ಬೆಂಗಳೂರು: ಮಂಗಳೂರಿನ ಹೊರವಲಯದ ಬಜ್ಪೆಯಲ್ಲಿ ನಿನ್ನೆ ರಾತ್ರಿ ನಡೆದ ರೌಡಿಶೀಟರ್ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣವು ಯಾವುದೇ ಕೋಮು ದ್ವೇಷದಿಂದ ಕೂಡಿದ್ದಲ್ಲ, ಫಾಝಿಲ್ ಹತ್ಯೆಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸನ್ಮಾನ್ಯ ವಿಧಾನ ಸಭಾಧ್ಯಕ್ಷರು ಯುಟಿ ಖಾದರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಶುಕ್ರವಾರ ಮಾತನಾಡಿದ ಅವರು, ಫಾಝಿಲ್ ತಂದೆ ಹಾಗೂ ಸಹೋದರರು ಮಾತನಾಡಿದ್ದಾರೆ. ಸುಹಾಸ್ ಕೊಲೆಗೂ ನಮಗೂ ಯಾವುದೇ ಸಂಬಂಧ ಇಲ್ಲ ನಮಗೂ ಈ ಕೃತ್ಯಕ್ಕೂ ಯಾವುದೇ ಸಂಬಂಧ ಇಲ್ಲ. ಇಂತಹ ಪ್ರತಿಕಾರದ ಆಲೋಚನೆಯನ್ನು ನಾವು ಮಾಡಿಯೂ ಇಲ್ಲ. ನಾವು ಎಲ್ಲವನ್ನೂ ಅಂದೇ ದೇವರ ಪಾಲಿಗೆ ಬಿಟ್ಟಿದ್ದೇವೆ ಎಂದಿದ್ದಾರೆ ಎಂದು ತಿಳಿಸಿದರು.
ಪ್ರಾರಂಭಿಕ ಘಟ್ಟದಲ್ಲಿ ಸುಹಾಸ್ ಶೆಟ್ಟಿ ಫಾಝಿಲ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಎಂಬ ನೆಲೆಯಲ್ಲಿ ಸಾರ್ವಜನಿಕರು ಅದನ್ನು ಫಾಝಿಲ್ ಹತ್ಯೆಗೆ ಸೇಡು ಎಂಬ ನೆಲೆಯಲ್ಲಿ ಅರ್ಥೈಸಿರಬಹುದು. ಆದರೆ, ಸುಹಾಸ್ ಶೆಟ್ಟಿ ರೌಡಿಶೀಟರ್ ಆಗಿದ್ದು, ಫಾಝಿಲ್ ಹತ್ಯೆ ಪ್ರಕರಣದಲ್ಲಿ ಮಾತ್ರವಲ್ಲದೆ ಕೀರ್ತಿ ಹತ್ಯೆ ಪ್ರಕರಣದಲ್ಲೂ ಪ್ರಮುಖ ಆರೋಪಿಯಾಗಿದ್ದಾನೆ. ಮತ್ತು ಹಲವು ಕ್ರಿಮಿನಲ್ ಪ್ರಕರಣಗಳು ಆತನ ಮೇಲಿದೆ. ಹೀಗಿರುವಾಗ ಅದು ವೈಯಕ್ತಿಕ ದ್ವೇಷದಿಂದ ಕೂಡಿದ ಹತ್ಯೆಯಾಗಿರಬಹುದೇ ವಿನಃ, ಯಾವುದೇ ಕೋಮು ದ್ವೇಷದ ಬಣ್ಣ ಹಚ್ಚಬೇಡಿ ಎಂದು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಅದೇ ರೀತಿ, ಹತ್ಯೆ ಮಾಡಿರುವ ದುಷ್ಕರ್ಮಿಗಳನ್ನು ಪತ್ತೆ ಹಚ್ಚುವ ಮೂಲಕ ಅವರ ಕ್ರಿಮಿನಲ್ ಹಿನ್ನೆಲೆಗಳು ಕೂಡ ಬೆಳಕಿಗೆ ಬರಲಿದೆ. ಆದ್ದರಿಂದ ಸಾರ್ವಜನಿಕರು ಸಂಯಮ ಕಳೆದುಕೊಳ್ಳಬಾರದು ಮತ್ತು ಪೋಲೀಸ್ ಇಲಾಖೆಯೊಂದಿಗೆ ಸಂಪೂರ್ಣವಾಗಿ ಸಹಕರಿಸಬೇಕೆಂದು ಅವರು ತಿಳಿಸಿದರು.
ಕರಾವಳಿ ಜಿಲ್ಲೆಗೆ ಅದರದ್ದೇ ಆದ ಇತಿಹಾಸ, ಪರಂಪರೆ ಮತ್ತು ಸಂಸ್ಕೃತಿ ಇದೆ. ಶೈಕ್ಷಣಿಕ ಕ್ಷೇತ್ರದಲ್ಲಿ, ಆರೋಗ್ಯ ಕ್ಷೇತ್ರದಲ್ಲಿ, ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹಾಗೂ ಧಾರ್ಮಿಕತೆಯ ಪಾವಿತ್ರ್ಯತೆಯ ಯಾತ್ರಾ ಕೇಂದ್ರಗಳಲ್ಲಿ ಪ್ರಸಿದ್ದವಾಗಿದೆ. ಸರ್ವರನ್ನೂ ಆಕರ್ಷಿಸುವಂತಹ ಪ್ರೇರಣೆ ಕೊಡುವ ಪ್ರದೇಶವಾಗಿದೆ ನಮ್ಮ ಕರಾವಳಿ.
ಕೈಗಾರಿಕಾ ಕ್ಷೇತ್ರದಲ್ಲಿ ಬೆಂಗಳೂರು ನಂತರ ಮಂಗಳೂರು ಈಗ ರಾಜ್ಯ ಮಟ್ಟದಲ್ಲಿ ಪ್ರಸಿದ್ಧ. ನಮ್ಮ ಜಿಲ್ಲೆಯನ್ನು ಮತ್ತಷ್ಟು ಅಭಿವೃದ್ಧಿ ಪಥದಲ್ಲಿ ಮುಂದೆ ಕೊಂಡೊಯ್ಯಲು ಜಿಲ್ಲೆಯ ಜನತೆ ಮುಂದೆ ಬರಬೇಕೇ ಹೊರತು ಹಿಂದಕ್ಕೆ ತಳ್ಳುವಂತಹ ಕೃತ್ಯಗಳಲ್ಲಿ ಯಾರೂ ಭಾಗಿಯಾಗಬಾರದು ಎಂದು ಮನವಿ ಮಾಡಿದರು.
ಕಾನೂನು ಸುವ್ಯವಸ್ಥೆ ಕಾಪಾಡಿ
ಸುಹಾಸ್ ಶೆಟ್ಟಿ ಕೊಲೆ ನಂತರ ನಗರದಲ್ಲಿ ಪರಿಸ್ಥಿತಿ ಸಾಕಷ್ಟು ಹದಗೆಟ್ಟಿದೆ. ಹೀಗಾಗಿ, ಆರೋಪಿಗಳನ್ನು ಶೀಘ್ರ ಪತ್ತೆ ಹಚ್ಚಿ, ಕಾನೂನು ಸುವ್ಯವಸ್ಥೆ ಕಾಪಾಡಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಸ್ಪೀಕರ್ ಯು.ಟಿ ಖಾದರ್ ಸೂಚನೆ ನೀಡಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಹಾಗೂ ಗೃಹ ಇಲಾಖೆಯೊಂದಿಗೂ ಚರ್ಚೆ ನಡೆಸಲಾಗಿದೆ. ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಹದಗೆಡದಂತೆ ನೋಡಿಕೊಳ್ಳಲು ಬೇಕಾದ ಸೂಕ್ತ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.
ಗುರುವಾರ ರಾತ್ರಿ 8.30 ಕ್ಕೆ ಸುಹಾಸ್ ಶೆಟ್ಟಿ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿ ಹತ್ಯೆ ಮಾಡಿದ್ದರು. ಮಂಗಳೂರಿನ ಕಿನ್ನಿಪದವು ಎಂಬಲ್ಲಿ ಈ ಕೃತ್ಯ ನಡೆದಿದೆ. ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡ ಈ ಕೃತ್ಯವನ್ನು ಎಸಗಿದೆ. ಈಗಾಗಲೇ ಆರೋಪಿಗಳಿಗೆ ಪೊಲೀಸರು ಬಲೆ ಬೀಸಿದ್ದಾರೆ. ಈ ಘಟನೆಯ ಬೆನ್ನಲ್ಲೇ ಕೆಲವು ಚೂರಿ ಇರಿತ, ತಲವಾರು ದಾಳಿಯಂತಹ ಘಟನೆಗಳು ನಡೆದಿವೆ.