ತಿರುವನಂತಪುರ,ಜುಲೈ.20: ಸುಪ್ರೀಂ ಕೋರ್ಟ್ ಅನುಮತಿ ಮೇರೆಗೆ ಪಿ.ಡಿ.ಪಿ. ಅಧ್ಯಕ್ಷ ಅಬ್ದುನ್ನಾಸರ್ ಮಅ್ದನಿ ಕೇರಳಕ್ಕೆ ಮರಳಿದರು. ಜಾಮೀನು ಬೆಂಗಳೂರಿನಲ್ಲೇ ಇರಬೇಕೆಂಬ ಜಾಮೀನು ಷರತ್ತನ್ನು ಸುಪ್ರೀಂ ಕೋರ್ಟ್ ಹಿಂಪಡೆದ ಹಿನ್ನೆಲೆಯಲ್ಲಿ ಮಅ್ದನಿ ಕೇರಳಕ್ಕೆ ವಾಪಸಾದರು.
ಈ ಹಿಂದೆ ನ್ಯಾಯಾಲಯದ ಅನುಮತಿ ಪಡೆದು, ತಂದೆಯನ್ನು ಸಂದರ್ಶಿಸಲು ಕೇರಳಕ್ಕೆ ಆಗಮಿಸಿದ್ದ ಅವರಿಗೆ ಅನಾರೋಗ್ಯದ ಕಾರಣ ಸಂದರ್ಶಿಸಲು ಸಾಧ್ಯವಾಗಿರಲಿಲ್ಲ. ಇಂದು 11.30ರ ಸುಮಾರಿಗೆ ಬೆಂಗಳೂರಿನಿಂದ ವಿಮಾನದ ಮೂಲಕ ಮಅ್ದನಿ ತಿರುವನಂತಪುರಂ ತಲುಪಿದ್ದಾರೆ.
ಪತ್ನಿ ಸೂಫಿಯಾ ಮಅ್ದನಿ, ಪುತ್ರ ಸಲಾವುದ್ದೀನ್ ಅಯ್ಯೂಬಿ ಸೇರಿದಂತೆ 13 ಮಂದಿ ಜತೆಗಿದ್ದಾರೆ. ಅಲ್ಲಿಂದ ರಸ್ತೆ ಮಾರ್ಗವಾಗಿ ಮಅ್ದನಿ ಅನ್ವಾರುಶ್ಶೇರಿಗೆ ತೆರಳಿದರು.
ಮಅ್ದನಿ ಅವರ ಆರೋಗ್ಯ ಸ್ಥಿತಿಯನ್ನು ಪರಿಗಣಿಸಿ ಹಾಗೂ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರ ಅಂತ್ಯಕ್ರಿಯೆ ನಡೆಯುತ್ತಿರುವ ಸಂದರ್ಭವನ್ನು ಗಮನದಲ್ಲಿಟ್ಟುಕೊಂಡು ಯಾವುದೇ ಸಂಭ್ರಮಾಚರಣೆಯಿಲ್ಲದೆ ಪಕ್ಷದ ಮುಖಂಡರು ಮತ್ತು ಕುಟುಂಬಸ್ಥರಿಂದ ಮಾತ್ರ ವಿಮಾನ ನಿಲ್ದಾಣದಲ್ಲಿ ಮಅ್ದನಿಯವರನ್ನು ಬರಮಾಡಿಕೊಳ್ಳಲಾಯಿತು.
ಅನ್ವಾರುಶ್ಶೇರಿಗೆ ತಲುಪಿದ ನಂತರ ಮಅ್ದನಿಯವರು ಕುಟುಂಬದ ಮನೆಯಲ್ಲಿ ತಮ್ಮ ತಂದೆಯನ್ನು ಭೇಟಿಯಾಗಲಿದ್ದಾರೆ. ತಂದೆಯೊಂದಿಗೆ ಅನ್ವಾರುಶ್ಶೇರಿಯಲ್ಲಿ ಕೆಲವು ದಿನ ಇದ್ದು ನಂತರ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗುವರು.
ಇದು ನ್ಯಾಯಾಂಗ ವ್ಯವಸ್ಥೆಯ ಖ್ಯಾತಿ ಹೆಚ್ಚುತ್ತಿರುವ ಸಂದರ್ಭವಾಗಿದ್ದು, ಬೆಂಬಲಿಸಿದವರಿಗೆ ಮತ್ತು ಪ್ರಾರ್ಥಿಸಿದವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಮದನಿ ಬೆಂಗಳೂರಿನಲ್ಲಿ ಹೇಳಿದರು.
ಆರೋಗ್ಯ ಸ್ಥಿತಿ ಕಷ್ಟಕರವಾಗಿರುವುದರಿಂದ ಮತ್ತು ಸೋಂಕಿನ ಸಾಧ್ಯತೆಯನ್ನು ಪರಿಗಣಿಸಿ ಕೆಲವು ದಿನಗಳವರೆಗೆ ಸಂದರ್ಶನವನ್ನು ತಪ್ಪಿಸುವ ಮೂಲಕ ಎಲ್ಲರೂ ಸಹಕರಿಸಬೇಕೆಂದು ಅವರ ಪರವಾಗಿ ಪಿಡಿಪಿ ಕೇಂದ್ರ ಸಮಿತಿ ವಿನಂತಿಸಿದೆ.
ಅನ್ಯಾಯ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯ ನಿರಂತರ ಕಿರುಕುಳದಿಂದ ಅಲ್ಪ ಮಟ್ಟಿನ ಆರಾಮದಾಯಕ ಪರಿಸ್ಥಿತಿಯನ್ನು ಸೃಷ್ಟಿಸಲು ನಮಗೆ ಬೆಂಬಲ ನೀಡಿದ ಎಲ್ಲರಿಗೂ ಪಿಡಿಪಿ ಕೇಂದ್ರ ಸಮಿತಿಯು ಕೃತಜ್ಞತೆ ಸಲ್ಲಿಸಿದೆ.