ಮಂಗಳೂರು: ಮರ್ಹೂಂ ಆತೂರು ಸಈದ್ ಮುಸ್ಲಿಯಾರ್ ರವರ ವ್ಯಕ್ತಿತ್ವವು ಮುಅಲ್ಲಿಂ ಸಮೂಹಕ್ಕೆ ಅತ್ಯಂತ ಮಾದರೀ ಯೋಗ್ಯವಾಗಿದೆ.
ಸಾವಿರಾರು ಮುಅಲ್ಲಿಮರಿಗೆ ಆದರ್ಶ ಪುರುಷರಾಗಿ ಮುಅಲ್ಲಿಮರ ನಡುವೆ ಪ್ರತಿಭಾವಂತರನ್ನು ಗುರುತಿಸಿ ಅವರಿಗೆ ವಿಶೇಷ ಪ್ರೋತ್ಸಾಹ ಬೆಂಬಲ ನೀಡಿ ಬೆಳಸುವುದರಲ್ಲಿ ಅತ್ಯಂತ ಕಾಳಜಿ ವಹಿಸಿದ ಶ್ರೇಷ್ಠ ನಾಯಕರು ಎಂದು ಎಂಇಪಿ ಟ್ರೈನರ್ಸ್ ವಿಂಗ್ ಆಫ್ ಕರ್ನಾಟಕ ಇದರ ಚೆಯರ್ ಮ್ಯಾನ್ ಇಸ್ಮಾಯೀಲ್ ಸ-ಅದಿ ಉರುಮಣೆ ಹೇಳಿದರು.
ಕರ್ನಾಟಕ ರಾಜ್ಯ ಎಂಇಪಿ ಟ್ರೈನರ್ಸ್ ವಿಂಗ್ ಮೆಲ್ಕಾರ್ ಸುನ್ನೀ ಸೆಂಟರ್ ನಲ್ಲಿ ಆಯೋಜಿಸಿದ ಆತೂರು ಉಸ್ತಾದರ ಅನುಸ್ಮರಣಾ ಸಂಗಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಮದ್ರಸ ರಂಗ ಮತ್ತು ಮುಅಲ್ಲಿಮರ ಸರ್ವತೋಮುಖ ಅಭಿವೃದ್ಧಿಗಾಗಿ ಅವರು ಕಂಡ ಕನಸು ನನಸು ಮಾಡಲು ಪ್ರತಿಯೊಬ್ಬ ಮುಅಲ್ಲಿಮರು ಬದ್ಧರಾಗಬೇಕು ಎಂದು ಕರೆ ನೀಡಿದರು.
ಸಭೆಯಲ್ಲಿ ಟ್ರೈನರ್ಸ್ ಗಳಾದ ಇಬ್ರಾಹೀಂ ನಈಮಿ ಉರುಮಣೆ,ಅಬೂಬಕರ್ ಲತೀಫಿ ಬೇಂಗಿಲ,ಸಿದ್ದೀಖ್ ಸಅದಿ ಮಿತ್ತೂರು,ಸಿದ್ದೀಖ್ ಮಿಸ್ಬಾಹಿ ಕರೋಪಾಡಿ,ಸಿನಾನ್ ಮದನಿ ಕಲ್ಲಡ್ಕ, ಮತ್ತು ಅಬ್ದುಲ್ ಮಜೀದ್ ಸಖಾಫಿ ಅಮ್ಮುಂಜೆ ಮೊದಲಾದವರು ಆತೂರು ಉಸ್ತಾದರ ವ್ಯಕ್ತಿತ್ವದ ಮತ್ತು ಅವರೊಂದಿಗೆ ಇದ್ದ ಒಡನಾಟದ ಮಧುರ ಅನುಭವಗಳನ್ನು ಹಂಚಿಕೊಂಡರು.ಕಾರ್ಯಕ್ರಮದ ಕೊನೆಯಲ್ಲಿ ಉಸ್ತಾದರಿಗಾಗಿ ನಡೆಸಿದ ದ್ಸಿಕ್ರ್ ದುಆ ಕಾರ್ಯಕ್ರಮಕ್ಕೆ ರಫೀಖ್ ಸಅದಿ ಪೇರಿಮಾರ್ ನೇತೃತ್ವ ನೀಡಿದರು.