ಮಂಗಳೂರು: ಮಂಗಳೂರಿನ ಕಂಕನಾಡಿ ಸುಲ್ತಾನ್ ಗೋಲ್ಡ್(Sultan Gold) ಗೆ ಬಜರಂಗ ದಳ ಪುಂಡರು, ಮುಸ್ಲಿಮ್ ಸೇಲ್ಸ್ ಪ್ರತಿನಿಧಿ ಯುವಕನನ್ನು, ಅದೇ ಸಂಸ್ಥೆಯಲ್ಲಿ ನೌಕರಿ ಮಾಡುತ್ತಿರುವ ಯುವತಿಯೊಂದಿಗೆ ಸಂಬಂಧ ಕಲ್ಪಿಸಿ, ಸುಲ್ತಾನ್ ಗೋಲ್ಡ್ ಸ್ವರ್ಣಾಭರಣ ಮಳಿಗೆಗೆ ನುಗ್ಗಿ ತೀವ್ರ ಹಲ್ಲೆ ನಡೆಸಿರುವುದನ್ನು ಮುಸ್ಲಿಮ್ ಒಕ್ಕೂಟದ ಅಧ್ಯಕ್ಷರಾಗಿ ಕೆ.ಅಶ್ರಫ್ ತೀವ್ರವಾಗಿ ಖಂಡಿಸಿದ್ದಾರೆ.
ಬಜರಂಗ ಪುಂಡರ ಈ ಕೃತ್ಯವು ಪೊಲೀಸು ಅಧಿಕಾರಿಗಳ ಸಮಕ್ಷಮವೇ ನಡೆದಿದ್ದು ವಿಪರ್ಯಾಸ.ಕೃತ್ಯದ ಬಗ್ಗೆ ಜ್ಯುವೆಲ್ಲರ್ಸ್ ಅಸೋಸಿಯೇಶನ್ ಮತ್ತು ಕರ್ನಾಟಕ ಗೋಲ್ಡ್ ನಿಯಂತ್ರಣ ಬೋರ್ಡ್ ಮಧ್ಯ ಪ್ರವೇಶಿಸಿ ಕ್ರಮಕ್ಕಾಗಿ ಒತ್ತಾಯಿಸಬೇಕು.
ಇತ್ತೀಚೆಗೆ ಬೆಂಗಳೂರಿನಲ್ಲಿ ಪ್ರಮೋದ್ ಮುತಾಲಿಕ್ ಹೇಳಿಕೆ ನೀಡಿ ಮುಸ್ಲಿಮ್ ಒಡೆತನದ ಸ್ವರ್ಣ ಮಳಿಗೆಗಳನ್ನು ನಿಷೇಧಿಸಿ, ಹಿಂದೂಗಳು ಯಾರೂ ಕೂಡ ವ್ಯಾಪಾರ ನಡೆಸ ಕೂಡದು ಎಂದು ಕರೆ ನೀಡಿರುವುದರ ಘಟನೆಯ ಮುಂದುವರಿಕೆ ಭಾಗ ಮಂಗಳೂರಿನ ಸ್ವರ್ಣ ಮಳಿಗೆಯ ಯುವಕನ ಮೇಲಿನ ಹಲ್ಲೆ ಎಂದು ತಿಳಿಯಬೇಕಾಗುತ್ತದೆ.
ಜ್ಯುವೆಲ್ಲರ್ಸ್ ಅಸೋಸಿಯೇಶನ್(Jewllers Association) ಈ ಬಗ್ಗೆ ಕ್ರಮಕ್ಕೆ ಒತ್ತಾಯ ಪಡಿಸದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ದ.ಕ.ಜಿಲ್ಲೆಯ ಪ್ರತೀ ಸ್ವರ್ಣ ಮಳಿಗೆಗಳನ್ನು ಗ್ರಾಹಕರು ಬಹಿಷ್ಕರಿಸುವ ಬಗ್ಗೆ ಆಂದೋಲನ ಮತ್ತು ಜಾಗೃತಿ ನಡೆಸಲಾಗುವುದು ಎಂದು ಕೆ.ಅಶ್ರಫ್(ಮಾಜಿ ಮೇಯರ್) ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಂಕನಾಡಿಯ ಸುಲ್ತಾನ್ ಗೋಲ್ಡ್ ಜ್ಯುವೆಲ್ಲರಿಯಲ್ಲಿ ನಡೆದ ನೈತಿಕ ಪೊಲೀಸ್ ಗಿರಿ ಪ್ರಕರಣ ಸಂಬಂಧ ಮೂರು ಪ್ರತ್ಯೇಕ ಪ್ರಕರಣ ದಾಖಲಿಸಿದ ಕದ್ರಿ ಠಾಣಾ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಯುವತಿ ತಾಯಿ, ಹಲ್ಲೆಗೊಳಗಾದ ಯುವಕ ಮತ್ತು ಸುಲ್ತಾನ್ ಜ್ಯುವೆಲ್ಲರಿ ಮಾಲೀಕರ ದೂರು ಆಧಾರಿಸಿ ಎಫ್ಐಆರ್ ದಾಖಲಾಗಿದೆ.ಮಗಳ ಮೇಲೆ ದೌರ್ಜನ್ಯ ಹಾಗೂ ಬೆದರಿಕೆ ಒಡ್ಡಿದ ಬಗ್ಗೆ ಯುವತಿ ತಾಯಿ ದೂರು ನೀಡಿದ್ದಾರೆ. ಹಲ್ಲೆ ನಡೆಸಿ ಗಲಭೆ ಸೃಷ್ಟಿಸಿದ ಬಗ್ಗೆ ಯುವಕ ದೂರು ನೀಡಿದ್ದು, ಜ್ಯುವೆಲ್ಲರಿಗೆ ಅಕ್ರಮ ಪ್ರವೇಶ ಮಾಡಿ ದಾಂಧಲೆ ನಡೆಸಿದ ಬಗ್ಗೆ ಜ್ಯುವೆಲ್ಲರಿ ಆಡಳಿತ ದೂರು ದಾಖಲಿಸಿದೆ.
ಸುಲ್ತಾನ್ ಜ್ಯುವೆಲ್ಲರಿಯಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿರುವ ಮಂಗಳೂರಿನ ಲುಕ್ಮಾನ್ ಉಲ್ ಹಕೀಂ ಮೇಲೆ ಹಲ್ಲೆ ನಡೆಸಲಾಗಿತ್ತು.ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಯುವತಿಯ ಪೋಷಕರ ಜೊತೆ ಸುಲ್ತಾನ್ ಜ್ಯುವೆಲ್ಲರಿಗೆ ಬಂದಿದ್ದ ಯುವತಿ ಪ್ರಿಯಕರ ಚೇತನ್ ಎಂಬಾತ ಹಲ್ಲೆ ನಡೆಸಿದ್ದಾಗಿ ಲುಕ್ಮಾನ್ ದೂರು ನೀಡಿದ್ದಾನೆ. ಈ ವೇಳೆ ಪೊಲೀಸರ ಜೊತೆ ಸ್ಥಳಕ್ಕೆ ಬಂದಿದ್ದ ಭಜರಂಗದಳ ಕಾರ್ಯಕರ್ತರು ಕೂಡ ಲುಕ್ಮಾನ್ ನನ್ನ ಪ್ರಶ್ನಿಸಿ ಹಲ್ಲೆ ನಡೆಸಿದ್ದಾರೆ.