ಮಂಗಳೂರು, ಮಾ.19: ಜಿಲ್ಲೆಯ ವಿವಿಧೆಡೆ ಗುರುವಾರ ಸಂಜೆ ಶವ್ವಾಲ್ ತಿಂಗಳ ಚಂದ್ರ ದರ್ಶನವಾದ ಹಿನ್ನೆಲೆಯಲ್ಲಿ, ಕರಾವಳಿ ಸೇರಿದಂತೆ ನಾಡಿನಾದ್ಯಂತ ನಾಳೆ (ಮಾ. 20, ಶುಕ್ರವಾರ) ಪವಿತ್ರ ‘ಈದುಲ್ ಫಿತರ್’ ಹಬ್ಬವನ್ನು ಸಂಭ್ರಮದಿಂದ ಆಚರಿಸುವಂತೆ ಖಾಝಿಗಳು ಕರೆ ನೀಡಿದ್ದಾರೆ.
ರಮಳಾನ್ ತಿಂಗಳ 29ನೇ ಉಪವಾಸದ ದಿನವಾದ ಇಂದು ಚಂದ್ರ ದರ್ಶನವಾಗಿರುವುದರಿಂದ, ನಾಳೆ ಶವ್ವಾಲ್ ಮಾಸದ ಪ್ರಥಮ ದಿನವಾಗಿದ್ದು ಈದ್ ಆಚರಣೆ ಅಧಿಕೃತಗೊಂಡಿದೆ. ಈ ಕುರಿತು ಅಖಿಲ ಭಾರತ ಸುನ್ನೀ ಜಮ್ಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಹಾಗೂ ಉಳ್ಳಾಲ ಖಾಝಿ ಸುಲ್ತಾನುಲ್ ಉಲಮಾ ಎ.ಪಿ. ಅಬೂಬಕರ್ ಮುಸ್ಲಿಯಾರ್ (ಕಾಂತಪುರಂ ಉಸ್ತಾದ್), ಮಂಗಳೂರು ಖಾಝಿ ಅಲ್ಹಾಜ್ ತ್ವಾಖಾ ಅಹ್ಮದ್ ಅಲ್ ಅಝ್ಹರಿ ಹಾಗೂ ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲಾ ಸುನ್ನೀ ಸಂಯುಕ್ತ ಜಮಾಅತ್ ಖಾಝಿ ಮಾಣಿ ಉಸ್ತಾದ್ ಅವರ ಕಚೇರಿಗಳಿಂದ ಹೊರಡಿಸಿದ ಪ್ರಕಟಣೆಯಲ್ಲಿ ವಿಶ್ವಾಸಿಗಳಿಗೆ ಹಬ್ಬದ ಶುಭಾಶಯ ಕೋರಿದ್ದಾರೆ.
ತ್ಯಾಗ ಮತ್ತು ಶಿಸ್ತಿನ ಸಮಾರೋಪ
ಕಳೆದ ಒಂದು ತಿಂಗಳ ಕಾಲ ಕಠಿಣ ಉಪವಾಸ ವ್ರತ, ದಾನ-ಧರ್ಮ ಹಾಗೂ ವಿಶೇಷ ಪ್ರಾರ್ಥನೆಗಳಲ್ಲಿ ತೊಡಗಿದ್ದ ಮುಸ್ಲಿಂ ಬಾಂಧವರಿಗೆ ಈದುಲ್ ಫಿತರ್ ಸಾರ್ಥಕತೆಯ ಕ್ಷಣವಾಗಿದೆ. ಕೆಡುಕುಗಳಿಂದ ದೂರವಿದ್ದು, ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳುವ ನಿರಂತರ ಶ್ರಮಕ್ಕೆ ಈ ಹಬ್ಬವು ಮೌಲ್ಯದ ಮುದ್ರೆ ಒತ್ತುತ್ತದೆ.
ಮಾನವೀಯತೆಯ ‘ಫಿತರ್ ಝಕಾತ್’
ಈದ್ ದಿನದಂದು ಸಮಾಜದಲ್ಲಿ ಯಾರೊಬ್ಬರೂ ಹಸಿವಿನಿಂದ ಇರಬಾರದು ಎಂಬ ಉದಾತ್ತ ಉದ್ದೇಶದಿಂದ ‘ಫಿತರ್ ಝಕಾತ್’ ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ. ಆಯಾ ಭಾಗದ ಮುಖ್ಯ ಆಹಾರ ಧಾನ್ಯಗಳನ್ನು ಬಡವರಿಗೆ ಹಂಚುವ ಮೂಲಕ ಹಬ್ಬದ ಸಡಗರದಲ್ಲಿ ಎಲ್ಲರನ್ನೂ ಒಳಗೊಳ್ಳುವುದು ಈ ಸಂಪ್ರದಾಯದ ವಿಶೇಷ.
ನಾಡಿನ ಸರ್ವರಿಗೂ ಈದುಲ್ ಫಿತರ್ ಹಬ್ಬದ ಶುಭಾಶಯಗಳು
ಪರಸ್ಪರ ಸ್ನೇಹ, ಸಹಬಾಳ್ವೆ ಮತ್ತು ಸೌಹಾರ್ದತೆಯನ್ನು ಸಾರುವ ಈ ಹಬ್ಬವು ಸಮಾಜದಲ್ಲಿ ಶಾಂತಿ-ನೆಮ್ಮದಿಯನ್ನು ಹೆಚ್ಚಿಸಲಿ. ಗಲ್ಫ್ ದೇಶಗಳಲ್ಲಿ ತಲೆದೋರಿರುವ ಯುದ್ಧದ ಕಾರ್ಮೋಡಗಳು ಆದಷ್ಟು ಬೇಗ ತಿಳಿಯಾಗಲಿ, ಶಾಂತಿ ಮತ್ತು ನೆಮ್ಮದಿಯ ವಾತಾವರಣ ಮರುಕಳಿಸಲಿ ಎಂದು ಪ್ರಾರ್ಥಿಸೋಣ.
ನಾಡಿನಲ್ಲೂ, ಒಮಾನ್ ಸಹಿತವಿರುವ ಗಲ್ಫ್ ರಾಷ್ಟ್ರಗಳಲ್ಲೂ ಈ ಬಾರಿ ಒಂದೇ ದಿನ ಈದುಲ್ ಫಿತರ್ ಹಬ್ಬವನ್ನು ಆಚರಿಸಲಾಗುತ್ತಿದ್ದು ವಿಶೇಷ.
ಶುಭಾಶಯಗಳೊಂದಿಗೆ, ಜನಧ್ವನಿ ಪತ್ರಿಕಾ ಬಳಗ
















ಇನ್ನಷ್ಟು ಸುದ್ದಿಗಳು
ತೈಲ ಬಿಕ್ಕಟ್ಟು: ‘ವರ್ಕ್ ಫ್ರಮ್ ಹೋಮ್’ ಆರಂಭಿಸಿ; ಚಿನ್ನ ಖರೀದಿಸಬೇಡಿ – ಪ್ರಧಾನಿ ಮೋದಿ ಮನವಿ
ತಮಿಳುನಾಡಿನಲ್ಲಿ ಹೊಸ ಇತಿಹಾಸ: ಮುಖ್ಯಮಂತ್ರಿಯಾಗಿ ‘ದಳಪತಿ’ ವಿಜಯ್ ಅಧಿಕಾರ ಸ್ವೀಕಾರ
ಡಿಕೆಎಸ್ಸಿ ರಿಯಾದ್ ಝೋನಲ್ ಸಮಿತಿಗೆ ನೂತನ ಸಾರಥ್ಯ- ಅಧ್ಯಕ್ಷರಾಗಿ ದಾವೂದ್ ಹಕೀಂ ಕಂದಕ್ ಆಯ್ಕೆ
ಎಸ್ಸೆಸ್ಸೆಫ್ 14ನೇ ಆವೃತ್ತಿಯ ಸಾಹಿತ್ಯೋತ್ಸವ: ರಾಜ್ಯ ನಿರ್ವಹಣಾ ಸಮಿತಿ ಅಸ್ತಿತ್ವಕ್ಕೆ
ವಿಜಯ್ ಮುಖ್ಯಮಂತ್ರಿ; ನಾಳೆ ಪ್ರಮಾಣವಚನ ಸ್ವೀಕಾರ- 120 ಶಾಸಕರ ಬೆಂಬಲ ಖಚಿತಪಡಿಸಿದ TVK
ಹಂತಾವೈರಸ್ ಭೀತಿ; ಹೆಚ್ಚಿನ ಪ್ರಕರಣಗಳ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ- ಪ್ರವಾಸಿ ಹಡಗುಗಳ ಮೇಲೆ ತೀವ್ರ ನಿಗಾ
ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಘಟನೆ- ಕಲ್ಲಂಗಡಿ ಹಣ್ಣಿನಲ್ಲಿ ಇಲಿ ವಿಷ ಹೇಗೆ ಬಂತು?
ಕೇರಳ ವಿಧಾನಸಭಾ ಚುನಾವಣೆ: 102 ಸ್ಥಾನಗಳಲ್ಲಿ UDF ಗೆ ಭರ್ಜರಿ ಜಯ- LDF ಗೆ ಹೀನಾಯ ಸೋಲು
ಹಜ್ ಯಾತ್ರಿಕರಿಗೆ ಡಿಜಿಟಲ್ ದಾಖಲೆಗಳ ಸೌಲಭ್ಯ- ಪಾಸ್ಪೋರ್ಟ್ಗಳ ಅಗತ್ಯವಿಲ್ಲ
ವೈದ್ಯಕೀಯ-ಇಂಜಿನಿಯರಿಂಗ್ ಕನಸುಗಳಾಚೆಗೆ ನಾಗರಿಕ ಸೇವೆಗಳತ್ತ ಯುವಶಕ್ತಿ ಮುಖ ಮಾಡಲಿ: ಇಕ್ಬಾಲ್ ಬಾಳಿಲ ಕರೆ