್ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಒಟ್ಟು ಏಳು ಮಂದಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿರುವ ಬಗ್ಗೆ ತಿಳಿದು ಬಂದಿದೆ.
ಇದು ಯಾವುದೇ ಕೋಮು ದ್ವೇಷದಿಂದ ಕೂಡಿದ ಹತ್ಯೆ ಅಲ್ಲ, ರೌಡಿಗಳ ಗ್ಯಾಂಗ್ ಸಂಬಂಧಿತ ಹತ್ಯೆಯಾಗಿದೆ ಎನ್ನಲಾಗುತ್ತಿದ್ದು, ಈ ಬಗ್ಗೆ ಹೆಚ್ಚಿನ ವಿವರ ಹಾಗೂ ಅಧಿಕೃತ ಪ್ರಕಟಣೆ ಪೊಲೀಸ್ ಇಲಾಖೆಯಿಂದ ಇನ್ನಷ್ಟೇ ಬರಬೇಕಿದೆ.
ಮಂಗಳೂರಿನ ಹೊರವಲಯದ ಬಜ್ಪೆ ಕಿನ್ನಿಪದವು ಎಂಬಲ್ಲಿ ನಿನ್ನೆ ರಾತ್ರಿ ರೌಡಿಶೀಟರ್ ಸುಹಾಸ್ ಶೆಟ್ಟಿ ಸಂಚರಿಸುತ್ತಿದ್ದ ಕಾರನ್ನು ಅಡ್ಡಗಟ್ಟಿ ದುಷ್ಕರ್ಮಿಗಳು ಕೊಲೆ ನಡೆಸಿ ಪರಾರಿಯಾಗಿದ್ದರು. ಘಟನೆಯ ವೀಡಿಯೋವನ್ನು ಚಿತ್ರೀಕರಿಸಿ, ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟ ಮುಸ್ಲಿಂ ಮಹಿಳೆಯರ ಪಾತ್ರವು ದುಷ್ಕರ್ಮಿಗಳ ಶೀಘ್ರ ಪತ್ತೆಯಲ್ಲಿ ನಿರ್ಣಾಯಕವಾಗಿದೆ. ದುಷ್ಕರ್ಮಿಗಳ ಕಾರು ಮತ್ತು ಪಿಕಪ್ ವಾಹನಗಳು ಸೇರಿದಂತೆ ಹಂತಕರ ಸಂಪೂರ್ಣ ಚಲನವಲನಗಳು ವೀಡಿಯೋದಲ್ಲಿ ಸೆರೆಹಿಡಿಯಲಾಗಿತ್ತು.
ಹತ್ಯೆ ಬಳಿಕ ತೀವ್ರ ಹಿಂದುತ್ವವಾದಿಗಳು ಅದನ್ನು ಫಾಝಿಲ್ ಹತ್ಯೆಯ ಪ್ರತೀಕಾರವೆಂಬಂತೆ ವೈಭವೀಕರಿಸಿ ಹತ್ಯೆಗೆ ಕೋಮು ಬಣ್ಣವನ್ನು ಬಳಿದು ಇಂದು ಜಿಲ್ಲಾ ಬಂದ್ ಗೆ ಕರೆ ನೀಡಿದ್ದರು. ವಿಷಯ ತಿಳಿಯುತ್ತಿದ್ದಂತೆ ಬಿಲದಿಂದ ಹೊರ ಬಂದ ರಾಜಕೀಯ ನಾಯಕರು ಸಹ ಇದರ ಲಾಭ ಕೊಯ್ಯಲು ಪ್ರಚೋದನೆಕಾರಿ ಹೇಳಿಕೆ ನೀಡಿ ಬೆಂಕಿಗೆ ತುಪ್ಪ ಸುರಿಯುವ ಪ್ರಯತ್ನ ಮಾಡಿದರು. ಇದರ ಫಲವಾಗಿ ಜಿಲ್ಲೆಯ ಹಲವು ಕಡೆಗಳಲ್ಲಿ ಅಮಾಯಕ ಮುಸ್ಲಿಮರ ಮೇಲೆ ಕೊಲೆ ಯತ್ನದಂತಹಾ ತಲವಾರು ದಾಳಿಗಳು ನಡೆದಿದೆ.