janadhvani

Kannada Online News Paper

ಎ.ಪಿ.ಉಸ್ತಾದರ ಮಧ್ಯಪ್ರವೇಶದಿಂದ ನಿಮಿಷಪ್ರಿಯ ಮರಣದಂಡನೆ ಮುಂದೂಡಿಕೆ- ಸುಪ್ರೀಂಕೋರ್ಟಿನಲ್ಲಿ ಆಕ್ಷನ್ ಸಮಿತಿ

ಈ ವಿಷಯದಲ್ಲಿ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಅವರು ಭಾಗಿಯಾಗಿರುವ ಬಗ್ಗೆ ತನಗೆ ತಿಳಿದಿಲ್ಲ ಎಂದು ವಿದೇಶಾಂಗ ಸಚಿವಾಲಯ ನಿನ್ನೆ ಹೇಳಿತ್ತು

ನವದೆಹಲಿ | ಯೆಮೆನ್ ಪ್ರಜೆಯನ್ನು ಹತ್ಯೆ ಮಾಡಿದ ಆರೋಪದಲ್ಲಿ ಮರಣ ದಂಡನೆ ಶಿಕ್ಷೆಗೆ ಗುರಿಯಾಗಿದ್ದ ಭಾರತೀಯ ನರ್ಸ್ ನಿಮಿಷಾ ಪ್ರಿಯಾರ ಗಲ್ಲು ಶಿಕ್ಷೆಯನ್ನು ಯೆಮೆನ್ ನಲ್ಲಿ ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ ಎಂದು ಕೇಂದ್ರ ಸರಕಾರ ಶುಕ್ರವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಕೇಂದ್ರ ಸರಕಾರದ ಪರ ನ್ಯಾಯಾಲಯದಲ್ಲಿ ಹಾಜರಿದ್ದ ಅಟಾರ್ನಿ ಜನರಲ್ ಆರ್.ವೆಂಕಟರಮಣಿ, “ಈ ವಿಷಯದ ಕುರಿತು ಸರಕಾರದ ಪ್ರಯತ್ನಗಳು ಮುಂದುವರಿದಿವೆ” ಎಂದು ನ್ಯಾ ವಿಕ್ರಮ್ ನಾಥ್ ಹಾಗೂ ನ್ಯಾ. ಸಂದೀಪ್ ಮೆಹ್ರಾರನ್ನೊಳಗೊಂಡಿದ್ದ ನ್ಯಾಯಪೀಠಕ್ಕೆ ತಿಳಿಸಿದರು. ಸರಕಾರ ನಿಮಿಷಾ ಪ್ರಿಯಾ ಸುರಕ್ಷಿತವಾಗಿ ದೇಶಕ್ಕೆ ಮರಳುವುದನ್ನು ಬಯಸುತ್ತಿದೆ ಎಂದು ಅವರು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು. ಆದರೆ, ಈ ಸಂಬಂಧ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ.ಪಿ ಅಬೂಬಕರ್ ಮುಸ್ಲಿಯಾರ್ ಆವರ ಮಧ್ಯಸ್ಥಿಕೆ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ.

ಏತನ್ಮಧ್ಯೆ, ಆಕ್ಷನ್ ಸಮಿತಿ ಪರವಾಗಿ ನ್ಯಾಯಾಲಯದಲ್ಲಿ ಹಾಜರಿದ್ದ ವಕೀಲರು ಇಂಡಿಯನ್ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ.ಪಿ ಅಬೂಬಕರ್ ಮುಸ್ಲಿಯಾರ್ ಅವರ ಮಧ್ಯಸ್ಥಿಕೆ ಬಗ್ಗೆ ಸುಪ್ರೀಂಕೋರ್ಟ್ ನ ಗಮನಕ್ಕೆ ತಂದರು. ಅರ್ಜಿದಾರರ ವಕೀಲರಾದ ರಾಗೇಂಡ್ ಬಸಂತ್ ಮತ್ತು ಕೆ.ಆರ್. ಸುಭಾಷ್ ಚಂದ್ರನ್ ಅವರು ಸುಪ್ರೀಂ ಕೋರ್ಟ್‌ಗೆ ಮುಸ್ಲಿಂ ವಿದ್ವಾಂಸರ ಹಸ್ತಕ್ಷೇಪದ ನಂತರ ಜುಲೈ 16 ರಂದು ನಿಗದಿಯಾಗಿದ್ದ ಮರಣದಂಡನೆಯನ್ನು ಮುಂದೂಡಲಾಗಿದೆ ಎಂದು ತಿಳಿಸಿದರು.

ಈ ವಿಷಯದಲ್ಲಿ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಅವರು ಭಾಗಿಯಾಗಿರುವ ಬಗ್ಗೆ ತನಗೆ ತಿಳಿದಿಲ್ಲ ಎಂದು ವಿದೇಶಾಂಗ ಸಚಿವಾಲಯ ನಿನ್ನೆ ಹೇಳಿತ್ತು. ಈ ವಾದವನ್ನು ತಿರಸ್ಕರಿಸಿದ ನಿಮಿಷಪ್ರಿಯ ಅಂತಾರಾಷ್ಟ್ರೀಯ ಆಕ್ಷನ್ ಸಮಿತಿ ಕಾಂತಪುರಂ ಅವರ ಹಸ್ತಕ್ಷೇಪವನ್ನು ನ್ಯಾಯಾಲದ ಗಮನಕ್ಕೆ ತಂದಿದೆ. ಇದನ್ನು ಕೇಂದ್ರ ಸರ್ಕಾರದ ಅಟಾರ್ನಿ ಜನರಲ್ ಆರ್.ವೆಂಕಟರಮಣಿ ನಿರಾಕರಿಸಿಲ್ಲ. ಕೇಂದ್ರ ಸರ್ಕಾರವನ್ನು ಪ್ರತಿನಿಧಿಸುವ ಅಟಾರ್ನಿ ಜನರಲ್ ಆರ್ ವೆಂಕಟರಮಣಿ, ನಿಮಿಷಪ್ರಿಯಾ ಸುರಕ್ಷಿತವಾಗಿ ಹೊರಬರಬೇಕೆಂಬುದು ನಮ್ಮ ಆಶಯ ಎಂದು ಹೇಳಿದರು. ಎಲ್ಲರೂ ಬಯಸುವುದಕ್ಕೆ ವಿರುದ್ಧವಾಗಿ ಏನೂ ಸಂಭವಿಸಬಾರದು ಎಂದು ಅವರು ಹೇಳಿದರು.

ಕೇಂದ್ರ ಸರ್ಕಾರದ ಎಲ್ಲಾ ಪ್ರಯತ್ನಗಳಿಗೆ ಕೃತಜ್ಞರಾಗಿರುತ್ತೇವೆ ಮತ್ತು ಪ್ರತಿನಿಧಿಗಳು ಹೆಚ್ಚಿನ ಚರ್ಚೆಗಾಗಿ ಯೆಮೆನ್‌ಗೆ ಹೋಗಲು ಅವಕಾಶ ನೀಡಬೇಕು ಎಂದು ರಾಗೇಂಡ್ ಬಸಂತ್ ವಾದಿಸಿದರು. ಆಕ್ಷನ್ ಕೌನ್ಸಿಲ್‌ನ ಕೋರಿಕೆಗೆ ಸ್ಪಂದಿಸಿ,ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ರಾ ಅವರ ಪೀಠವು ಈ ನಿಟ್ಟಿನಲ್ಲಿ ಅನುಮತಿಗಾಗಿ ಕೇಂದ್ರಕ್ಕೆ ಅರ್ಜಿ ಸಲ್ಲಿಸುವಂತೆ ಮತ್ತು ಅದನ್ನು ಪರಿಗಣಿಸುವಂತೆ ಕೇಂದ್ರ ಸರ್ಕಾರಕ್ಕೆ ತಿಳಿಸಿದೆ.

ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯ, ಪ್ರಕರಣದ ವಿಚಾರಣೆಯನ್ನು ಆಗಸ್ಟ್ 14ಕ್ಕೆ ಮುಂದೂಡಿದೆ.