ಬಾಗಲಕೋಟೆ: ರಾಜ್ಯದಲ್ಲಿ ಕಮಿಷನ್ ದಂಧೆ ಬಗ್ಗೆ ಜೋರಾಗಿ ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲಿಯೇ ಶಿರಹಟ್ಟಿ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹೊಸ ಬಾಂಬ್ ಹಾಕಿದ್ದಾರೆ. ಮಠಗಳಿಗೆ ಅನುದಾನ ಬಿಡುಗಡೆ ಆಗಬೇಕು ಅಂದರೂ ನಾವು 30 ಪರ್ಸೆಂಟ್ ಕಮಿಷನ್ ಕೊಡಲೇಬೇಕು ಎಂದಿದ್ದಾರೆ. ಸ್ವಾಮೀಜಿಗಳ ಈ ಆರೋಪ ರಾಜ್ಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಎಲ್ಲಿಗೆ ಬಂತು ಭ್ರಷ್ಟಾಚಾರ..?
ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಬಾಡಗಂಡಿ ಗ್ರಾಮದಲ್ಲಿ ಮಾತನಾಡಿದ ಸ್ವಾಮೀಜಿ.. ಸರ್ಕಾರ ಮಠಗಳಿಗೆ ಕೊಡುವ ಅನುದಾನದಲ್ಲಿ ಶೇ. 30 ಕಮಿಷನ್ ಕೊಟ್ಟರೆ ಮಾತ್ರ ಅನುದಾನ ಬಿಡುಗಡೆ ಆಗುತ್ತದೆ. ಇಲ್ಲದಿದ್ರೆ ಯಾವುದೇ ಕಾಮಗಾರಿಗಳೂ ಆಗುವುದಿಲ್ಲ ಹೀಗಾಗಿ ಇನ್ನಾದರೂ ನಾವು ಜಾಗೃತರಾಗಬೇಕು ಎಂದಿದ್ದಾರೆ.
ಬುದ್ಧಿಗೇಡಿ ಸರಕಾರ: ಈಗಂತೂ ಬುದ್ಧಿಗೇಡಿ ಸರಕಾರಗಳು ಬರುತ್ತಿವೆ. ಉತ್ತರ ಭಾರತದಲ್ಲಿ ಒಂದು ವರ್ಷ ಕಾಲ ಸಾವು–ನೋವಿಗೂ ಅಂಜದೇ ರೈತರು ನಡೆಸಿದ ಹೋರಾಟದ ಮಾದರಿಯ ಪ್ರತಿಭಟನೆಗೆ ರಾಜ್ಯದ ರೈತರು ಸಿದ್ಧರಾದರೆ ಮಾತ್ರ ಅನ್ನ ಸಿಕ್ಕೀತು. ಇಲ್ಲದಿದ್ದರೆ ಏನೂ ಸಿಗಲಾರದು. ಬಹಳ ಜಾಣರಾಗಬೇಕು’ ಎಂದು ಫಕೀರ ದಿಂಗಾಲೇಶ್ವರ ಸ್ವಾಮೀಜಿ ರೈತರಿಗೆ ಕಿವಿಮಾತು ಹೇಳಿದರು.
ನೀವೆಲ್ಲರೂ ಒಂದು ವಿಚಾರವನ್ನ ತಿಳಿದುಕೊಳ್ಳಬೇಕು. ನೀವು ಜಾಣರಾಗಬೇಕು. ಯಾಕಂದ್ರೆ ಯೋಜನೆಗಳು ಹೆಚ್ಚು ಸಮರ್ಪಕವಾಗಿ ಕೆಲಸ ಮಾಡುವುದಿಲ್ಲ. ಅವು ಏನೇನ್ ಆಗುತ್ತಿವೆ ಅನ್ನೋದು ಎಲ್ಲರಿಗೂ ಗೊತ್ತಿದೆ. ನಮಗೂ ಬಹಳ ಛೋಲೋ ಗೊತ್ತಿದೆ. ಒಬ್ಬ ಸ್ವಾಮೀಜಿಗೆ ಅನುದಾನ ಬಿಡುಗಡೆ ಮಾಡಿದ್ರೆ, 30 ಪರ್ಸೆಂಟ್ ಕಟ್ ಆದ್ಮೇಲೆಯೇ ಕಟ್ಟಡ ಕೆಲಸ ಶುರು ಆಗ್ತವೆ. ಇಲ್ಲದಿದ್ರೆ ಅದು ಆಗುವುದಿಲ್ಲ. ಆ ಅಧಿಕಾರಿಗಳು ಬಂದು ನಮಗೆ ಹೇಳ್ತಾರೆ. ಇಷ್ಟು ರೊಕ್ಕವನ್ನ ಕಟ್ ಮಾಡಿಲ್ಲ ಅಂದ್ರೆ ನಿಮ್ಮ ಕೆಲಸ ಆಗೋದಿಲ್ಲ ಎಂದು ಹೇಳುತ್ತಾರೆ. ಎಲ್ಲಿಗೆ ಬಂತು ಅಂತಾ ಭ್ರಷ್ಟಾಚಾರ.
ಶಿರಹಟ್ಟಿ ಫಕೀರ ದಿಂಗಾಲೇಶ್ವರ ಸ್ವಾಮೀಜಿ