ವಿಜಯನಗರ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಎಸಿ ಸ್ಪೋಟಗೊಂಡು ನಾಲ್ವರು ಸಾವನ್ನಪ್ಪಿರುವ ಘಟನೆ ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿಯಲ್ಲಿ ನಡೆದಿದೆ.
ಘಟನೆಯಲ್ಲಿ ಇಬ್ಬರು ಮಕ್ಕಳು ಸೇರಿ ಪತಿ, ಪತ್ನಿ ಸಾವನ್ನಪ್ಪಿದ್ದು, ಅದೃಷ್ಟಶಾತ್ ಒಬ್ಬರು ಅವಘಡದಲ್ಲಿ ಬಚಾವ್ ಆಗಿದ್ದಾರೆ. ವೆಂಕಟ್ ಪ್ರಶಾಂತ್ (42) ಡಿ.ಚಂದ್ರಕಲಾ (38) ಹಾಗೂ ಮಕ್ಕಳಾದ ಎಚ್.ಎ ಅರ್ಶ್ವಿಕ್ (16), ಪ್ರೇರಣಾ (8) ಸಜೀವ ದಹನವಾಗಿ ಸಾವನ್ನಪ್ಪಿದ್ದಾರೆ.
ಮರಿಯಮ್ಮನಹಳ್ಳಿಯ ರಾಘವೇಂದ್ರ ಶೆಟ್ಟಿ ಎನ್ನುವವರ ಮನೆಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಅವಘಡ ಸಂಭವಿಸಿದೆ ಎಂಬ ಶಂಕೆ ವ್ಯಕ್ತವಾಗಿದೆ. ಮನೆಯಲ್ಲಿ ದಟ್ಟ ಹೊಗೆ ಆವರಿಸಿಕೊಂಡಿದ್ದ ಕಾರಣ ಹೊರಬರಲಾಗದೆ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇನ್ನು ಘಟನೆಯಲ್ಲಿ ರಾಘವೇಂದ್ರ ಶೆಟ್ಟಿ ಪತ್ನಿ ರಾಜಶ್ರೀ ರವರು ಮನೆಯಿಂದ ಹೊರಗಡೆ ಓಡಿ ಬಂದು ಜೀವ ಉಳಿಸಿಕೊಂಡಿದ್ದಾರೆ. ತಡರಾತ್ರಿ ಘಟನೆ ನಡೆದಿದ್ದು, ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ಮೃತದೇಹಗಳ ರವಾನೆ ಮಾಡಲಾಗಿದೆ.