ಕೊಚ್ಚಿನ್,ಏ.11: ಪ್ರಮುಖ ಉದ್ಯಮಿ ಎಂ.ಎ. ಯೂಸುಫ್ ಅಲಿ ಮತ್ತು ಅವರ ಕುಟುಂಬವನ್ನು ಹೊತ್ತ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶಗೊಳಿಸಲಾಗಿದೆ ಎಂದು ಕೇರಳೀಯ ಮಾಧ್ಯಮಗಳು ವರದಿ ಮಾಡಿದೆ.
ಯಾಂತ್ರಿಕ ತೊಂದರೆಯ ಹಿನ್ನೆಲೆಯಲ್ಲಿ ಹೆಲಿಕಾಪ್ಟರ್ ನ್ನು ತುರ್ತಾಗಿ ಇಳಿಸಲಾಗಿದೆ. ಹೆಲಿಕಾಪ್ಟರ್ ಸುರಕ್ಷಿತವಾಗಿ ಇಳಿದಿದೆ ಎಂದು ತಿಳಿದುಬಂದಿದೆ. ಯೂಸುಫಲಿ ಅವರ ಪತ್ನಿ ಸೇರಿದಂತೆ ಐದು ಜನರು ಹೆಲಿಕಾಪ್ಟರ್ನಲ್ಲಿದ್ದರು.
ಈ ಘಟನೆ ಎರ್ನಾಕುಲಂನಲ್ಲಿ ನಡೆದಿದೆ. ಕೊಚ್ಚಿಯ ಪನಂಙಾಡ್ ಜೌಗು ಪ್ರದೇಶದಲ್ಲಿ ಹೆಲಿಕಾಪ್ಟರ್ ಇಳಿದಿದೆ. ಯೂಸುಫ್ ಅಲಿ ಮತ್ತು ಅವರ ಪತ್ನಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು,ಇಬ್ಬರೂ ಸುರಕ್ಷಿತರಾಗಿದ್ದಾರೆ ಎಂಬುದು ಪ್ರಾಥಮಿಕ ಮಾಹಿತಿ. ಸ್ಕ್ಯಾನಿಂಗ್ ಸೇರಿದಂತೆ ತಜ್ಞರ ಪರೀಕ್ಷೆ ನಡೆಸಲಾಗುತ್ತಿದೆ.
ಜೌಗು ಪ್ರದೇಶಕ್ಕೆ ಇಳಿಸಲ್ಪಟ್ಟಿದ್ದರಿಂದ ಭಾರೀ ದುರಂತವೊಂದು ತಪ್ಪಿದೆ. ಘಟನೆಯ ಸಮಯದಲ್ಲಿ ಮಳೆ ಮತ್ತು ಗಾಳಿ ಬೀಸುತ್ತಿತ್ತು. ಬೆಳಿಗ್ಗೆ 8.30 ಕ್ಕೆ ಘಟನೆ ನಡೆದಿದೆ. ಎಂ.ಎ. ಯೂಸುಫ್ ಅಲಿ ಮತ್ತು ಇತರ ನಾಲ್ವರು ಲೇಕ್ ಶೋರ್ ಆಸ್ಪತ್ರೆಯಲ್ಲಿರುವ ಸಂಬಂಧಿಯನ್ನು ಭೇಟಿ ಮಾಡಲು ತೆರಳಿದ್ದರು. ಹೆಲಿಕಾಪ್ಟರ್ ಪನಂಙಾಡ್ನ ಮೀನುಗಾರಿಕೆ ಕಾಲೇಜು ಮೈದಾನದಲ್ಲಿ ಇಳಿಸಲು ನಿರ್ಧರಿಸಲಾಗಿತ್ತು. ಆದಾಗ್ಯೂ, ಹೆಲಿಕಾಪ್ಟರ್ ನಿಯಂತ್ರಣ ಕಳೆದುಕೊಂಡು ಮೊದಲೇ ನಿರ್ಧರಿಸಿದ ಸ್ಥಳದಿಂದ 200 ಮೀಟರ್ ದೂರದಲ್ಲಿರುವ ಜೌಗು ಪ್ರದೇಶಕ್ಕೆ ಅಪ್ಪಳಿಸಿತು.