janadhvani

Kannada Online News Paper

ಮಾನವೀಯತೆ ಮೆರೆದ ಗೂಡಿನಬಳಿ ವ್ಯಕ್ತಿಗೆ ಹಣ ತಲುಪಿಸಿಕೊಟ್ಟ ಕೆಸಿಎಫ್ ಲಂಡನ್

ಲಂಡನ್: ಕೂಲಿ ಕಾರ್ಮಿಕ ಅಬ್ದುಲ್ ರಹ್ಮಾನ್ ಗೂಡಿನಬಳಿರವರು ಪವಿತ್ರ ಹಜ್ ನಿರ್ವಹಿಸಲು ಶೇಖರಿಸಿಟ್ಟ ಹಣದಿಂದ ಲಾಕ್ಡೌನ್ ಸಂದರ್ಭದಲ್ಲಿ ಸಂಕಷ್ಟಕ್ಕೊಳಗಾದ ಬಡವರಿಗೆ ಆಹಾರ ಕಿಟ್ ವಿತರಿಸಿಕೊಟ್ಟಿದ್ದರು. ಇದು ರಾಷ್ಟ್ರೀಯ ಮಾಧ್ಯಮಗಳಲ್ಲೂ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲೂ ಭಾರಿ ಪ್ರಶಂಶೆಗೆ ಪಾತ್ರವಾಗಿತ್ತು.ಈ ಸುದ್ದಿಯು ಯೂರೋಪ್ ರಾಷ್ಟ್ರಗಳಾದ್ಯಂತ ದಿ ಫೈವ್ ಫಿಲ್ಲರ್ಸ್ ಮಾಧ್ಯಮದಲ್ಲಿ ಪ್ರಸಾರವಾಗಿದ್ದನ್ನು ಕಂಡು ಪ್ರಭಾವಿತರಾದ ಲಂಡನ್ ಪ್ರಜೆ ಬಿಲಾಲ್ ಚಾವಲ್ ಎಂಬ ವ್ಯಕ್ತಿ ಅಬ್ದುಲ್ ರಹ್ಮಾನ್ ಗೂಡಿನಬಳಿ ರವರ ಹಜ್ ವೆಚ್ಚವನ್ನು ಭರಿಸಲು ತೀರ್ಮಾನಿಸಿ ಅವರ ಮಗನಿಗೆ ಕರೆ ಮಾಡಿ ವಿಷಯ ತಿಳಿಸಿದರು.ಅಬ್ದುಲ್ ರಹ್ಮಾನ್ ರವರ ಮಗ ಅದನ್ನು ನಿರಾಕರಿಸಿದರೂ ಪಟ್ಟು ಬಿಡದ ಬಿಲಾಲ್ ಚಾವಲ್ ರವರು ನನಗೆ ಮದುವೆಯಾಗಿ ಮೂರು ವರ್ಷ ಕಳೆದರೂ ಮಗುವಾಗಿಲ್ಲ. ನೀವು ದುಆ ಮಾಡಬೇಕು. ಅದೇ ರೀತಿ ನನ್ನ ಖರ್ಚಿನಲ್ಲೇ ನಿಮ್ಮ ತಂದೆ ಹಜ್ ನಿರ್ವಹಿಸಬೇಕೆಂದು ಒತ್ತಾಯಿಸಿದರು. ಕೊನೆಗೆ ಅಬ್ದುಲ್ ರಹ್ಮಾನ್ ರವರ ಪತ್ನಿಯನ್ನು ಬಿಲಾಲ್ ಚಾವಲ್ ರವರ ಖರ್ಚಿನಲ್ಲಿ ಹಜ್ ನಿರ್ವಹಿಸಲು ಸಮ್ಮತಿಸಿದರು.ಅಬ್ದುಲ್ ರಹ್ಮಾನ್ ರವರ ಮಗನ ಬ್ಯಾಂಕ್ ಅಕೌಂಟ್ ಕಳುಹಿಸಲು ಕೇಳಿಕೊಂಡಾಗ ಯಾವುದೋ ಅನಾಮಿಕ ವ್ಯಕ್ತಿಗೆ ಬ್ಯಾಂಕ್ ಖಾತೆ ಮಾಹಿತಿ ಕಳುಹಿಸಿಕೊಡುವುದು ಸೂಕ್ತವಲ್ಲ ಎಂದು ಅರಿತು ಲಂಡನ್ ಕೆಸಿಎಫ್ ಸದಸ್ಯರಾದ ಆಸಿಫ್ ಬಜ್ಪೆಯವರಿಗೆ ಮಾಹಿತಿ ತಿಳಿಸಿದರು. ಆಸಿಫ್ ಬಜ್ಪೆಯವರಿಗೂ ಅನುಮಾನವಾಯಿತು. ಕೂಡಲೇ ಕೆಸಿಎಫ್ ಲಂಡನ್ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಮುಹಮ್ಮದ್ ರಫೀಕ್ ಹಳೆಯಂಗಡಿರವರನ್ನು ಸಂಪರ್ಕಿಸಿ ಈ ಬಗ್ಗೆ ಅನ್ವೇಷಣೆ ನಡೆಸುವಂತೆ ತಿಳಿಸಿದರು.ಕೂಡಲೇ ಕಾರ್ಯಪೃವರ್ತರಾದ ಮುಹಮ್ಮದ್ ರಫೀಕ್ ಹಳೆಯಂಗಡಿರವರು ಬಿಲಾಲ್ ಚಾವಲ್ ರವರನ್ನು ಸಂಪರ್ಕಿಸಿ ಅಕೌಂಟ್ ನಂಬರ್ ಕಳುಹಿಸಿಕೊಟ್ಟರು. ಕ್ಷಣಮಾತ್ರದಲ್ಲೇ ಖಾತೆಗೆ ಹಣ ಪಾವತಿಯಾಯಿತು. ಬಿಲಾಲ್ ಚಾವಲ್ ರವರು ತನ್ನ ಗೆಳೆಯರಿಂದ ಕ್ರೋಡ್ ಫಂಡ್ ಮೂಲಕ ಈ ಮೊತ್ತವನ್ನು ಒಟ್ಟುಗೂಡಿಸಿದ್ದರು.ಕೆಸಿಎಫ್ ಅಂತಾರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಡಾಕ್ಟರ್| ಶೈಖ್ ಬಾವ ಮಂಗಳೂರು, ನಿಸಾರ್ ಉರುಮನೆ, ಅಶ್ರಫ್ ಅಮಾನಿ, ಬದ್ರುದ್ದೀನ್ ಕೂಳೂರು ಸೇರಿ ಅಬ್ದುಲ್ ರಹ್ಮಾನ್ ರವರ ಕುಟುಂಬವನ್ನು ಕಂಡು ಹಣವನ್ನು ಹಸ್ತಾಂತರಿಸಿದರು. ಈ ಸಂಧರ್ಭದಲ್ಲಿ ಸಹಕರಿಸಿದ ಕೆಸಿಎಫ್ ಲಂಡನ್ ಸಮಿತಿಗೆ ಅಬ್ದುಲ್ ರಹ್ಮಾನ್ ರವರ ಕುಟುಂಬ ಧನ್ಯವಾದ ಅರ್ಪಿಸಿದರು.

error: Content is protected !! Not allowed copy content from janadhvani.com