janadhvani

Kannada Online News Paper

‘ಎನ್ ಹಾನ್ಸ್ ಇಂಡಿಯಾ ಕಾನ್ಫರೆನ್ಸ್’- ಮಂಗಳೂರಿನ ಸಮಾವೇಶಕ್ಕೆ ಕ್ಷಣಗಣನೆ

ಮಂಗಳೂರು, ಮೇ.8: ಎಸ್ಸೆಸ್ಸೆಫ್ ಸುವರ್ಣ ಮಹೋತ್ಸವದ ಅಂಗವಾಗಿ ಎನ್ ಹಾನ್ಸ್ ಇಂಡಿಯಾ ಕಾನರೆನ್ಸ್ ಮೇ 8ರಂದು ದೇಶದ 20 ರಾಜ್ಯಗಳಲ್ಲಿ ನಡೆಯಲಿದ್ದು, ಕರ್ನಾಟಕ ರಾಜ್ಯದ ಸಮಾವೇಶ ಮಂಗಳೂರಿನ ಅಡ್ಯಾರ್‌ ಕಣ್ಣೂರು ಮೈದಾನದಲ್ಲಿ ಮೇ 8ರಂದು ಅಪರಾಹ್ನ 3 ಗಂಟೆಗೆ ಜರಗಲಿದೆ.

ದ.ಕ. ಜಿಲ್ಲೆಯ ನೂರಾರು ಮೊಹಲ್ಲಾಗಳಲ್ಲಿ ಸಂಯುಕ್ತ ಖಾಝಿ ಖುರತುಸ್ಸಾದಾತ್ ಫಝಲ್ ಕೋಯಮ್ಮ ತಂಙಳ್ ಕೂರತ್ ದುಆಃ ನಡೆಸಲಿದ್ದಾರೆ. ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅಬ್ದುಲ್ಲತೀಫ್ ಸಅದಿ ಶಿವಮೊಗ್ಗ ಅಧ್ಯಕ್ಷತೆ ವಹಿಸಲಿದ್ದಾರೆ. ಕರ್ನಾಟಕ ಉಲಮಾ ಒಕ್ಕೂಟದ ಅಧ್ಯಕ್ಷ ಖಾಝಿ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಉದ್ಘಾಟಿಸಲಿದ್ದಾರೆ ಎಂದು ಎಸ್ಸೆಸ್ಸೆಫ್ ಕರ್ನಾಟಕ ಅಧ್ಯಕ್ಷ ಅಬ್ದುಲ್ ಲತೀಫ್ ಸಅದಿ ಶಿವಮೊಗ್ಗ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

ಮರ್ಕಝ್ ವಿದ್ಯಾ ಸಂಸ್ಥೆಯ ನಿರ್ದೇಶಕ ಡಾ. ಮುಹಮ್ಮದ್ ಅಬ್ದುಲ್ ಹಕೀಮ್ ಅಝ್ಹರಿ, ಅಂತರ್‌ ರಾಷ್ಟ್ರೀಯ ಭಾಷಣಗಾರ ಹಾಫಿಝ್ ಇಹ್ಸಾನ್ ಖಾದ್ರಿ ಮುಖ್ಯ ಪ್ರಭಾಷಣ ನಡೆಸಲಿದ್ದಾರೆ.

ಕರ್ನಾಟಕ ಉಲಮಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ.ಪಿ. ಹುಸೈನ್ ಸಅದಿ ಕೆ.ಸಿ.ರೋಡ್, ರಾಜ್ಯ ವಕ್ಸ್‌ ಬೋರ್ಡ್ ಚೇರ್‌ಮನ್ ಮುಹಮ್ಮದ್ ಶಾಫಿ ಸಅದಿ ಬೆಂಗಳೂರು, ಸ್ಥಳೀಯ ಶಾಸಕರಾದ ಡಿ. ವೇದವ್ಯಾಸ ಕಾಮತ್, ಯು.ಟಿ. ಖಾದರ್, ಎಸ್‌ಎಂಎ ರಾಜ್ಯ ಅಧ್ಯಕ್ಷ ಸೈಯದ್ ಜಲಾಲುದ್ದೀನ್ ಅಲ್ ಹಾದಿ ತಂಙಳ್ ಉಜಿರೆ, ಎಸ್‌ವೈಎಸ್ ರಾಜ್ಯಾಧ್ಯಕ್ಷ ಡಾ.ಎಮ್ಮೆಸ್ಸೆಂ ಅಬ್ದುರಶೀದ್ ಝೈನಿ ಕಾಮಿಲ್ ಮೊದಲಾದವರು ಭಾಗವಹಿಸಲಿದ್ದಾರೆ ಎಂದರು.

ಎಸ್ಸೆಸ್ಸೆಫ್ ಪ್ರಮುಖರಾದ ಇಸ್ಮಾಯೀಲ್ ಮಾಸ್ಟರ್ ಮರಿಕ್ಕಳ, ಹಾಫಿಝ್ ಸುಫ್ಯಾನ್ ಸಖಾಫಿ ಕೊಪ್ಪಳ, ಕೆ.ಎಂ.ಮುಸ್ತಫಾ ನಈಮಿ ಹಾವೇರಿ, ಮುನೀರ್ ಸಖಾಫಿ ಉಳ್ಳಾಲ ಉಪಸ್ಥಿತರಿದ್ದರು.