ಮಂಗಳೂರು: ಕರ್ನಾಟಕ ಸುನ್ನೀ ಜಂಇಯ್ಯತುಲ್ ಉಲಮಾ ಇದರ ರಾಜ್ಯ ಮಟ್ಟದ ಸಮಾವೇಶವು ಜನವರಿ 17ಮತ್ತು 18ರಂದು ಎರಡು ದಿನಗಳ ಕಾಲ ಅತ್ಯಂತ ಯಶಸ್ವಿಯಾಗಿ ನಡೆಯಿತು.
ಮಂಜನಾಡಿ ಅಲ್ ಮದೀನಾ ವಿದ್ಯಾ ಸಂಸ್ಥೆಯ ವಠಾರದಲ್ಲಿ ವಿಶೇಷ ವಾಗಿ ಸಜ್ಜುಗೊಳಿಸಿದ ಸಭಾಂಗಣದಲ್ಲಿ ಕರ್ನಾಟಕದ ಸುಮಾರು 4 ಸಾವಿರದಷ್ಟು ಉಲಮಾಗಳು ಭಾಗವಹಿಸಿದರು.
ಮೊದಲನೇ ದಿನದಲ್ಲಿ ತಾಜುಲ್ ಫುಕಹಾಅ್ ಬೇಕಲ್ ಉಸ್ತಾದ್ ಮಕ್ಬರ ಹಾಗೂ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದರ ಮಕ್ಬರ ಝಿಯಾರತ್ ನೊಂದಿಗೆ ಪ್ರಾರಂಭವಾಯಿತು.
ಸಂಜೆ 4 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಿತು. ಜಂಇಯ್ಯತುಲ್ ಉಲಮಾ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆಪಿ ಹುಸೈನ್ ಸಅದಿ ಕೆಸಿರೋಡು ಉದ್ಘಾಟಿಸಿದರು. ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎಪಿ ಅಬೂಬಕರ್ ಮುಸ್ಲಿಯಾರ್ ಮುಖ್ಯ ಪ್ರಭಾಷಣ ಮಾಡಿದರು. ಅಬ್ದುಲ್ ಜಲೀಲ್ ಸಖಾಫಿ ಚೆರುಶೋಲ ಫಿಕ್ಹ್ ಸೆಮಿನಾರ್, ಎಸ್ ಪಿ ಹಂಝ ಸಖಾಫಿ ಬಂಟ್ವಾಳ ಇಸ್ಲಾಮಿನ ಇತಿಹಾಸ ಎಂಬ ತರಗತಿ ನಡೆಸಿದರು.
ಎರಡನೇ ದಿನ ಬೆಳಿಗ್ಗೆ ಸುಬಹಿ ನಮಾಝ್ ನಂತರ ಮೌಲಾನಾ ಯು ಕೆ ಮುಹಮ್ಮದ್ ಸಅದಿ ಉಲಮಾಗಳು ಹೀಗಿರಬೇಕು ಎಂಬ ವಿಷಯದಲ್ಲಿ, ಇಬ್ರಾಹಿಂ ಸಖಾಫಿ ಪುಝಕಾಟಿರಿ ನಾಸ್ತಿಕತೆ ಯ ಮೌಢ್ಯತೆ ಎಂಬ ವಿಷಯದಲ್ಲಿ,
ಮುಹ್ಯಿದ್ದೀನ್ ಸಖಾಫಿ ತೋಕೆ ಅಶ್- ಅರೀಗಳು ಮತ್ತು ಮಾತುರೀದಿಗಳು ಎಂಬ ವಿಷಯದಲ್ಲಿ,
ಶಾಫಿ ಸಖಾಫಿ ಮುಂಡಂಬ್ರ ದಅವತಿನ ಹೊಸ ಆಯಾಮಾಗಳು ಎಂಬ ವಿಷಯದಲ್ಲಿ ತರಗತಿ ಮಂಡಿಸಿದರು.
ನಂತರ ಅಪರಾಹ್ನ 2 ಗಂಟೆಗೆ ಸಮಾರೋಪ ಸಮಾರಂಭ ನಡೆಯಿತು. ಸಯ್ಯಿದ್ ಕೆ ಎಸ್ ಆಟಕೋಯ ತಂಙಳ್ ಕುಂಬೋಳ್ (ಉಪಾಧ್ಯಕ್ಷರು ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಕೇಂದ್ರ ಮುಶಾವರ) ಉದ್ಘಾಟಿಸಿದರು. ಝೈನುಲ್ ಉಲಮಾ ಮಾಣಿ ಉಸ್ತಾದ್
(ಅಧ್ಯಕ್ಷರು ಸುನ್ನೀ ಜಂಇಯ್ಯತುಲ್ ಉಲಮಾ ಕರ್ನಾಟಕ) ಅಧ್ಯಕ್ಷತೆ ವಹಿಸಿದ್ದರು. ಸಯ್ಯಿದ್ ಇಬ್ರಾಹಿಂ ಖಲೀಲ್ ಬುಖಾರಿ ತಂಙಳ್ ಕಡಲುಂಡಿ (ಅಧ್ಯಕ್ಷರು ಕೇರಳ ರಾಜ್ಯ ಮುಸ್ಲಿಂ ಜಮಾಅತ್) ಮುಖ್ಯ ಭಾಷಣ ಮಾಡಿದರು.
ಸಯ್ಯಿದ್ ಎಪಿ ಎಸ್ ತಂಙಳ್ ಉಪ್ಪಳ್ಳಿ
ಸಯ್ಯಿದ್ ಅಬ್ದುಲ್ ರಹಿಮಾನ್ ಸಾದಾತ್ ತಂಙಳ್ ಕುಪ್ಪೆಟ್ಟಿ, ಕೆ ಪಿ ಹುಸೈನ್ ಸಅದಿ ಕೆಸಿರೋಡು, ಮುಹಮ್ಮದ್ ಸಅದಿ ವಳವೂರು, ಹೈದರ್ ಮದನಿ ಅಝ್ಹರಿಯ್ಯ, ಶಾದ್ಸುಲಿ ಫೈಝಿ ಕೊಡಗು,
ಅಬೂ ಸುಫ್ಯಾನ್ ಇಬ್ರಾಹಿಂ ಮದನಿ, ಖಾಸಿಂ ಮದನಿ ಕರಾಯ, ಎಸ್ ಪಿ ಹಂಝ ಸಖಾಫಿ ಬಂಟ್ವಾಳ, ಉಸ್ಮಾನ್ ಸಅದಿ ಪಟ್ಟೋರಿ, ತೋಕೆ ಮುಹ್ಯಿದ್ದೀನ್ ಸಖಾಫಿ, ಅಬ್ದುಲ್ ಖಾದರ್ ಸಖಾಫಿ ಅಲ್ ಮದೀನಾ, ಇಸ್ಮಾಯಿಲ್ ಮದನಿ ಕುಂದಾಪುರ, ಜಿ ಎಂ ಮುಹಮ್ಮದ್ ಕಾಮಿಲ್ ಸಖಾಫಿ, ಅಬ್ದುಲ್ ರಹಿಮಾನ್ ಮದನಿ ಮೂಳೂರು , ಡಾ ಮುಹಮ್ಮದ್ ಫಾಝಿಲ್ ರಝ್ವಿ ಕಾವಳಕಟ್ಟೆ, ಹಫೀಳ್ ಸಅದಿ ಕೊಡಗು ,ಸುಫ್ಯಾನ್ ಸಖಾಫಿ ಮುಂತಾದವರು ಭಾಗವಹಿಸಿದರು.
ಇದೇ ಸಮಯದಲ್ಲಿ ಸಾಮಾಜಿಕ , ಧಾರ್ಮಿಕ,ಸಾಮುದಾಯಿಕ ಹಲವು ವಿಷಯಗಳ ಬಗ್ಗೆ ಠರಾವು ಮಂಡಿಸಲಾಯಿತು.
ರಾಜ್ಯ ಕಾರ್ಯದರ್ಶಿ ಡಿ ಕೆ ಉಮರ್ ಸಖಾಫಿ ಕಂಬಳಬೆಟ್ಟು ಸ್ವಾಗತಿಸಿ ಕೆ ಮುಹ್ಯಿದ್ದೀನ್ ಸಖಾಫಿ ವಂದಿಸಿದರು.
ಕೆ.ಜೆ.ಯು. ರಾಜ್ಯ ಮಟ್ಟದ ಸಮಾವೇಶದಲ್ಲಿ ಮಂಡಿಸಲಾದ ಠರಾವು
- ಭಾರತದ ಸುರಕ್ಷತೆಗೆ ಭದ್ರ ಬುನಾದಿಯನ್ನು ಒದಗಿಸಿ ಕೊಟ್ಟಿರುವ ಸಂವಿಧಾನವು ಸಮಾನತೆ, ಸಮಾಜವಾದ, ಜಾತ್ಯತೀತತೆ ಇತ್ಯಾದಿ ಉದಾತ್ತ ಮೌಲ್ಯಗಳನ್ನು ಸಂರಕ್ಷಿಸಿ ದೇಶದ ಸಮಗ್ರತೆಯನ್ನು ಕಾಪಾಡಿಕೊಂಡು ಬಂದಿದೆ. ಇಂತಹ ಸಂವಿಧಾನದ ಬಗ್ಗೆಯೇ ಅಪನಂಬಿಕೆ ಮೂಡಿಸುವ, ಸಂವಿಧಾನವನ್ನು ಕೀಳಾಗಿ ಕಾಣುವ ಕೆಲವು ನಡೆ ನುಡಿಗಳು ಕೆಲವು ಕಡೆಗಳಿಂದ ಕಂಡು ಬರುತ್ತಿದ್ದು, ಇದರ ವಿರುದ್ಧ ದೇಶವು ಒಟ್ಟಾಗಿ ನಿಲ್ಲಬೇಕಾಗಿದೆ. ಸಂವಿಧಾನವು ಜಾರಿಗೊಂಡು 75ನೇ ಗಣರಾಜ್ಯೋತ್ಸವ ದಿನವನ್ನು ಆಚರಿಸುತ್ತಿರುವ ಜನವರಿ 26ನ್ನು ಸಂವಿಧಾನ ಸಂರಕ್ಷಣಾ ದಿನವಾಗಿ ಪರಿಗಣಿಸಿ, ಸಂವಿಧಾನ ಸಂರಕ್ಷಣೆಗೆ ಪ್ರತಿಜ್ಞಾಬದ್ಧರಾಗಬೇಕು.
- ಅಲ್ಪಸಂಖ್ಯಾತ ಸಮುದಾಯದ ಸುಧಾರಣೆಗಾಗಿ ಕೈಗೊಂಡಿದ್ದ ಅಲ್ಪಸಂಖ್ಯಾತ ಇಲಾಖೆಯ ಯಾವುದೇ ಯೋಜನೆಗಳಿಗೆ ಸರ್ಕಾರವು ಕತ್ತರಿ ಪ್ರಯೋಗಿಸದೆ ಮುಂದುವರಿಸಬೇಕು. ಶಿಕ್ಷಣ ಸಾಲಗಳು ಸೇರಿದಂತೆ ಸರಕಾರದ ಯಾವುದೇ ವಿಧ ಸಾಲಯೋಜನೆಗಳನ್ನು ಬಡ್ಡಿರಹಿತಗೊಳಿಸಬೇಕು. ಸಾಗರೋತ್ತರ ಶಿಕ್ಷಣಕ್ಕಾಗಿ ಕೊಡುವ ಬಡ್ಡಿರಹಿತ ಸಾಲ ವ್ಯವಸ್ಥೆಯನ್ನು ಹೆಚ್ಚು ಜನಪ್ರಿಯಗೊಳಿಸಬೇಕು. ಅದಕ್ಕೆ ನಿಗದಿಪಡಿಸಿದ ಅರ್ಹತಾ ಅಂಕವನ್ನು ಶೇಕಡಾ 60ರಿಂದ 50ಕ್ಕೆ ಇಳಿಸುವ ಮೂಲಕ ತಳಮಟ್ಟದ ವಿದ್ಯಾರ್ಥಿಗಳೂ ಸಾಗರೋತ್ತರ ಶಿಕ್ಷಣ ಪಡೆಯಲು ಅವಕಾಶ ಒದಗಿಸಬೇಕು.
- ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದ ವಿದ್ಯಾರ್ಥಿ ವೇತನಗಳನ್ನು ಯಾವ ಕಾರಣಕ್ಕೂ ತಡೆಹಿಡಿಯಬಾರದು.
- ಕೇಂದ್ರ ಸರ್ಕಾರವು ವಕ್ಫ್ ಮಂಡಳಿಗೆ ತಿದ್ದುಪಡಿ ಕಾಯ್ದೆಯನ್ನು ರೂಪಿಸಲು ಮುಂದಾಗಿರುವ ಪ್ರಯತ್ನವು ಅತ್ಯಂತ ಆಘಾತಕಾರಿಯಾಗಿದ್ದು, ಈ ಪ್ರಯತ್ನವನ್ನು ಕೈ ಬಿಟ್ಟು ಮುಸ್ಲಿಂ ಸಮುದಾಯದ ಆತಂಕಗಳನ್ನು ನಿವಾರಿಸಬೇಕು.
- ಧಾರ್ಮಿಕ ಕೇಂದ್ರಗಳ ಬಗ್ಗೆ ವಿವಾದ ಹುಟ್ಟುಹಾಕಿ ಉತ್ಖನನ ನಡೆಸಿ ಸಮಾಜದ ಶಾಂತಿ ಕೆಡಿಸುವ ಹುನ್ನಾರಗಳನ್ನು ಕೊನೆಗೊಳಿಸ ಬೇಕು. ಧಾರ್ಮಿಕ ಕಟ್ಟಡಗಳ ಸಂರಕ್ಷಣಾ ಕಾಯ್ದೆ ಪ್ರಕಾರ ಯಾವುದೇ ಧಾರ್ಮಿಕ ಕೇಂದ್ರಗಳ ಬಗ್ಗೆ ಹಕ್ಕು ಮಂಡನೆ ನಡೆಸದೆ ಯಥಾಸ್ಥಿತಿ ಕಾಪಾಡಲು ಸರ್ಕಾರ ಮುಂದಾಗಬೇಕು.
- ಕ್ರೀಡೆ, ಸಾಹಿತ್ಯ, ಸಾಂಸ್ಕೃತಿಕ, ರಾಜಕೀಯ ಇತ್ಯಾದಿಗಳ ಮರೆಯಲ್ಲಿ ಧಾರ್ಮಿಕ ನಿಯಮಗಳು ಮತ್ತು ಸಂಸ್ಕೃತಿಯನ್ನು ಉಲ್ಲಂಘಿಸುವ ಯಾವುದೇ ಕಾರ್ಯ ಚಟುವಟಿಕೆಗಳಿಂದ ಮುಸ್ಲಿಮರು ದೂರ ನಿಲ್ಲಬೇಕು.
- ಇಸ್ಲಾಮಿನ ಪಾರಂಪರಿಕ ಆಚಾರ ವಿಚಾರಗಳಿಗೆ ವಿರುದ್ಧವಾದ ನೂತನವಾದಗಳು; ಅಧ್ಯಾತ್ಮದ ಹೆಸರಲ್ಲಿ ಮುಸ್ಲಿಮರ ದಾರಿ ತಪ್ಪಿಸುವ ನಕಲಿ ತರೀಕತ್ ವಾದಗಳು; ಯುವ ಜನತೆಯನ್ನು ದೇವ ವಿಶ್ವಾಸದಿಂದ ದೂರಗೊಳಿಸುವ ನಾಸ್ತಿಕವಾದ ಇತ್ಯಾದಿ ವಿತಂಡವಾದಗಳ ವಿರುದ್ಧ ಉಲಮಾಗಳು ಸಮುದಾಯದಲ್ಲಿ ಜಾಗೃತಿ ಮೂಡಿಸಬೇಕು.
- ಇಸ್ಲಾಂ ಬಹಳ ಪಾವಿತ್ರ್ಯವನ್ನು ನೀಡಿರುವ, ವ್ಯಕ್ತಿಗಳ ಜೀವನದಲ್ಲಿ ಅತ್ಯಂತ ಪ್ರಮುಖವಾಗಿರುವ ಮದುವೆಯು ಇಂದು ಹಲವು ಅನಾಚಾರಗಳ ಆಗರವಾಗಿ ಮಾರ್ಪಟ್ಟಿದೆ. ಸರಳ ವಿವಾಹಕ್ಕೆ ಸಮೃದ್ಧಿಯ ಭರವಸೆಯನ್ನು ನೀಡಿರುವ ಇಸ್ಲಾಮಿನ ಆದರ್ಶವನ್ನು ಅವಗಣಿಸಿ; ಮದುವೆ ದಿನ, ಅದರ ಮುಂಚಿನ ಮತ್ತು ನಂತರದ ದಿನಗಳಲ್ಲಿ ಹಲವು ಕಾರ್ಯಕ್ರಮಗಳನ್ನಿಟ್ಟು ಆರ್ಥಿಕ ಭಾರ ಹೆಚ್ಚಿಸುವುದು, ಅನ್ಯ ಸ್ತ್ರೀ ಪುರುಷ ಬೇಧವಿಲ್ಲದೆ ಬೆರೆತು ಮೈ ಮರೆಯುವುದು, ಅನಿಸ್ಲಾಮಿಕ ಆಚಾರಗಳನ್ನು ತುರುಕಿ ವಿವಾಹ ಸಂಸ್ಕೃತಿಯನ್ನು ವಿಕೃತಿಗೊಳಿಸುವುದು ಇತ್ಯಾದಿಗಳು ವ್ಯಾಪಕವಾಗುತ್ತಿದೆ. ಇದರ ವಿರುದ್ಧ ಉಲಮಾ ಉಮರಾಗಳು ಸಮಾಜದಲ್ಲಿ ಜಾಗೃತಿ ಮೂಡಿಸಬೇಕು; ಜಮಾಅತ್ ಸಮಿತಿಗಳು ಮತ್ತು ಧರ್ಮ ಗುರುಗಳು ಧರ್ಮಬದ್ಧ ಮದುವೆಗೆ ಪೂರಕವಾದ ನಿಯಮಗಳನ್ನು ರೂಪಿಸಿ ಮೊಹಲ್ಲಾಗಳಲ್ಲಿ ಅವುಗಳನ್ನು ಜಾರಿಗೊಳಿಸಬೇಕು.
- ಗಾಂಜಾ ಅಫೀಮು ಮತ್ತಿತರ ಮಾದಕ ದ್ರವ್ಯಗಳ ಸೇವನೆ ವಿದ್ಯಾರ್ಥಿ ಯುವಜನರಲ್ಲಿ ತೀವ್ರಗತಿಯಲ್ಲಿ ವ್ಯಾಪಿಸುತ್ತಿದ್ದು, ಇದರ ವಿರುದ್ಧ ಮಕ್ಕಳು ಯುವಕರು ಮತ್ತು ಹೆತ್ತವರಲ್ಲಿ ಜಾಗೃತಿ ಮೂಡಿಸಬೇಕು. ಬಾಹ್ಯ ಆಕರ್ಷಣೆಗೆ ಒಳಗಾಗಿ ದಾರಿ ತಪ್ಪುವ ಹೊಸ ತಲೆಮಾರಿನಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮೊಹಲ್ಲಾ ಮದ್ರಸಗಳನ್ನು ಆಧುನೀಕರಣಗೊಳಿಸಲು ಮೊಹಲ್ಲಾ ಕಮಿಟಿಗಳು ಯೋಜನೆ ರೂಪಿಸಿ ಕಾರ್ಯಪ್ರವೃತ್ತರಾಗಬೇಕು.
- ಧರ್ಮವು ನೆಲೆ ನಿಂತಿರುವುದು ಧರ್ಮವನ್ನು ಕಲಿತ ಉಲಮಾಗಳಿಂದಲೇ ಎಂಬ ವಾಸ್ತವವನ್ನು ತಿಳಿದು ಸಾಮಾಜಿಕ ನಾಯಕರು ಮತ್ತು ಜನ ಸಾಮಾನ್ಯರು ಅವರಿಗೆ ಅರ್ಹ ಗೌರವ ಮತ್ತು ಧರ್ಮ ಬೋಧನೆಗೆ ಸೂಕ್ತ ವ್ಯವಸ್ಥೆಗಳನ್ನು ಒದಗಿಸಬೇಕು. ಉಲಮಾಗಳು ತಾವು ಸಮಾಜಕ್ಕೆ ಮಾದರಿಯಾಗಬೇಕಾದವರು ಎಂಬುದನ್ನು ಅರ್ಥಮಾಡಿಕೊಂಡು, ಕೆಟ್ಟ ನಡೆನುಡಿಗಳು ಮತ್ತು ಸಂಶಯಾಸ್ಪದ ಚಟುವಟಿಕೆಗಳಿಂದ ದೂರ ನಿಂತು ಪಾಪ ರಹಿತವಾದ ಮಾದರೀ ಜೀವನ ಸಾಗಿಸಲು ಗರಿಷ್ಠ ಮಟ್ಟದಲ್ಲಿ ಪ್ರಯತ್ನಿಸಬೇಕು.