janadhvani

Kannada Online News Paper

ಕೆಸಿಎಫ್ ಬಹರೈನ್ ವತಿಯಿಂದ 75ನೇ ಗಣರಾಜ್ಯೋತ್ಸವ ಕಾರ್ಯಕ್ರಮ

”ನಾವು ಭಾರತೀಯರು” ಎಂಬ ಘೋಷ ವಾಕ್ಯದೊಂದಿಗೆ ಕೆಸಿಎಫ್ ಬಹರೈನ್ ರಾಷ್ಟ್ರೀಯ ಸಮಿತಿ ಹಮ್ಮಿಕೊಂಡ ಭಾರತದ 75 ನೇ ಗಣರಾಜ್ಯೋತ್ಸವ ಕಾರ್ಯಕ್ರಮವು ಕೆಸಿಎಫ್ ಸೆಂಟರ್ ಗುದೈಬಿಯಾದಲ್ಲಿ ನಡೆಯಿತು.

ನೋರ್ತ್ ಝೋನ್ ಶಿಕ್ಷಣ ಇಲಾಖೆ ಅಧ್ಯಕ್ಷರಾದ ಅಬೂಬಕರ್ ಮದನಿ ಉಸ್ತಾದರ ದುಆದೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಕೆಸಿಎಫ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾದ ಜನಾಬ್ ಜಮಾಲುದ್ದೀನ್ ವಿಟ್ಲರವರು ತನ್ನ ಅಧ್ಯಕ್ಷೀಯ ಭಾಷಣದಲ್ಲಿ ಕೆ.ಸಿ.ಎಫ್ ದಶಮಾನೋತ್ಸವದ ಭಾಗವಾಗಿ ನಡೆಯುವ ಎಲ್ಲಾ ಯೋಜನೆಗಳನ್ನು ಯಶಸ್ವಿ ಗೊಳಿಸಲು ಕರೆ ನೀಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕನ್ನಡ ಸಂಘದ ಮಾಜಿ ಅಧ್ಯಕ್ಷರಾದ ಆಸ್ಟಿನ್ ಸಂತೋಷ್’ರವರು ನಮ್ಮ ದೇಶದ ಹಿರಿಮೆಯನ್ನು ಉಳಿಸಿ, ಬೆಳೆಸಿ ಮುಂದುವರಿಯುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.
ನಮ್ಮ ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿದ ಧೀರ ನಾಯಕರು ಜಾತಿ ಮತ ಭೇದವಿಲ್ಲದೆ ಸೌಹಾರ್ದತೆಯಿಂದ ಈ ದೇಶವನ್ನು ಉಳಿಸಿ ಕೊಂಡಿದ್ದಾರೆ ಎಂದು ಮುಖ್ಯ ಅತಿಥಿಯಾಗಿ ಭಾಗವಹಿಸಿದ ಚಂಬನ್ ಜಲಾಲ್’ರವರು ನುಡಿದರು.

ಪ್ರಾಸ್ತಾವಿಕ ಬಾಷಣವನ್ನು ಮಾಡಿದ ಕೆ.ಸಿ.ಎಫ್ ಬಹರೈನ್ ರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಾರಿಸ್ ಸಂಪ್ಯರವರು ಸಂವಿಧಾನದ ಮಹತ್ವದ ಬಗ್ಗೆ ವಿವರಿಸಿದರು.
ಸಂವಿಧಾನದ ಶಿಲ್ಪಿಗಳು ಕಂಡ ಕನಸಿನ ಭಾರತವನ್ನು ಕಟ್ಟಲು ಜಾತಿ-ಮತ ಭೇದವಿಲ್ಲದೆ ನಾವೆಲ್ಲರೂ ಒಟ್ಟಾಗಿ ಕಾರ್ಯಾಚರಿಸಬೇಕಾಗಿದೆ ಎಂದರು.
ಕೆಸಿಎಫ್ ಬಹರೈನ್ ರಾಷ್ಟ್ರೀಯ,ಝೋನಲ್ ಹಾಗೂ ಸೆಕ್ಟರ್ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸಂಘಟನಾ ಕಾರ್ಯದರ್ಶಿ ಮನ್ಸೂರ್ ಬೆಳ್ಮ ಸ್ವಾಗತಿಸಿದರು. ಪಬ್ಲಿಕೇಶನ್ ವಿಂಗ್ ಅಧ್ಯಕ್ಷರಾದ ಲತೀಫ್ ಪೆರೋಲಿ ಕಾರ್ಯಕ್ರಮ ನಿರೂಪಿಸಿ, ಶಿಕ್ಷಣ ಇಲಾಖೆ ಕಾರ್ಯದರ್ಶಿ ಅಶ್ರಫ್ ರೆಂಜಾಡಿ ಧನ್ಯವಾದ ಸಮರ್ಪಿಸಿದರು.
—————————————
ವರದಿ: ಎಂ.ಎ. ವೇಣೂರು.
ಪಬ್ಲಿಕೇಶನ್ ವಿಂಗ್, ಕೆಸಿಎಫ್ ಬಹರೈನ್

error: Content is protected !! Not allowed copy content from janadhvani.com