janadhvani

Kannada Online News Paper

ಸುಹಾಸ್ ಹತ್ಯೆ: ಮುಸ್ಲಿಮ್ ಹೆಡ್‌ಕಾನ್ಸ್‌ಟೇಬಲ್ ವಿರುದ್ಧ ಸುಳ್ಳಾರೋಪ- ಪ್ರಕರಣ ದಾಖಲು

ಕರಾವಳಿಯಲ್ಲಿ ಅದೆಷ್ಟೋ ರೌಡಿಗಳು ಗ್ಯಾಂಗ್‌ವಾರ್ ಗೆ ಬಲಿಯಾಗಿದ್ದಾರೆ. ಸುಹಾಸ್ ಹತ್ಯೆ ಪ್ರಕರಣದಂತೆ ಈ ಎಲ್ಲಾ ಪ್ರಕರಣಗಳಲ್ಲಿ ಮುಸ್ಲಿಮರು ಸಹಿತವಿರುವ ಹಂತಕರನ್ನು ಮುಸ್ಲಿಂ ಪೋಲೀಸ್ ಅಧಿಕಾರಿಗಳೇ ದಕ್ಷತೆಯಿಂದ ಕಾರ್ಯ ನಿರ್ವಹಿಸಿ ಕಾನೂನಿನ ಅಡಿಗೆ ತಂದಿದ್ದಾರೆ.

ಮಂಗಳೂರು: ರೌಡಿಶೀಟ‌ರ್ ಸುಹಾಸ್‌ ಶೆಟ್ಟಿ ಹತ್ಯೆಯಲ್ಲಿ ಬಜಪೆ ಪೊಲೀಸ್‌ ಠಾಣೆಯ ಹೆಡ್‌ಕಾನ್ಸ್‌ಟೇಬಲ್ ರಶೀದ್ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಸೋಷಿಯಲ್ ಮೀಡಿಯಾದಲ್ಲಿ ಅವಹೇಳನ ಮಾಡಿ ಪೋಸ್ಟ್ ಹಾಕಿದ್ದ ಇಬ್ಬರು ಸಂಘಪರಿವಾರದ ಮುಖಂಡರ ವಿರುದ್ಧ ಎಫ್‌ಐಆ‌ರ್ ದಾಖಲಾಗಿದೆ.

ಸಂಘಪರಿವಾರದ ಮುಖಂಡ ಮೂಡಬಿದ್ರೆಯ ಸಮಿತ್ ರಾಜ್‌ ದರೆಗುಡ್ಡೆ ಹಾಗೂ ಹಿಂದೂ ಜಾಗರಣ ವೇದಿಕೆ ಪ್ರಾಂತ ಸಂಚಾಲಕ ಉಲ್ಲಾಸ್ ಕೆ.ಟಿ ವಿರುದ್ಧ ಬಜಪೆ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆ‌ರ್ ದಾಖಲಾಗಿದೆ.

ಸುಹಾಸ್‌ ಶೆಟ್ಟಿ ಹತ್ಯೆಯಲ್ಲಿ ವಿನಾಕಾರಣ ನನ್ನ ಹೆಸರು ಎಳೆದು ತಂದಿದ್ದಾರೆ. ಯಾವುದೇ ಆಧಾರವಿಲ್ಲದೆ ನನ್ನ ಹೆಸರು ಹಾಕಿ ಅವಹೇಳನ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ತೇಜೋವಧೆ ಮಾಡಲಾಗುತ್ತಿದೆ ಎಂದು ಹೆಡ್‌ಕಾನ್ಸ್‌ಟೇಬಲ್ ರಶೀದ್‌ ಅವರು ಬಜಪೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ಪೊಲೀಸರು ಇಬ್ಬರ ವಿರುದ್ಧ ಎಫ್‌ಐಆ‌ರ್ ದಾಖಲಿಸಿಕೊಂಡಿದ್ದಾರೆ.

ಮಂಗಳೂರು ನಗರದ ಹೊರವಲಯದ ಬಜ್ಪೆಯ ಕಿನ್ನಿಪದವು ಎಂಬಲ್ಲಿ ಮೇ.1 ರಂದು ರಾತ್ರಿ ರೌಡಿಶೀಟರ್ ಸುಹಾಸ್ ಶೆಟ್ಟಿಯನ್ನು ದುಷ್ಕರ್ಮಿಗಳು ಹತ್ಯೆ ನಡೆಸಿ ಪರಾರಿಯಾಗಿದ್ದರು.ಇದರ ಬೆನ್ನಲ್ಲೇ ಹಂತಕರ ಹಿಂದೆ ಬಿದ್ದ ಪೋಲೀಸರು ಶೀಘ್ರದಲ್ಲೇ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಸಫಲಾಗಿರುತ್ತಾರೆ. ಈ ಕೃತ್ಯದ ಪ್ರಮುಖ ಆರೋಪಿ ಅಬ್ದುಲ್ ಸಫ್ವಾನ್ ಸಹಿತವಿರುವ 8 ಮಂದಿಯನ್ನು ಬಂಧಿಸಿರುವ ಪೋಲೀಸರು. ತನಿಖೆಯ ಮೂಲಕ ಆರೋಪಿಗಳ ಸಂಪೂರ್ಣ ಹಿನ್ನಲೆಯನ್ನೂ, ಕೊಲೆಯ ಹಿಂದಿರುವ ಕಾರಣವನ್ನೂ ಬಹಿರಂಗಪಡಿಸಿದ್ದಾರೆ.

ಆರೋಪಿಗಳ ಪೈಕಿ ಆರು ಮಂದಿ ಮುಸ್ಲಿಮರೊಂದಿಗೆ ಎರಡು ಹಿಂದೂ ಧರ್ಮೀಯರೂ ಶಾಮೀಲಾಗಿದ್ದರು. ಪೋಲೀಸ್ ಅಧಿಕಾರಿಗಳು ಧರ್ಮವನ್ನು ಲೆಕ್ಕಿಸದೆ ಎಲ್ಲರನ್ನೂ ಬಂಧಿಸಿದ್ದಾರೆ. ಪೋಲೀಸ್ ಅಧಿಕಾರಿಗಳ ಪೈಕಿ ಎಲ್ಲಾ ಧರ್ಮೀಯರೂ ಕಾರ್ಯ ನಿರ್ವಹಿಸುತ್ತಾರೆ. ಅವರ ಮಧ್ಯೆ ಹಿಂದೂ, ಮುಸ್ಲಿಂ ಎಂಬ ಬೇಧವಿರುವುದಿಲ್ಲ. ಅದೇ ರೀತಿ, ಬಂಧಿಸಲ್ಪಡುವ ಆರೋಪಿಗಳಿಗೂ ಅಂತಹ ಯಾವುದೇ ಪರಿಗಣನೆಗಳನ್ನೂ ನೀಡಲಾಗುವುದಿಲ್ಲ.

ಆದರೆ, ಸುಹಾಸ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ದುಷ್ಕರ್ಮಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪೋಲೀಸರ ಧರ್ಮವನ್ನು ಉಲ್ಲೇಖಿಸಿ, ಕಪೋಲ ಕಲ್ಪಿತ ಆರೋಪಗಳನ್ನು ಮಾಡುತ್ತಿದ್ದಾರೆ. ಸುಹಾಸ್ ಹತ್ಯೆಯನ್ನು ಒಂದು ಹಿಂದೂ ಕಾರ್ಯಕರ್ತನ ಕೊಲೆಯಾಗಿದೆ ಎಂದು ಬಿಂಬಿಸಿದ ಸಂಘಪರಿವಾರಕ್ಕೆ ಉದ್ದೇಶಿತ ಗಲಭೆಯನ್ನೆಬ್ಬಿಸಲು ಪೋಲೀಸರು ತಡೆಯಾದ ಕಾರಣ ಪೋಲೀಸರ ಮಧ್ಯೆ ಬಿರುಕು ಮೂಡಿಸಲು ಹೊರಟಿದ್ದಾರೆ.

ಸುಹಾಸ್ ಹತ್ಯೆಯನ್ನು ಗ್ಯಾಂಗ್‌ವಾರ್ ಎಂದು ಅರಗಿಸಿಕೊಳ್ಳಲಾಗದೆ, ಸಂಘಪರಿವಾರದ ಕೆಲವರು ತಮ್ಮ ಸಾಮಾಜಿಕ ತಾಣಗಳಲ್ಲಿ ಆಧಾರರಹಿತ ಸುದ್ದಿಗಳನ್ನು ಬಿತ್ತರಿಸಿ, ತಮ್ಮ ಗಮನ ಸೆಳೆಯಲು ಹೊರಟಿದ್ದಾರೆ. ಇದೀಗ ಸುಹಾಸ್ ಹತ್ಯೆ ಬಳಿಕ ಬಜಪೆ ಪೋಲಿಸ್ ಠಾಣೆಯ ಹೆಡ್ಕಾನ್ಸ್ಟೇಬಲ್ ರಶೀದ್ ಅವರ ವಿರುದ್ಧ ಕೇವಲ ಮುಸ್ಲಿಂ ಎಂಬ ಕಾರಣಕ್ಕಾಗಿ ಆರೋಪಗಳ ಸುರಿಮಳೆ ಗೈಯುತ್ತಿದ್ದಾರೆ.

ಮೂಡಬಿದ್ರೆಯ ಹಿಂದೂ ಕಾರ್ಯಕರ್ತ ಸಮಿತ್ ರಾಜ್ ಧರೆಗುಡ್ಡೆ ಎಂಬಾತ ‘ಸುಹಾಸ್ ಕೊಲೆಯಲ್ಲಿ ಬಜಪೆ ಠಾಣೆಯ ಕಾನ್ಸ್ ಟೇಬಲ್ ರಶೀದ್ ನೇರ ಕೈವಾಡ, ಯಾವಾಗ ಬಂಧನ?’ ಎಂದು ವಾಟ್ಸಾಪ್ ಸ್ಟೇಟಸ್ ನಲ್ಲಿ ಹಾಕಿ ಮುಸ್ಲಿಂ ಪೊಲೀಸ್ ಅಧಿಕಾರಿಗಳನ್ನೇ ಆರೋಪಿಗಳೆಂದು ಚಿತ್ರಿಸಿದ್ದಾನೆ. ಹಿಂದೂ ಜಾಗರಣ ವೇದಿಕೆ ಮುಖಂಡ ಕೆಟಿ ಉಲ್ಲಾಸ್ ‘ಸುಹಾಸ್ ಶೆಟ್ಟಿ ಗೆ ರಶೀದ್ ಬಹಳಷ್ಟು ಟಾರ್ಚರ್ ಕೊಡುತ್ತಿದ್ದರು. ಕೊಲೆಯಾಗುವ ಮೂರು ದಿನಗಳ ಹಿಂದಷ್ಟೇ ಶಸ್ತ್ರಾಸ್ತ್ರ ತೆಗೆಸಿದ್ದರು. ಆ ಸುದ್ದಿ ಆರೋಪಿಗಳಿಗೆ ಹೇಗೆ ಗೊತ್ತಾಯಿತು? ಬಲವಾದ ಮಾಹಿತಿಯನ್ನು ರಶೀದ್ ಆರೋಪಿಗಳಿಗೆ ನೀಡಿರಬೇಕು. ರಶೀದ್ ಅವರನ್ನು ತನಿಖೆಗೆ ಒಳಪಡಿಸಬೇಕು ‘ ಎಂದು ಪತ್ರಿಕಾಗೋಷ್ಠಿಯಲ್ಲಿ ಆರೋಪ ಮಾಡಿದ್ದಾರೆ.

ಈ ರೀತಿ ಸುಳ್ಳು ಆರೋಪಗಳನ್ನು ಮಾಡಿ ನಿಷ್ಠಾವಂತ ಅಧಿಕಾರಿಗಳ ಹೆಸರನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೆಡಿಸಲು ಯತ್ನಿಸುತ್ತಿರುವ ಇಂತಹ ದುಷ್ಕರ್ಮಿಗಳನ್ನು ಹದ್ದುಬಸ್ತಿನಲ್ಲಿಡಬೇಕು. ಇಲ್ಲದಿದ್ದಲ್ಲಿ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಅಡ್ಡಿಯಾಗಲಿದೆ.

ಕರಾವಳಿ ಭಾಗದ ಹಲವು ಠಾಣೆಗಳಲ್ಲಿ ಮುಸ್ಲಿಂ ಪೋಲೀಸ್ ಅಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದು, ಇದನ್ನು ಸಹಿಸದ ಸಂಘಪರಿವಾರ ಮುಸ್ಲಿಂ ಆಫೀಸರ್ಸ್ ಜಿಹಾದ್ ಅನ್ನುವ ಷಡ್ಯಂತ್ರ ನಡೆಸುತ್ತಿದ್ದಾರೆ. ಹಲಾಲ್, ಲವ್ ಜಿಹಾದ್ ಸೃಷ್ಟಿಸಿದಂತೆ ಮುಸ್ಲಿಂ ಆಫೀಸರ್ಸ್ ಜಿಹಾದ್ ಎಂಬ ಹೊಸ ನಾಟಕಕ್ಕೆ ಮುಂದಾಗಿದ್ದಾರೆ.

ಕರಾವಳಿಯಲ್ಲಿ ಅದೆಷ್ಟೋ ರೌಡಿಗಳು ಗ್ಯಾಂಗ್‌ವಾರ್ ಗೆ ಬಲಿಯಾಗಿದ್ದಾರೆ. ಸುಹಾಸ್ ಹತ್ಯೆ ಪ್ರಕರಣದಂತೆ ಈ ಎಲ್ಲಾ ಪ್ರಕರಣಗಳಲ್ಲಿ ಮುಸ್ಲಿಮರು ಸಹಿತವಿರುವ ಹಂತಕರನ್ನು ಮುಸ್ಲಿಂ ಪೋಲೀಸ್ ಅಧಿಕಾರಿಗಳೇ ದಕ್ಷತೆಯಿಂದ ಕಾರ್ಯ ನಿರ್ವಹಿಸಿ ಕಾನೂನಿನ ಅಡಿಗೆ ತಂದಿದ್ದಾರೆ.

ಇದೀಗ ಪೊಲೀಸ್ ಇಲಾಖೆಯಲ್ಲಿ ಹಿಂದೂ -ಮುಸ್ಲಿಂ ಅನ್ನುವ ಧಾರ್ಮಿಕ ವಿಭಜನೆಯನ್ನು ಸೃಷ್ಟಿಸಿ, ತನ್ನ ಅಜೆಂಡಾವನ್ನು ಸಕ್ರಿಯಗೊಳಿಸಲು ಸಂಘಪರಿವಾರ ಯತ್ನಿಸುತ್ತಿದ್ದು ನಾಡಿನ ಪ್ರಜ್ಞಾವಂತ ನಾಗರಿಕರು ಇದರ ಬಗ್ಗೆ ಜಾಗರೂಕರಾಗಿ, ನಿಷ್ಠಾವಂತ ಪೋಲೀಸರು ದಕ್ಷತೆಯಿಂದ ಕಾರ್ಯ ನಿರ್ವಹಿಸಲು ನೈತಿಕ ಸ್ಥೈರ್ಯ ತುಂಬಬೇಕಾಗಿದೆ.