janadhvani

Kannada Online News Paper

NEET ಪರೀಕ್ಷೆ ಬರೆಯಲು ಹಿಜಾಬ್ ಧರಿಸಬಹುದೇ? – ಸಚಿವರ ಪ್ರತಿಕ್ರಿಯೆ ಏನು?

ಬೆಂಗಳೂರು: ಕೆಲ ದಿನಗಳಿಂದ ತಣ್ಣಗಾಗಿದ್ದ ಹಿಜಾಬ್ ವಿವಾದ ಈಗ ಮತ್ತೆ ಭುಗಿಲೇಳ್ತಿದೆ. ಡಿಗ್ರಿ ಕಾಲೇಜಿನಲ್ಲಿ ಯಾವುದೇ ಅಭ್ಯಂತರವಿಲ್ಲದೆ, ಹಿಜಾಬ್ ಧರಿಸುತ್ತಿದ್ದ ವಿದ್ಯಾರ್ಥಿನಿಗಳ ಶಿಕ್ಷಣವನ್ನು ಮೊಟಕುಗೊಳಿಸಲು ಸಂಘಿ ಸಂಘಟನೆಗಳು ಮತ್ತೆ ಕ್ಯಾಂಪಸ್ ಒಳ ನುಸುಳಿದೆ.

ಈ ವರೆಗೆ ಶಾಂತಿಯುತ ವಾತಾವರಣದಲ್ಲಿ ಶಿಕ್ಷಣ ಪಡೆಯುತ್ತಿದ್ದ, ಮಂಗಳೂರು ವಿವಿ ಕಾಲೇಜಿನ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್ ನೆಪವೊಡ್ಡಿ ಕಾಲೇಜ್ ಪ್ರವೇಶವನ್ನು ನಿಷೇಧಿಸಲಾಗಿದೆ.ಆದರೆ, ಹಿಜಾಬ್ ತೆಗೆಯದಿರಲು ವಿದ್ಯಾರ್ಥಿನಿಯರು ಪಟ್ಟು ಹಿಡಿದಿದ್ದಾರೆ.

ಏತನ್ಮಧ್ಯೆ, ನೀಟ್ ಪರೀಕ್ಷೆಗೆ ಹಿಜಾಬ್ ಧರಿಸಿದ್ದವರಿಗೆ ಅವಕಾಶ ನೀಡುವ ವಿಚಾರಕ್ಕೆ ಸಂಬಂಧಿಸಿ ಬೆಂಗಳೂರಿನಲ್ಲಿ ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ ಪ್ರತಿಕ್ರಿಯೆ ನೀಡಿದ್ದಾರೆ.

ನೀಟ್ ಪರೀಕ್ಷೆಗೆಂದು ಮಾರ್ಗಸೂಚಿ ಇದೆ, ಅದನ್ನು ಪಾಲನೆ ಮಾಡ್ತೇವೆ. ಸಿಇಟಿಗೂ ಗೈಡ್ಲೈನ್ಸ್ ಪ್ರಕಟ ಮಾಡುತ್ತೇವೆ. ಅಧಿಕಾರಿಗಳೊಂದಿಗೆ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತೇವೆ. ಯಾವುದೇ ಗೊಂದಲಕ್ಕೆ ಅವಕಾಶ ಇಲ್ಲದಂತೆ ನೋಡಿಕೊಳ್ಳುತ್ತೇವೆ ಎಂದಿದ್ದಾರೆ.

ಇನ್ನು ಬೆಂಗಳೂರು ಯುನಿವರ್ಸಿಟಿ ಪೇಪರ್ ಲೀಕ್ ವಿಚಾರಕ್ಕೆ ಸಂಬಂಧಿಸಿ ಸಚಿವ ಅಶ್ವತ್ಥ್ ನಾರಾಯಣ ಪ್ರಶ್ನೆಪತ್ರಿಕೆಯನ್ನು ಸೋರಿಕೆ ಮಾಡಿದ್ದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಮುಂಜಾಗ್ರತಾ ಕ್ರಮ ವಹಿಸುತ್ತೇವೆ. ವಿವಿ ಪ್ರತಿಭಟನೆ ಬಗ್ಗೆ ಮಾಹಿತಿ ತೆಗೆದುಕೊಂಡು ಕ್ರಮ ವಹಿಸುತ್ತೇವೆ. ನಾನ್ ಬೇಲೆಬಲ್ ಓಫೆನ್ಸ್ ಮಾಡುತ್ತೇವೆ ಎಂದರು.