ಮಂಗಳೂರು, ಆ.26: ಎಸ್ಸೆಸ್ಸೆಫ್ ಮತ್ತು ಎಸ್ವೈಎಸ್ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ‘ಮಾಧ್ಯಮ ಭಯೋತ್ಪಾದನೆ ನಿಲ್ಲಿಸಿ’ ಘೋಷಣೆಯಡಿ ಬೃಹತ್ ಪ್ರತಿಭಟನೆಯನ್ನು ಸ್ಟೇಟ್ಬ್ಯಾಂಕ್ ಬಳಿಯ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಸೋಮವಾರ ಸಂಜೆ ಹಮ್ಮಿಕೊಳ್ಳಲಾಯಿತು.
ಪ್ರತಿಭಟನೆಯನ್ನು ಎಸ್ವೈಎಸ್ ರಾಜ್ಯಾಧ್ಯಕ್ಷ ಜಿ.ಎಂ.ಮುಹಮ್ಮದ್ ಕಾಮಿಲ್ ಸಖಾಫಿ ಉದ್ಘಾಟಿಸಿ ಮಾತನಾಡಿ, ‘ನಮ್ಮ ಸಂಘಟನೆಯಿಂದ ನಡೆಯುತ್ತಿರುವ ಪ್ರತಿಭಟನೆ ಎಲ್ಲ ಪತ್ರಿಕಾ ಮಾಧ್ಯಮಗಳ ವಿರುದ್ಧದ ಸಮರವಲ್ಲ. ಸಮಾಜಕ್ಕೆ ಬೇಡವಾದ ವಿಷಯಗಳನ್ನಿಟ್ಟುಕೊಂಡು ಕೆಲ ಮಾಧ್ಯಮಗಳು ಪತ್ರಿಕಾ ಸ್ವಾತಂತ್ರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿವೆ. ಅಮಾಯಕರನ್ನು ಬಲಿಪಶುವಾಗಿಸುವುದು ಅಕ್ಷಮ್ಯ ಅಪರಾಧ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಸ್ಸೆಸ್ಸೆಫ್ ದ.ಕ. ಜಿಲ್ಲಾ ಸಮಿತಿಯ ಕೋಶಾಧಿಕಾರಿ ಮುಹಮ್ಮದ್ ಅಲಿ ತುರ್ಕಳಿಕೆ ಮಾತನಾಡಿ, ‘ಬೆಳ್ತಂಗಡಿ ತಾಲೂಕಿನ ಗೋವಿಂದೂರು ನಿವಾಸಿ ಅಬ್ದುಲ್ ರವೂಫ್ ಮುಸ್ಲಿಯಾರ್ ಎಂಬ ಅಮಾಯಕನಿಗೆ ಉಗ್ರ ಪಟ್ಟ ಕಟ್ಟಲು ರಾಜ್ಯದ ಬಹುತೇಕ ಮಾಧ್ಯಮಗಳು ಮುಂದಾಗಿದ್ದವು. ಇಂತಹ ಸುಳ್ಳುಭರಿತ ಸುದ್ದಿಗಳನ್ನು ಪ್ರಸಾರ ಮಾಡುವ ಪತ್ರಿಕೆ-ಸುದ್ದಿವಾಹಿನಿಗಳು ಮಾಧ್ಯಮ ಜಗತ್ತಿಗೆ ಕಳಂಕವಾಗಿದೆ’ ಎಂದು ಮಾಧ್ಯಮಗಳ ಬೇಜವಾಬ್ದಾರಿತನವನ್ನು ಖಂಡಿಸಿದರು.
ಮಾಧ್ಯಮಗಳು ಸೃಷ್ಟಿಸಿದ ಅವಾಂತರಗಳಿಗೆ ಅಮಾಯಕರು ಬಲಿಯಾಗುವುದು ಖಂಡನೀಯ. ದಲಿತರು, ದಮನಿತರು, ಶೋಷಿತರು, ನಿರ್ಗತಿಕರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿ, ಸಮಾಜದ ಅಭಿವೃದ್ಧಿಗೆ ಕಾರಣೀಭೂತವಾಗುವ ಬದಲು ವಾಮಮಾರ್ಗ ತುಳಿಯುತ್ತಿರುವುದು ಸಲ್ಲದು. ಇಂತಹ ಅಮಾಯಕನ ಗೌರವಕ್ಕೆ ಚ್ಯುತಿ ತಂದ ತಪ್ಪಿತಸ್ಥರ ವಿರುದ್ಧ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಭಾರತವು ಪರಸ್ಪರ ಸೌಹಾರ್ದ ಬಯಸುವ ದೇಶವಾಗಿದೆ. ಸಂವಿಧಾನದ ಮುಂದೆ ಎಲ್ಲರೂ ಸಮಾನರು. ಆದರೆ ಕೆಲ ಮಾಧ್ಯಮಗಳ ಬೇಜವಾಬ್ದಾರಿಯಿಂದ ತಾರತಮ್ಯ ಹೆಚ್ಚುತ್ತಿದೆ. ಒಂದೇ ಧರ್ಮವನ್ನು ಗುರಿಯಾಗಿಸಿಟ್ಟುಕೊಂಡು ಇಲ್ಲಸಲ್ಲದ ಆರೋಪಗಳನ್ನು ಹೊರಿಸುವುದನ್ನು ಸಮಾಜವು ಒಪ್ಪುವುದಿಲ್ಲ. ಅಮಾಯಕನಿಗೆ ಭಯೋತ್ಪಾದನೆ ಪಟ್ಟ ಕಟ್ಟಿರುವುದನ್ನು ಜಿಲ್ಲೆಯ ಜನತೆ ಸಹಿಸುವುದಿಲ್ಲ ಎಂದು ಹೇಳಿದರು.
‘ನಾಲ್ಕನೇ ಅಂಗವೆಂದು ಕರೆಯಲ್ಪಡುವ ಪತ್ರಿಕಾ ರಂಗವು ಸೌಹಾರ್ದ ಬೆಸೆಯುವ ವರದಿಗಳನ್ನು ಪ್ರಕಟಿಸಬೇಕು. ಆದರೆ ಇಂದಿನ ಬಹುತೇಕ ಮಾಧ್ಯಮಗಳು ಕೋಮು ದ್ವೇಷ ಹರಡಲು ಮುಂದಾಗುತ್ತಿರುವುದು ಖಂಡನೀಯ. ದೇಶದಲ್ಲಿ ಅಸ್ಥಿರತೆ ಉಂಟಾಗಲು ಪೊಲೀಸ್ ಇಲಾಖೆ ಆಸ್ಪದ ನೀಡಬಾರದು. ತಪ್ಪಿತಸ್ಥರಿಗೆ ಕೂಡಲೇ ಕಾನೂನು ಕ್ರಮವಾಗಿ ಶಿಕ್ಷೆಯಾಗಬೇಕು. ಇಲ್ಲದಿದ್ದರೆ ರಾಜ್ಯ ಹಾಗೂ ದೇಶದ ರಾಜಧಾನಿಗಳಲ್ಲೂ ಪ್ರತಿಭಟನೆ ನಡೆಸಲು ಹಿಂಜರಿಯುವುದಿಲ್ಲ’ ಎಂದೂ ಅವರು ತಿಳಿಸಿದರು.
ಪ್ರತಿಭಟನೆಯ ಅಧ್ಯಕ್ಷತೆಯನ್ನು ಎಸ್ಸೆಸ್ಸೆಫ್ ಜಿಲ್ಲಾ ಸಮಿತಿಯ ಅಧ್ಯಕ್ಷ ಇಬ್ರಾಹೀಂ ಸಖಾಫಿ ಸೆರ್ಕಳ ವಹಿಸಿದ್ದರು. ಪ್ರತಿಭಟನೆಯಲ್ಲಿ ಸಂತ್ರಸ್ತ ಅಬ್ದುಲ್ ರವೂಫ್ ಮುಸ್ಲಿಯಾರ್, ಎಸ್ಸೆಸ್ಸೆಫ್ ಜಿಲ್ಲಾ ಸಮಿತಿ ಕಾರ್ಯದರ್ಶಿಗಳಾದ ಹಾಫಿಳ್ ಯಾಕೂಬ್ ಸಅದಿ ನಾವೂರು, ಕೆ.ಪಿ. ಸಿರಾಜುದ್ದೀನ್ ಸಖಾಫಿ ಕನ್ಯಾನ ಹಾಗೂ ಎಸ್ವೈಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಕಿನಾರ, ಎಸ್ಎಂಎ ರಾಜ್ಯ ಉಪಾಧ್ಯಕ್ಷ ಹಮೀದ್ ಹಾಜಿ ಕೊಡುಂಗಾಯ, ಉಮರುಲ್ ಫಾರೂಕ್ ಪಾಣೆಮಂಗಳೂರು, ಕೆಸಿಎಫ್ ದಮಾಮ್ನ ಖಾಸಿಂ ಅಡ್ಡೂರು, ದ.ಕ. ಜಿಪಂ ಸದಸ್ಯ ಎಂ.ಎಸ್.ಮುಹಮ್ಮದ್, ಎಸ್ಸೆಸ್ಸೆಫ್ ಜಿಲ್ಲಾ ಸಮಿತಿ ಸದಸ್ಯರು ಪಾಲ್ಗೊಂಡಿದ್ದರು.
ಪ್ರತಿಭಟನೆಯಲ್ಲಿ ಎಸ್ಸೆಸ್ಸೆಫ್ ಜಿಲ್ಲಾ ಕಾರ್ಯದರ್ಶಿ ಅಬ್ದುಲ್ ರಶೀದ್ ಹಾಜಿ ಸ್ವಾಗತಿಸಿದರು. ಶರೀಫ್ ನಂದಾವರ ನಿರೂಪಿಸಿದರು.