ಚಿಕ್ಕಮಗಳೂರು: ಕೋವಿಡ್ ಸೋಂಕು ಪೀಡಿತ ಮರಣ ಹೊಂದಿದವರ ಅಂತ್ಯಕ್ರಿಯೆ ನೆರವೇರಿಸಲು ಎಸ್.ವೈ.ಎಸ್ ಹಾಗೂ ಎಸ್ಸೆಸ್ಸೆಫ್ ಜಂಟಿಯಾಗಿ ತಂಡವೊಂದನ್ನು ರಚಿಸಲಾಯಿತು.
ದಿನಾಂಕ 10/07/2020 ರಂದು ಕೆ.ಎಂ.ಜೆ ನಾಯಕರ ನೇತೃತ್ವದಲ್ಲಿ ನಡೆದ ಎಸ್.ವೈ.ಎಸ್ ಚಿಕ್ಕಮಗಳೂರು ಸೆಂಟರ್ ಮತ್ತು ಎಸ್ಸೆಸ್ಸೆಫ್ ಚಿಕ್ಕಮಗಳೂರು ಡಿವಿಷನ್ನ ಮುಖ್ಯ ಪದಾಧಿಕಾರಿಗಳ ಸಭೆಯಲ್ಲಿ ತೆಗೆದುಕೊಂಡ ನಿರ್ಣಯದಂತೆ, ಇಂದು 13/07/2020 ರಂದು, ಎಸ್.ವೈ.ಎಸ್ ಚಿಕ್ಕಮಗಳೂರು ಸೆಂಟರ್ ಅಧ್ಯಕ್ಷರಾದ ಹಾಜಿ ಎಂ.ಪಿ ಶೇಖ್ ಅಹ್ಮದ್ ರವರ ಅಧ್ಯಕ್ಷತೆಯಲ್ಲಿ ನಗರದ ಉಪ್ಪಳ್ಳಿಯ ಶಾದ್ಸುಲಿ ಮಸ್ಜಿದ್ನ ಮದರಸ ಹಾಲ್ನಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಇಂದಿನ ಸಭೆಯನ್ನು ಎಸ್.ವೈ.ಎಸ್ ಬದ್ರಿಯಾ ಬ್ರಾಂಚ್ ಪ್ರಧಾನ ಕಾರ್ಯದರ್ಶಿ ಬಹು| ಇಬ್ರಾಹಿಂ ಸಅದಿ ಉದ್ಘಾಟಿಸಿ, ಈ ತಂಡದ ಮಹತ್ವವನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಬಹು| ಶರೀಫ್ ಸಖಾಫಿ ರವರು ಕೋವಿಡ್ 19 ಕಾರಣ ಮರಣಹೊಂದಿದ ಮೃತ ದೇಹವನ್ನು ಪರಿಪಾಲನೆ ಮಾಡುವಾಗ ಪಾಲಿಸಬೇಕಾದ ಇಸ್ಲಾಮ್ ಧರ್ಮದ ನಿಯಮಗಳ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು.
ಎಸ್.ವೈ.ಎಸ್ ಬದ್ರಿಯಾ ಬ್ರಾಂಚ್ ಅಧ್ಯಕ್ಷರಾದ ಅಬೂಬಕ್ಕರ್ ಸಿದ್ದೀಕ್ ರವರು ಮೃತದೇಹದ ಅಂತ್ಯ ಸಂಸ್ಕಾರದ ವೇಳೆ ಪಾಲಿಸಬೇಕಾದ ಮುಂಜಾಗ್ರತಾ ಕ್ರಮಗಳನ್ನು ಮತ್ತು ಸರ್ಕಾರಿ ನಿಯಮಗಳನ್ನು ತಿಳಿಸಿಕೊಟ್ಟರು.
ನಂತರ ವಿವಿಧ ಶಾಖೆಗಳಿಂದ ಆಗಮಿಸಿದ 30 ಜನ ಸದಸ್ಯರು ಸ್ವ ಇಚ್ಛೆಯಿಂದ ಈ ತಂಡದಲ್ಲಿ ತಮ್ಮ ಹೆಸರನ್ನು ನೋಂದಾಯಿಸಿ ಕೊಂಡರು.
ಇಂದಿನ ಈ ಸಭೆಯಲ್ಲಿ ಕೆ.ಎಂ.ಜೆ ರಾಜ್ಯ ನಾಯಕರಾದ ಎ. ಯೂಸುಫ್ ಹಾಜಿ ಉಪ್ಪಳ್ಳಿ, ಎಸ್ಸೆಸ್ಸೆಫ್ ರಾಜ್ಯ ನಾಯಕರಾದ ಮುಹಮ್ಮದ್ ಸಫ್ವಾನ್ ವಿಜಯಪುರ, ಎಸ್.ವೈ.ಎಸ್ ಚಿಕ್ಕಮಗಳೂರು ಜಿಲ್ಲಾಧ್ಯಕ್ಷರಾದ ಕೆ.ಪಿ ಅಬೂಬಕ್ಕರ್ ಉಪ್ಪಳ್ಳಿ, ಎಸ್ಸೆಸ್ಸೆಫ್ ಚಿಕ್ಕಮಗಳೂರು ಜಿಲ್ಲಾ ನಾಯಕರಾದ ಮುನೀರ್ ಅಹ್ಮದ್ ಶಾಂತಿನಗರ, ಶಾಹೀನ್ ಅಲಿ ವಿಜಯಪುರ, ಎಸ್ಸೆಸ್ಸೆಫ್ ಚಿಕ್ಕಮಗಳೂರು ಡಿವಿಷನ್ ಅಧ್ಯಕ್ಷರಾದ ಮುಸ್ತಫಾ ಝುಹ್ರಿ ಶಾಂತಿನಗರ ಉಪಸ್ಥಿತರಿದ್ದರು.
ಸಭೆಯನ್ನು ಎಸ್.ವೈ.ಎಸ್ ಚಿಕ್ಕಮಗಳೂರು ಸೆಂಟರ್ ಪ್ರಧಾನ ಕಾರ್ಯದರ್ಶಿ ಉಸ್ಮಾನ್ ಹಂಡುಗುಳಿ ಸ್ವಾಗತಿಸಿ, ಕಾರ್ಯಕ್ರಮದ ನಿರೂಪಣೆ ಮಾಡಿದರು ನಝೀರ್ ಅಹ್ಮದ್ ಉಪ್ಪಳ್ಳಿ ವಂದಿಸಿದರು.