ಕಲ್ಲಿಕೋಟೆ.ಫೆ,07: ಎಸ್ಸೆಸ್ಸೆಫ್ ರಾಷ್ಟ್ರೀಯ ಸಮಿತಿ ಆಯೋಜಿಸಿದ್ದ “ಸಹಿಷ್ಣುತೆ ಹಾಗೂ ಸಾಕ್ಷರತೆಯ ಭಾರತ”ಎಂಬ ಉದಾತ್ತ ಸಂದೇಶದೊಂದಿಗೆ ಕಾಶ್ಮೀರದಿಂದ ಕೇರಳದವರೆಗೆ ನಡೆಸಿದ ಹಿಂದ್ ಸಫರ್ ಕೇರಳದಲ್ಲಿ ಜನಸಾಗರದ ಒಗ್ಗೂಡುವಿಕೆಯೊಂದಿಗೆ ಸಮಾಪ್ತಿಗೊಂಡಿತು.
ಜ.12 ರಂದು ಜಮ್ಮು ಕಾಶ್ಮೀರದ ಹಝ್ರತ್ ಬಾಲ್ ಮಸ್ಜಿದ್ ಪರಿಸರದಿಂದ ಆರಂಭ ಗೊಂಡ ಯಾತ್ರೆಯು ಸುದೀರ್ಘವಾದ 27 ದಿನಗಳಲ್ಲಿ 22 ರಾಜ್ಯಗಳಲ್ಲಿ ಬರೋಬ್ಬರಿ 14000 ಕಿ.ಮೀ ಕ್ರಮಿಸಿ ಬಂದ ಹಿಂದ್ ಸಫರ್ ಯಾತ್ರೆಯು ಭಾರತ ಮಣ್ಣಿನಲ್ಲಿ ಹೊಸ ಆಶಾಭಾವನೆಯೊಂದನ್ನು ಮೂಡಿಸಿದ್ದು ಮಾತ್ರ ಸುಳ್ಳಲ್ಲ. ಹಿಂದ್ ಸಫರ್ ಕ್ರಮಿಸಿದ ಹಾದಿಗಳಲ್ಲೆಲ್ಲಾ ಅಭೂತಪೂರ್ವವಾದ ಸ್ವಾಗತ, ಸ್ಪಂದನೆ ವ್ಯಕ್ತವಾಗುತ್ತಿತ್ತು.
ಕಾಶ್ಮೀರ, ಪಂಜಾಬ್,ಉತ್ತರಾಖಂಡ, ರಾಜಸ್ಥಾನ, ಜಾರ್ಖಂಡ್, ಒಡಿಶಾ, ತೆಲಂಗಾಣ, ಆಂದ್ರಪ್ರದೇಶ, ದೆಹಲಿ, ಹರ್ಯಾಣ, ಗುಜರಾತ್, ಮಧ್ಯಪ್ರದೇಶ, ಉತ್ತರಪ್ರದೇಶ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಅಸ್ಸಾಂ, ಬಿಹಾರ, ಮಣಿಪುರ, ಗೋವಾ, ಕರ್ನಾಟಕ, ತಮಿಳುನಾಡು ಮುಂತಾದ ರಾಜ್ಯಗಳಲ್ಲಿ 39 ಸ್ವೀಕರಣಾ ಸಮಾರಂಭಗಳಲ್ಲಿ ಭಾಗವಹಿಸಿ ಫೆ.7ರಂದು ಕೇರಳಕ್ಕೆ ತಲುಪಿತು.ಫೆ.23,24 ದಿನಾಂಕಗಳಲ್ಲಿ ದೆಹಲಿಯ ರಾಂಲೀಲಾ ಮೈದಾನದಲ್ಲಿ ನಡೆಯುವ ಎಸ್ಸೆಸ್ಸೆಫ್ ರಾಷ್ಟ್ರೀಯ ಸಮಾವೇಶದ ಅಂಗವಾಗಿ “ಹಿಂದ್ ಸಫರ್” ಯಾತ್ರೆಯನ್ನು ಆಯೋಜಿಸಲಾಗಿತ್ತು.
ಸಮಾರೋಪ ಸಮ್ಮೇಳನವನ್ನು ಅಖಿಲಭಾರತ ಉಲಮಾ ಒಕ್ಕೂಟದ ಪ್ರ.ಕಾರ್ಯದರ್ಶಿ, ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ ಉದ್ಘಾಟಿಸಿದರು.ಸಮಸ್ತ ಉಪಾಧ್ಯಕ್ಷರಾದ ಬಹು:ಸಯ್ಯಿದ್ ಅಲಿ ಬಾಫಖೀ ತಂಙಳ್ ದುಆ ನೆರವೇರಿಸಿ,ಕೇರಳ ಮುಸ್ಲಿಂ ಜಮಾಅತ್ ಪ್ರ.ಕಾರ್ಯದರ್ಶಿ ಸಯ್ಯಿದ್ ಖಲೀಲುಲ್ ಬುಖಾರಿ ಅಧ್ಯಕ್ಷತೆ ವಹಿಸಿದರು.