ಬೆಳಗಾವಿ: ನಿಮ್ಮನ್ನು ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡುತ್ತೇವೆ ಎರಡೂವರೆ ಸಾವಿರ ಕೋಟಿ ಕೊಡಿ ಎಂದು ದೆಹಲಿಯಿಂದ ಒಂದು ಗ್ಯಾಂಗ್ ನನ್ನ ಬಳಿ ಬಂದಿತ್ತು ಎಂದು ಬಿಜೆಪಿ ಶಾಸಕ ಬಸವನ ಗೌಡ ಪಾಟೀಲ್ ಯತ್ನಾಳ್ ಸ್ಪೋಟಕ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.
2,500 ಕೋಟಿ ರೂ.ಕೊಡಿ ಎಂದು ದೆಹಲಿಯಿಂದ ಬಂದ ಕೆಲವರು ಹೇಳಿದ್ದರು. ಸಿಎಂ ಮಾಡ್ತೀವಿ ಅಂದಿದ್ರು. ನಾನು 2,500 ಕೋಟಿ ರೂ. ಅಂದರೆ ಏನು ಅಂತ ಭಾವಿಸಿದ್ದೀರಿ ಎಂದು ಕೇಳಿದ್ದೆ. ಆ 2,500 ಕೋಟಿ ರೂ. ಹೇಗೆ ಇಡುವುದು? ಕೋಣೆಯಲ್ಲಿ ಇಡುವುದಾ? ಗೋದಾಮಿನಲ್ಲಿ ಇಡುವುದಾ? ಎಂದು ಕೇಳಿದ್ದೆ ಎಂದು ಹೇಳಿದ್ದಾರೆ.
ರಾಜಕಾರಣದಲ್ಲಿ ಯಾರೂ ಅಲ್ಲಿ ಇಲ್ಲಿ ಹೋಗಿ ಹಾಳಾಗಬೇಡಿ. ನಿಮಗೆ ಟಿಕೆಟ್ ಕೊಡಿಸುತ್ತೇವೆ. ದೆಹಲಿ ಕರೆದುಕೊಂಡು ಹೋಗ್ತೀವಿ, ಸೋನಿಯಾ ಗಾಂಧಿ ಭೇಟಿ ಮಾಡಿಸ್ತೀವಿ. ಜೆ.ಪಿ. ನಡ್ಡಾರನ್ನು ಭೇಟಿ ಮಾಡಿಸ್ತೀವಿ ಅಂತಾರೆ. ದೆಹಲಿಯಿಂದ ಒಂದಿಷ್ಟು ಜನ ನನ್ನ ಬಳಿಯೂ ಬಂದಿದ್ದರು. ನಿಮ್ಮನ್ನು ಸಿಎಂ ಮಾಡ್ತೀವಿ 2,500 ಕೋಟಿ ರೂ. ನೀಡಿ ಎಂದು ಹೇಳಿದ್ದರು ಎಂದು ಹೇಳಿದ್ದಾರೆ.
ನಾನು ನಾಟಕ ಮಾಡಿದ್ರೆ ಈಗಲ್ಲ. ಈ ಹಿಂದೆಯೇ ಸಿಎಂ ಆಗಿರುತ್ತಿದ್ದೆ. ಯಡಿಯೂರಪ್ಪಗೆ ಇತ್ತೀಚೆಗೆ ಪುತ್ರ ವ್ಯಾಮೋಹ ಬಂದು ಬಿಟ್ಟಿದೆ ಎಂದು ಮಾಜಿ ಸಿಎಂ ವಿರುದ್ಧ ವೈಮನಸ್ಯವನ್ನು ಹೊರಹಾಕಿದ್ದಾರೆ.