ಇತ್ತೀಚೆಗೆ ಆನ್ಲೈನ್ ವಂಚನೆ ಪ್ರಕರಣಗಳು ಜಾಸ್ತಿಯಾಗ್ತಿವೆ. ಫೋನ್ ಮಾಡಿ OTP ಪಡೆಯೋ ಆನ್ಲೈನ್ ವಂಚಕರು ಖಾತೆಯಲ್ಲಿರೋ ಹಣವನ್ನೆಲ್ಲಾ ಮಂಗಮಾಯ ಮಾಡ್ತಿದ್ದಾರೆ. ಅದರಲ್ಲೂ ವಿದ್ಯಾವಂತರೇ ಹೆಚ್ಚಿನ ಸಂಖ್ಯೆಯಲ್ಲಿ ಮೋಸ ಹೋಗ್ತಿದ್ದಾರೆ. ಉತ್ತರ ಕನ್ನಡದಲ್ಲಿ ಆನ್ಲೈನ್ ವಂಚನೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗ್ತಿವೆ.
ಉತ್ತರ ಕನ್ನಡ ಜಿಲ್ಲೆಯನ್ನ ಸುಶಿಕ್ಷಿತ ಜಿಲ್ಲೆ ಎಂದೇ ಕರೆಯಲಾಗುತ್ತೆ. ಜಿಲ್ಲೆಯಲ್ಲಿ ಬಹುತೇಕರು ವಿದ್ಯಾವಂತರೇ ಇದ್ದಾರೆ. ಆದರೆ ಜಿಲ್ಲೆಯಲ್ಲಿ ಆನ್ ಲೈನ್ ವಂಚನೆ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ವಿದ್ಯಾವಂತರೇ ಹೆಚ್ಚಿನ ಸಂಖ್ಯೆಯಲ್ಲಿ ವಂಚಿತರ ಬಲೆಗೆ ಬೀಳ್ತಿದ್ದಾರೆ.
ಎಲ್ಲೋ ಕುಳಿತು ಫೋನ್ ಮಾಡೋ ಆನ್ಲೈನ್ ವಂಚಕರು, ನಾವು ಬ್ಯಾಂಕ್ನಿಂದ ಫೋನ್ ಮಾಡ್ತಿದ್ದೀವಿ. ನಿಮ್ಮ ಎಟಿಎಂ ಕಾರ್ಡ್ ಬೇರೆ ಕಳಿಸ್ತೀವಿ. ಅಪ್ಡೇಟ್ ಮಾಡ್ಬೇಕು. ಹೀಗೆ ಹಲವು ವಂಚಕ ಮಾತುಗಳನ್ನಾಡಿ ಓಟಿಪಿ ನಂಬರ್ ಪಡೆದು ವಂಚನೆ ಮಾಡ್ತಿದ್ದಾರೆ. ಸೈಬರ್ ಕ್ರೈಮ್ನಲ್ಲಿ ಈವರೆಗೂ 39 ಪ್ರಕರಣಗಳು ದಾಖಲಾಗಿವೆ.
ಕಳೆದ ಸಾಲಿನಲ್ಲಿ 16 ವಂಚನೆ ಪ್ರಕರಣ ದಾಖಲಾಗಿದ್ದು, ಈ ವರ್ಷ 23 ಮಂದಿ ಹಣ ಕಳೆದುಕೊಂಡ ಬಗ್ಗೆ ದೂರು ದಾಖಲಿಸಿದ್ದಾರೆ. ಕಳೆದ ವರ್ಷ ಸರಿಸುಮಾರು 1 ಕೋಟಿ ಹಣ ವಿವಿಧ ಬ್ಯಾಂಕ್ಗಳಿಂದ ದೋಚಿದ್ದಾರೆ. ಯಾರೇ ಫೋನ್ ಮಾಡಿ ಮಾಹಿತಿ ಕೇಳಿದರೂ ಎಟಿಎಂ ಕಾರ್ಡ್, ಬ್ಯಾಂಕ್ ಖಾತೆ, ಓಟಿಪಿ ಮಾಹಿತಿ ಕೊಡ್ಬೇಡಿ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ವಿಪರ್ಯಾಸವೆಂದರೆ ಭಾರೀ ಮೊತ್ತದ ಹಣ ಕಳಕೊಂಡವರು ಮಾತ್ರ ದೂರು ನೀಡ್ತಿದ್ದಾರೆ, 10 ಸಾವಿರಕ್ಕಿಂತ ಕಡಿಮೆ ಹಣ ಕಳೆದುಕೊಂಡವರು ದೂರು ಕೊಡದೇ ಇರೋದ್ರಿಂದ ಎಷ್ಟು ವಂಚನೆ ಪ್ರಕರಣಗಳು ನಡೆದಿವೆ ಎಂಬುದು ಗೊತ್ತಾಗ್ತಿಲ್ಲ. ಫೇಸ್ಬುಕ್ನಲ್ಲಿ ಪರಿಚಯವಾದ ಅಮೆರಿಕ ಮೂಲದ ಮಹಿಳೆಯೊಬ್ಬರು ತಾನು ಸೇನೆಯಲ್ಲಿರೋದಾಗಿ ಹೇಳಿ ಮುಂಡಗೋಡದ ಟಿಬೇಟಿಯನ್ ಸನ್ಯಾಸಿಸಿಗೆ 1 ಕೋಟಿ 96 ಲಕ್ಷ ರೂಪಾಯಿ ಪಂಗನಾಮ ಹಾಕಿದ್ದಾಳೆ.
ಇದು ಕೇವಲ ಉತ್ತರ ಕನ್ನಡ ಜಿಲ್ಲೆಯೊಂದರ ಕತೆ ಅಷ್ಟೇ ಅಲ್ಲ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಇಂತಹ ಆನ್ಲೈನ್ ದೋಖಾ ಪ್ರಕರಣಗಳು ನಡೀತಾನೇ ಇವೆ. ನಿಮ್ಗೂ ಇಂತಹ ಕರೆಗಳು ಬರಬಹುದು. ಯಾವುದಕ್ಕೂ ಹುಷಾರಾಗಿರಿ.