ದೋಹಾ: ಇರಾನ್ ಮತ್ತು ಅಮೆರಿಕ ನಡುವೆ ನಡೆಯುತ್ತಿರುವ ಮಾತುಕತೆಗಳಲ್ಲಿ ಖತ್ತರ್ ಭಾಗಿಯಾಗಿಲ್ಲ ಮತ್ತು ತನ್ನ ದೇಶದ ರಕ್ಷಣೆಯತ್ತ ಮಾತ್ರ ಗಮನ ಹರಿಸುತ್ತಿರುವುದಾಗಿ ವಿದೇಶಾಂಗ ವಕ್ತಾರ ಡಾ. ಮಾಜಿದ್ ಅಲ್ ಅನ್ಸಾರಿ ತಿಳಿಸಿದ್ದಾರೆ. ಸಂಘರ್ಷದಲ್ಲಿರುವ ದೇಶಗಳು ಆದಷ್ಟು ಬೇಗ ಮಾತುಕತೆ ಆರಂಭಿಸುವುದು ಉದ್ವಿಗ್ನತೆಯನ್ನು ಕೊನೆಗಾಣಿಸಲು ಇರುವ ಅತ್ಯಂತ ಸೂಕ್ತ ಮಾರ್ಗವಾಗಿದೆ.
ರಾಜತಾಂತ್ರಿಕತೆಯೇ ಸಂಘರ್ಷಗಳನ್ನು ಕೊನೆಗಾಣಿಸಲು ಇರುವ ಏಕೈಕ ದಾರಿ ಎಂದು ವಿದೇಶಾಂಗ ಸಚಿವಾಲಯದ ಪ್ರಧಾನ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ವಿವರಿಸಿದರು. ಮಾತುಕತೆಯ ಮೂಲಕ ಪರಿಹಾರ ಕಂಡುಕೊಳ್ಳುವುದನ್ನು ಖತ್ತರ್ ಸ್ವಾಗತಿಸುತ್ತದೆ, ಆದರೆ ಪ್ರಸ್ತುತ ಅಂತಹ ಯಾವುದೇ ಪ್ರಕ್ರಿಯೆಯಲ್ಲಿ ಖತ್ತರ್ ಪಾಲುದಾರನಲ್ಲ. ಆದಾಗ್ಯೂ, ಸಂಧಾನ ಮಾತುಕತೆ ಮತ್ತು ಸಹಾಯಕ್ಕಾಗಿ ಖತ್ತರ್ ಸದಾ ಸಿದ್ಧವಿದೆ ಎಂದು ಅವರು ತಿಳಿಸಿದರು.
ಖತ್ತರ್ ಮೇಲೆ ನಡೆದ ದಾಳಿಗಳಲ್ಲಿ ಶೇ. 90ಕ್ಕಿಂತ ಹೆಚ್ಚಿನವುಗಳನ್ನು ಯಶಸ್ವಿಯಾಗಿ ವೈಫಲ್ಯಗೊಳಿಸಲಾಗಿದೆ ಎಂದು ಅವರು ವಿವರಿಸಿದರು.
ಅಂತರಾಷ್ಟ್ರೀಯ ಕಾನೂನುಗಳಿಗೆ ಅನುಗುಣವಾಗಿ ತನ್ನನ್ನು ತಾನು ರಕ್ಷಿಸಿಕೊಳ್ಳುವ ಹಕ್ಕು ಖತ್ತರ್ಗೆ ಇದೆ. ಆದರೆ, ಪ್ರತಿದಾಳಿ ನಡೆಸುವ ಬಗ್ಗೆ ಇದುವರೆಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಸಂಘರ್ಷವನ್ನು ಹೆಚ್ಚಿಸುವುದಕ್ಕಿಂತ ಪ್ರಾದೇಶಿಕ ಶಾಂತಿಗಾಗಿ ಕೆಲಸ ಮಾಡಲು ಖತ್ತರ್ ಬಯಸುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.
ಗಲ್ಫ್ ವಲಯದ ಭದ್ರತಾ ವ್ಯವಸ್ಥೆಯು ಪ್ರಸ್ತುತ ಹದಗೆಟ್ಟಿದೆ. ಈ ಭಾಗದಲ್ಲಿ ಶಾಂತಿ ನೆಲೆಸಲು ಇರಾನ್ ಜೊತೆಗಿನ ಸಹಬಾಳ್ವೆ ಅತ್ಯಗತ್ಯ ಎಂದು ಖತ್ತರ್ ವಕ್ತಾರರು ಹೇಳಿದರು. ಗಲ್ಫ್ ರಾಷ್ಟ್ರಗಳು ಮತ್ತು ಇರಾನ್ ನಡುವಿನ ಭವಿಷ್ಯದ ಸಂಬಂಧದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಈ ವಲಯದ ಎಲ್ಲಾ ಜನರ ನಡುವೆ ಆಳವಾದ ಸಂಬಂಧವಿದ್ದು, ದೇಶಗಳು ಪರಸ್ಪರ ಒಪ್ಪಂದಕ್ಕೆ ಬರಲು ದಾರಿಯನ್ನು ಕಂಡುಕೊಳ್ಳಬೇಕು ಎಂದು ಹೇಳಿದರು.
“ನಾವು ಪರಸ್ಪರ ನೆರೆಹೊರೆಯವರಾಗಿದ್ದು, ಒಟ್ಟಾಗಿ ಸಾಗಲು ದಾರಿಗಳನ್ನು ಕಂಡುಕೊಳ್ಳಬೇಕು. ಆದರೆ ನಂಬಿಕೆಯನ್ನು ಮರಳಿ ಗಳಿಸುವುದು ಇರಾನ್ನ ಜವಾಬ್ದಾರಿಯಾಗಿದೆ” ಎಂದು ಮಾಜಿದ್ ಅಲ್ ಅನ್ಸಾರಿ ವಿವರಿಸಿದರು.
















ಇನ್ನಷ್ಟು ಸುದ್ದಿಗಳು
139 ವರ್ಷಗಳ ಬಳಿಕ ಇದೇ ಮೊದಲು; ಬಕ್ರೀದ್ ದಿನದಂದು ಅಪರೂಪದ ಖಗೋಳ ವಿದ್ಯಮಾನಕ್ಕೆ ಸಾಕ್ಷಿಯಾಗಲಿದೆ ಮಕ್ಕಾ
ಹಜ್ ವಂಚನೆ: ಭಾರತೀಯರು ಸೇರಿದಂತೆ ನಾಲ್ವರ ಬಂಧನ
ಅಲ್ಲಾಹನ ಅತಿಥಿಗಳ ಹರಿವು… ಹಜ್ಗೆ ಇನ್ನು ಕೇವಲ 2 ದಿನಗಳು ಬಾಕಿ
‘ನೋ ಕ್ಯಾಶ್’ ; ಜೂನ್ ಒಂದರಿಂದ ದುಬೈನಲ್ಲಿ ಪಾರ್ಕಿಂಗ್ ಮೀಟರ್ಗಳಲ್ಲಿ ನಗದು ವ್ಯವಹಾರ ರದ್ದು
ಈದುಲ್ ಅದ್’ಹಾ(ಬಕ್ರೀದ್): ಮೇ 26 ರಿಂದ ಆರು ದಿನಗಳ ರಜೆ ಘೋಷಣೆ
ಖಾಸಗಿ ವಲಯದ ಉದ್ಯೋಗಿಗಳಿಗೆ ಸಿಹಿ ಸುದ್ದಿ: ಇನ್ನು ಮುಂದೆ 1ನೇ ತಾರೀಖಿಗೆ ವೇತನ ಕಡ್ಡಾಯ
ದುಲ್ ಹಜ್ಜ್ ಚಂದ್ರ ದರ್ಶನ : ಗಲ್ಫ್ ರಾಷ್ಟ್ರಗಳಲ್ಲಿ ಮೇ.27 ರಂದು ಈದುಲ್ ಅದ್’ಹಾ
ಕೇಳಿ.. ಉತ್ತರಿಸಬಲ್ಲೆ… : ಮಕ್ಕಾ, ಮದೀನಾ ಹರಮ್ ಮಸೀದಿಗಳಲ್ಲಿ ಬಹುಭಾಷಾ ಎಐ (AI) ಸ್ಮಾರ್ಟ್ ರೋಬೋಟ್ ಸೇವೆ
ಅಬ್ದುಲ್ ರಹೀಮ್ ಬಿಡುಗಡೆಗೆ ಕ್ಷಣಗಣನೆ: ಮೇ 20ರಂದು ಜೈಲುವಾಸದ ಅವಧಿ ಪೂರ್ಣ
ಮಕ್ಕಾದಲ್ಲಿ ಪೊಲೀಸರ ಮಿಂಚಿನ ದಾಳಿ: ನಕಲಿ ದಾಖಲೆ ತಯಾರಿಸುತ್ತಿದ್ದ 18 ಜನರ ತಂಡ ಬಂಧನ