janadhvani

Kannada Online News Paper

ಭಾರತದಲ್ಲಿ ವಾರಗಳ ಮಟ್ಟಿಗೆ ಲಾಕ್‌ಡೌನ್ ಅತೀ ಅಗತ್ಯ- ಅಮೆರಿಕದ ರೋಗ ತಜ್ಞ

‘ಭಾರತವು ತೆಗೆದುಕೊಳ್ಳಬೇಕಿರುವ ಅತ್ಯಂತ ಪ್ರಮುಖ ಕ್ರಮವೆಂದರೆ ಆಕ್ಸಿಜನ್ ಪಡೆಯುವುದು, ಔಷಧಗಳನ್ನು ಪೂರೈಸುವುದು, ಪಿಪಿಇಗಳನ್ನು ಒದಗಿಸುವುದು. ಆದರೆ ತಕ್ಷಣವೇ ಮಾಡಬೇಕಿರುವ ಅತ್ಯಂತ ಅಗತ್ಯದ ಕೆಲಸವೆಂದರೆ ದೇಶವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವುದು’

ವಾಷಿಂಗ್ಟನ್: ಭಾರತದಲ್ಲಿನ ಮಾರಕ ಕೋವಿಡ್ ಎರಡನೆಯ ಅಲೆ ಸದ್ಯಕ್ಕೆ ನಿಯಂತ್ರಣಕ್ಕೆ ಬರುವ ಸೂಚನೆ ಕಾಣಿಸುತ್ತಿಲ್ಲ. ಹೀಗಾಗಿ ಸೋಂಕು ಹರಡುವುದನ್ನು ತಡೆಯಲು ತಕ್ಷಣದಿಂದಲೇ ಕೆಲವು ವಾರಗಳ ಮಟ್ಟಿಗೆ ಲಾಕ್‌ಡೌನ್ ಜಾರಿಗೊಳಿಸಬೇಕು ಎಂದು ಅಮೆರಿಕದ ಸಾಂಕ್ರಾಮಿಕ ರೋಗ ತಜ್ಞ ಆಂಟೋನಿ ಫೌಸಿ ಸಲಹೆ ನೀಡಿದ್ದಾರೆ.

ಭಾರತವು ಆಕ್ಸಿಜನ್, ಔಷಧಗಳು, ಪಿಪಿಇಗಳ ಪೂರೈಕೆಯಂತಹ ಮಹತ್ವದ ಹೆಜ್ಜೆಗಳನ್ನು ತ್ವರಿತವಾಗಿ ತೆಗೆದುಕೊಳ್ಳುವುದು ಅಗತ್ಯವಾಗಿದೆ ಎಂದು ಅವರು ಹೇಳಿದ್ದಾರೆ.
ಈ ಬಿಕ್ಕಟ್ಟಿನ ಪ್ರಮಾಣವನ್ನು ನೋಡಿದಾಗ, ಭಾರತವು ವಿಷಮ ನಿರ್ವಹಣೆ ಸಮೂಹವನ್ನು ಒಟ್ಟಾಗಿ ಸೇರಿಸುವ ಮತ್ತು ಎಲ್ಲವನ್ನೂ ವ್ಯವಸ್ಥಿತವಾಗಿ ಸಂಘಟಿಸುವ ಕೆಲಸದತ್ತ ಭಾರತ ಗಮನ ಹರಿಸಬೇಕು ಎಂದು ತಿಳಿಸಿದ್ದಾರೆ.

‘ನೀವು ನಿಜಕ್ಕೂ ಮಾಡಬೇಕಿರುವ ಕೆಲಸಗಳಲ್ಲಿ, ದೇಶವನ್ನು ತಾತ್ಕಾಲಿಕವಾಗಿ ಸಂಪೂರ್ಣ ಲಾಕ್‌ಡೌನ್‌ ಮಾಡುವುದು ಮುಖ್ಯವಾಗಿದೆ. ವೈರಸ್ ನಿಗ್ರಹಕ್ಕೆ ತಕ್ಷಣದ, ಮಧ್ಯಂತರ ಹಾಗೂ ದೀರ್ಘಾವಧಿಯ ವಿವಿಧ ಕ್ರಮಗಳಿವೆ’ ಎಂದಿದ್ದಾರೆ.
‘ಭಾರತವು ತೆಗೆದುಕೊಳ್ಳಬೇಕಿರುವ ಅತ್ಯಂತ ಪ್ರಮುಖ ಕ್ರಮವೆಂದರೆ ಆಕ್ಸಿಜನ್ ಪಡೆಯುವುದು, ಔಷಧಗಳನ್ನು ಪೂರೈಸುವುದು, ಪಿಪಿಇಗಳನ್ನು ಒದಗಿಸುವುದು. ಆದರೆ ತಕ್ಷಣವೇ ಮಾಡಬೇಕಿರುವ ಅತ್ಯಂತ ಅಗತ್ಯದ ಕೆಲಸವೆಂದರೆ ದೇಶವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವುದು’ ಎಂದು ಫೌಸಿ ಹೇಳಿದ್ದಾರೆ.

ಚೀನಾದಲ್ಲಿ ಕೊರೊನಾ ವೈರಸ್‌ನ ಭಾರಿ ಪ್ರಕರಣಗಳನ್ನು ಕಳೆದ ವರ್ಷ ಎದುರಿಸಿತ್ತು. ಆಗ ಅವರು ಸಂಪೂರ್ಣವಾಗಿ ದೇಶವನ್ನು ಸ್ಥಗಿತಗೊಳಿಸಿದ್ದರು. ಆರು ತಿಂಗಳವರೆಗೆ ಸಂಪೂರ್ಣ ಸ್ಥಗಿತಗೊಳಿಸುವ ಅಗತ್ಯವಿಲ್ಲ. ಆದರೆ ವೈರಸ್ ಪ್ರಸರಣದ ಸರಪಣಿಯನ್ನು ತುಂಡರಿಸಲು ತಾತ್ಕಾಲಿಕ ಲಾಕ್‌ಡೌನ್ ನೆರವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ವೈರಸ್ ಹರಡುವುದನ್ನು ತಗ್ಗಿಸಲು ಲಾಕ್‌ಡೌನ್ ಖಂಡಿತವಾಗಿಯೂ ಅಗತ್ಯ. ದೇಶವನ್ನು ಲಾಕ್‌ಡೌನ್ ಮಾಡಲು ಯಾರೂ ಬಯಸುವುದಿಲ್ಲ. ನೀವು ಆರು ತಿಂಗಳವರೆಗೆ ಲಾಕ್‌ಡೌನ್ ಮಾಡಿದರೆ ಮಾತ್ರ ಸಮಸ್ಯೆಗಳಾಗುತ್ತವೆ. ಆದರೆ ಕೆಲವು ವಾರಗಳ ಲಾಕ್‌ಡೌನ್, ಈ ಪಿಡುಗಿನ ಸಾಮರ್ಥ್ಯದ ಮೇಲೆ ಗಣನೀಯ ಪರಿಣಾಮ ಬೀರಬಲ್ಲವು’ ಎಂದಿದ್ದಾರೆ.

‘ಆಕ್ಸಿಜನ್ ಹುಡುಕಿಕೊಂಡು ಕೆಲವು ಜನರು ತಮ್ಮ ತಾಯಂದಿರು, ತಂದೆ, ಸಹೋದರಿಯರು ಮತ್ತು ಸಹೋದರರನ್ನು ಬೀದಿಗೆ ಕರೆದುಕೊಂಡು ಬರುತ್ತಿದ್ದಾರೆ ಎಂಬುದನ್ನು ಕೇಳಿದೆ. ಇಲ್ಲಿ ಯಾವುದೇ ಸಂಘಟನೆ, ಕೇಂದ್ರೀಕೃತ ವ್ಯವಸ್ಥೆ ಇಲ್ಲ ಎಂದೇ ಅವರು ಭಾವಿಸುತ್ತಿರುವಂತಿದೆ’ ಎಂದು ಹೇಳಿದ್ದಾರೆ.

ಕೊರೊನಾ ವೈರಸ್ ಸನ್ನಿವೇಶ ನಿಯಂತ್ರಿಸಲು ಲಸಿಕೆ ಅತ್ಯಂತ ನಿರ್ಣಾಯಕ ಪಾತ್ರ ವಹಿಸುತ್ತದೆ. 1.4 ಬಿಲಿಯನ್ ಜನಸಂಖ್ಯೆ ಇರುವ ದೇಶದಲ್ಲಿ ಒಟ್ಟು ಜನಸಂಖ್ಯೆಯ ಕೇವಲ ಶೇ 2ರಷ್ಟು ಲಸಿಕೆ ನೀಡಲಾಗಿದೆ. ಹೀಗಾಗಿ ಲಸಿಕೆ ವ್ಯಾಪಕವಾಗಿ ನೀಡಲು ಇನ್ನೂ ಸಾಕಷ್ಟು ಸಮಯ ಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ನೀವು ಲಸಿಕೆಗಳ ಪೂರೈಕೆಗೆ ವ್ಯವಸ್ಥೆ ಮಾಡಬೇಕು. ಜಗತ್ತಿನೆಲ್ಲೆಡೆ ಇರುವ ವಿವಿಧ ಕಂಪೆನಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕು. ಲಸಿಕೆ ಉತ್ಪಾದಿಸುವ ಅನೇಕ ಕಂಪೆನಿಗಳಿವೆ. ಅವರೊಂದಿಗೆ ಮಾತುಕತೆ ನಡೆಸಿ ಲಸಿಕೆ ಪಡೆಯಬೇಕು. ಈ ಬದ್ಧತೆಯ ಅಗತ್ಯವಿದೆ. ಹಾಗೆಯೇ ಭಾರತವು ಜಗತ್ತಿನಲ್ಲೇ ಅತಿ ದೊಡ್ಡ ಲಸಿಕೆ ಉತ್ಪಾದಕ ದೇಶವಾಗಿದೆ. ಹೀಗಾಗಿ ಲಸಿಕೆ ಉತ್ಪಾದನೆಯ ಸಾಮರ್ಥ್ಯವನ್ನು ಮತ್ತಷ್ಟು ಚುರುಕುಗೊಳಿಸಬೇಕು’ ಎಂದು ಸಲಹೆ ನೀಡಿದ್ದಾರೆ.

error: Content is protected !! Not allowed copy content from janadhvani.com