ಮಂಗಳೂರು, ಮೇ 9: ಮನವಿ ನೀಡಲು ಕಚೇರಿಗೆ ಬರುವವರ ಜೊತೆ ಮಾತುಕತೆ ನಡೆಸುವುದು ಸಹಜವಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಸ್ಪಷ್ಟಪಡಿಸಿದ್ದಾರೆ.
ಮಂಗಳೂರು ನಗರ ಕಮಿಷನರೇಟ್ ಕಚೇರಿಯಲ್ಲಿ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಗೆ ಆತಿಥ್ಯ ನೀಡಲಾಗಿದೆ ಎಂಬ ವಿಚಾರವು ಸಾಮಾಜಿಕ ಜಾಲತಾಣಗಳಲ್ಲಿ ವಿವಾದಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಈ ಸ್ಪಷ್ಟನೆ ನೀಡಿದ್ದಾರೆ.
ಮಳಲಿ ಮಸೀದಿ ವಿಚಾರವಾಗಿ ಚರ್ಚೆ ಮಾಡಲು ಪ್ರಮೋದ್ ಮುತಾಲಿಕ್ ಕಚೇರಿಗೆ ಬಂದಿದ್ದರು. ಆ ಪ್ರದೇಶವನ್ನು ಪ್ರವೇಶಿಸಲು ಅವರು ಅನುಮತಿ ಕೇಳಿದ್ದರು. ಮುತಾಲಿಕ್ ಮತ್ತವರ ಬೆಂಬಲಿಗರು ಮಳಲಿಗೆ ಭೇಟಿ ನೀಡುತ್ತಾರೆ ಅನ್ನುವ ಮಾಹಿತಿ ಇತ್ತು. ಮುತಾಲಿಕ್ ಅಲ್ಲಿಗೆ ಹೋದರೆ ಅಹಿತಕರ ಘಟನೆ ಉಂಟಾಗುವ ಸಂಭವ ಇತ್ತು. ಹಾಗಾಗಿ ಅವರಿಗೆ ಪ್ರವೇಶ ನಿರಾಕರಿಸಲಾಗಿತ್ತು ಎಂದು ಕಮಿಷನರ್ ತಿಳಿಸಿದ್ದಾರೆ.
ಅಪರಾಹ್ನ 2:30ರ ವೇಳೆಗೆ ಅವರು ಕಚೇರಿಗೆ ಆಗಮಿಸಿದ್ದರು. ನಾವು ಕಚೇರಿಯಿಂದ ಹೊರಡುವ ಸಮಯದಲ್ಲಿ ಆ ಫೋಟೋ ಕ್ಲಿಕ್ಕಿಸಲಾಗಿತ್ತು ಇದನ್ನೇ ನಿರ್ದಿಷ್ಟ ಪಕ್ಷ, ಸಂಘಟನೆಗೆ ಸೇರಿದವರು ಅಪಪ್ರಚಾರ ಮಾಡಿದ್ದಾರೆ ಎಂದು ಕಮಿಷನರ್ ಶಶಿಕುಮಾರ್ ತಿಳಿಸಿದರು.
ಸಾಂದರ್ಭಿಕ ಚಿತ್ರವನ್ನು ತಪ್ಪಾಗಿ ಬಿಂಬಿಸಲಾಗಿದೆ. ಇದನ್ನು ಶೇರ್ ಮಾಡಿದವರು ಪ್ರತಿನಿಧಿಸುವ ಪಕ್ಷದ ಪದಾಧಿಕಾರಿಗಳು ಇಲ್ಲಿಗೆ ಆಗಮಿಸುತ್ತಾರೆ ಎಂದು ಕಮಿಷನರ್ ಪ್ರತಿಕ್ರಿಯಿಸಿದರು.