janadhvani

Kannada Online News Paper

ಮದ್ರಸಾ ವಿದ್ಯಾರ್ಥಿನಿಯರನ್ನು ಅಪಹರಿಸಿ ಕೊಲೆಯತ್ನ- ಮೂವರ ಬಂಧನ

ಮಂಗಳೂರು, ಫೆ.11: ಬುದ್ಧಿವಂತರ ಜಿಲ್ಲೆಯೆಂದು ಬಣ್ಣಿಸಲ್ಪಡುವ ಕರಾವಳಿಯಲ್ಲೂ ಉಗ್ರ, ಕಾಮಪಿಶಾಚಿಗಳು ದೇಶವೇ ಬೆಚ್ಚಿಬೀಳುವಂತಹ ದುಷ್ಕೃತ್ಯಕ್ಕೆ ಮುಂದಾಗಿದ್ದು, ಕೊಣಾಜೆ ಸಮೀಪದ ಮಲಾರ್ ಉಗ್ಗನಬೈಲ್ ಬಳಿ ಮದ್ರಸಕ್ಕೆ ತೆರಳುತ್ತಿದ್ದ ಮೂವರು ವಿದ್ಯಾರ್ಥಿನಿಯರನ್ನು ಅಪಹರಿಸಿ ಅತ್ಯಾಚಾರ ಮತ್ತು ಕೊಲೆಗೆ ಯತ್ನಿಸಿದ ಘಟನೆ ನಡೆದಿದೆ.

ಸೋಮವಾರ ಸಂಜೆ ಸುಮಾರು 5:30ರ ವೇಳೆಗೆ ಮಲಾರ್‌ನ ನೂರುಲ್ ಇಸ್ಲಾಮ್ ಮದ್ರಸಕ್ಕೆ ನಡೆದುಕೊಂಡು ಹೋಗುತ್ತಿದ್ದ ಮೂವರು ಬಾಲಕಿಯರನ್ನು ನಿರ್ಜನ ಪ್ರದೇಶದಲ್ಲಿ ತಡೆದು ನಿಲ್ಲಿಸಿದ ದುಷ್ಕರ್ಮಿಗಳು ಅತ್ಯಾಚಾರ ಮತ್ತು ಕೊಲೆಗೆ ಯತ್ನಿಸಿದರು ಎನ್ನಲಾಗಿದೆ. ಈ ಸಂದರ್ಭ ಅದೇ ದಾರಿಯಾಗಿ ಬರುವ ಇತರರನ್ನು ಕಂಡ ದುಷ್ಕರ್ಮಿಗಳು ಓಡಿ ಪರಾರಿಯಾಗಿದ್ದಾರೆ.

ತಕ್ಷಣ ವಿದ್ಯಾರ್ಥಿಗಳು ಸ್ಥಳೀಯರ ಗಮನಕ್ಕೆ ಈ ವಿಷಯ ತಿಳಿಸಿದ್ದು, ಬಳಿಕ ಪೊಲೀಸರಿಗೆ ದೂರು ನೀಡಲಾಗಿದೆ. ಅದರಂತೆ ಕಾರ್ಯಾಚರಣೆ ನಡೆಸಿದ ಮಂಗಳೂರು ದಕ್ಷಿಣ ಉಪವಿಭಾಗದ ಎಸಿಪಿ ಕೋದಂಡರಾಮ ನೇತೃತ್ವದ ಪೋಲೀಸ್ ತಂಡ ಮಂಗಳವಾರ ಮೂವರು ಆರೋಪಿಗಳನ್ನು ಬಂಧಿಸಿದೆ.

ಬಂಧಿತರನ್ನು ಪಾವೂರು ಉಗ್ಗನಬೈಲು ಸಮೀಪದ ಗುಣಪಾಲ (25), ಕಿರಣ್ ಕುಮಾರ್ (26), ನೀರುಮಾರ್ಗದ ಸುಭಾಷ್ (29) ಎಂದು ಗುರುತಿಸಲಾಗಿದೆ.

ಆರೋಪಿಗಳ ವಿರುದ್ಧ ಫೋಕ್ಸೋ, ಅತ್ಯಾಚಾರಕ್ಕೆ ಯತ್ನ ಹಾಗೂ ಕೊಲೆಯತ್ನ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.