ಬಾಗ್ದಾದ್, ಜುಲೈ.13: ಇರಾಕ್ನ ದಕ್ಷಿಣ ನಗರವಾದ ನಾಸಿರಿಯಾದ ಕೋವಿಡ್ ಆಸ್ಪತ್ರೆಯಲ್ಲಿ ಸೋಮವಾರ ತಡರಾತ್ರಿ ಆಕ್ಸಿಜನ್ ಟ್ಯಾಂಕ್ ಸ್ಫೋಟದಿಂದಾಗಿ ಅಗ್ನಿ ಅವಘಡ ಸಂಭವಿಸಿದೆ. ಈ ದುರಂತದಲ್ಲಿ ಕನಿಷ್ಠ 50 ಜನರು ಸಾವನ್ನಪ್ಪಿದ್ದಾರೆ ಮತ್ತು 67 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಅಲ್ಲಿನ ಆರೋಗ್ಯ ಅಧಿಕಾರಿಗಳು ಮತ್ತು ಪೊಲೀಸರು ತಿಳಿಸಿದ್ದಾರೆ. ಘಟನೆಯಲ್ಲಿ ಇನ್ನೂ ಹೆಚ್ಚಿನ ಜನರು ಸಾವಿಗೀಡಾಗಿರುವ ಸಾಧ್ಯತೆಯಿದ್ದು ಅವಶೇಷಗಳಡಿ ಸಿಲುಕಿರುವ ಮೃತದೇಹಗಳನ್ನು ಹೊರತೆಗೆಯುವ ಕಾರ್ಯಾಚರಣೆ ಮುಂದುವರೆದಿದೆ ಎಂದು ತಿಳಿದುಬಂದಿದೆ.
ಪ್ರಧಾನಿ ಮುಸ್ತಫಾ ಅಲ್-ಕಾಧಿಮಿ ಹಿರಿಯ ಮಂತ್ರಿಗಳೊಂದಿಗೆ ತುರ್ತು ಸಭೆ ನಡೆಸಿ ನಾಸಿರಿಯಾದಲ್ಲಿನ ಆರೋಗ್ಯ ಮತ್ತು ನಾಗರಿಕ ರಕ್ಷಣಾ ವ್ಯವಸ್ಥಾಪಕರನ್ನು ಅಮಾನತುಗೊಳಿಸಿ ಬಂಧಿಸುವಂತೆ ಆದೇಶಿಸಿದ್ದಾರೆ ಎಂದು ಇರಾಕ್ನ ಪ್ರಧಾನಮಂತ್ರಿ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
ಆಸ್ಪತ್ರೆಯ ವ್ಯವಸ್ಥಾಪಕರನ್ನು ಸಹ ಅಮಾನತುಗೊಳಿಸಲಾಗಿದೆ ಮತ್ತು ಬಂಧಿಸಲು ಆದೇಶಿಸಲಾಗಿದೆ ಎಂದು ಇರಾಕ್ ಸರ್ಕಾರ ಆಧಿಕೃತ ಮೂಲಗಳು ತಿಳಿಸಿವೆ. ಇದುವರೆಗೆ ದೇಶದಲ್ಲಿ 17,592 ಜನರು ಕೋವಿಡ್ಗೆ ಬಲಿಯಾಗಿದ್ದು ಮತ್ತು 1.4 ದಶಲಕ್ಷಕ್ಕೂ ಹೆಚ್ಚು ಜನರು ಸೋಂಕಿಗೆ ಒಳಗಾಗಿದ್ದಾರೆ.
ಬೆಂಕಿ ನಿಯಂತ್ರಣಕ್ಕೆ ಬಂದ ನಂತರ ಅಲ್-ಹುಸೇನ್ ಕೊರೋನಾ ವೈರಸ್ ಆಸ್ಪತ್ರೆಯಲ್ಲಿ ಶೋಧ ಕಾರ್ಯಾಚರಣೆ ಮುಂದುವರೆದಿದೆ, ಆದರೆ ದಟ್ಟ ಹೊಗೆಯ ಕಾರಣ ಕೆಲವು ವಾರ್ಡ್ಗಳಿಗೆ ಪ್ರವೇಶಿಸಲು ಕಷ್ಟವಾಗುತ್ತಿದೆ ಎಂದು ನಾಸಿರಿಯಾದ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಆಸ್ಪತ್ರೆಯ ಕೋವಿಡ್ -19 ವಾರ್ಡ್ಗಳೊಳಗಿನ ಆಮ್ಲಜನಕ ಟ್ಯಾಂಕ್ ಸ್ಫೋಟವೇ ಬೆಂಕಿಗೆ ಕಾರಣ ಎಂದು ಘಟನಾ ಸ್ಥಳದಲ್ಲಿದ್ದ ಪೊಲೀಸರು ತಿಳಿಸಿದ್ದಾರೆ. “ಕೊರೋನಾ ವೈರಸ್ ವಾರ್ಡ್ಗಳ ಒಳಗೆ ದೊಡ್ಡ ಸ್ಫೋಟ ಸಂಭವಿಸಿದ ಸದ್ದು ಕೇಳಿಸಿತು. ನಂತರ ಇದ್ದಕ್ಕಿದ್ದ ಹಾಗೆ ಆಸ್ಪತ್ರೆಗೆ ಬೆಂಕಿ ಹೊತ್ತಿಕೊಂಡಿತು” ಎಂದು ಆಸ್ಪತ್ರೆಯ ಸಿಬ್ಬಂದಿ ಅಲಿ ಮುಹ್ಸಿನ್ ಹೇಳುತ್ತಾರೆ. ಗಾಯಗೊಂಡ ರೋಗಿಗಳನ್ನು ಬೆಂಕಿಯಿಂದ ದೂರ ಸಾಗಿಸಲು ಅವರು ಸಹಾಯ ಮಾಡುತ್ತಿದ್ದರು.
ಏಪ್ರಿಲ್ನಲ್ಲಿ ಬಾಗ್ದಾದ್ನ ಕೋವಿಡ್ -19 ಆಸ್ಪತ್ರೆಯಲ್ಲಿ ಆಮ್ಲಜನಕ ಟ್ಯಾಂಕ್ ಸ್ಫೋಟದಿಂದಾಗಿ ಸಂಭವಿಸಿದ ಬೆಂಕಿಯಲ್ಲಿ ಕನಿಷ್ಠ 82 ಜನರು ಸಾವನ್ನಪ್ಪಿದರು ಮತ್ತು 110 ಮಂದಿ ಗಾಯಗೊಂಡಿದ್ದರು.
ಬೆಂಕಿಯಿಂದ ಸಾವನ್ನಪ್ಪಿದವರ ಸಂಖ್ಯೆ ಹೆಚ್ಚಾಗಬಹುದು, ಏಕೆಂದರೆ ಅನೇಕ ರೋಗಿಗಳು ಇನ್ನೂ ಕಾಣೆಯಾಗಿದ್ದಾರೆ. ಮೃತಪಟ್ಟವರಲ್ಲಿ ಇಬ್ಬರು ಆರೋಗ್ಯ ಕಾರ್ಯಕರ್ತರು ಸೇರಿದ್ದಾರೆ ಎಂದು ಆಸ್ಪತ್ರೆಯ ಅಧಿಕಾರಿಗಳು ಹೇಳಿದ್ದಾರೆ.
ಅತ್ತ ಪೊಲೀಸದದ ಮತ್ತು ಅಗ್ನಿಶಾಮಕ ದಳ ಬೆಂಕಿ ನಂದಿಸು ಹೆಣಗಾಡುತ್ತಿರುವಾಗ, ಮೃತರ ಸಂಬಂಧಿಕರು ಆಸ್ಪತ್ರೆಯ ಮುಂದೆ ಜಮಾಯಿಸಿ ಪೊಲೀಸರೊಂದಿಗೆ ಘರ್ಷಣೆ ನಡೆಸಿ, ಎರಡು ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ರಾಜಕೀಯ ಹಿಂಸಾಚಾರದಿಂದ ನಲುಗಿರುವ ಇರಾಕ್ನಲ್ಲಿ ಭ್ರಷ್ಟಾಚಾರ ಮತ್ತು ಮೂಲಸೌಕರ್ಯಗಳ ಕೊರತೆ ತಾಂಡವವಾಡುತ್ತಿದೆ. ದೇಶದಲ್ಲಿ ಆಗಾಗ್ಗೆ ಅಪಘಾತಗಳು ಸಂಭವಿಸತ್ತಲೇ ಇರುವುದು ಇತ್ತೀಚೆಗೆ ವಾಡಿಕೆಯಂತಾಗಿದೆ. ಕೊರೋನಾ ವೈರಸ್ ಬಿಕ್ಕಟ್ಟಿನ ಸಂದರ್ಭದಲ್ಲಿ, ಆಸ್ಪತ್ರೆಗಳು ರೋಗಿಗಳ ಸಂಖ್ಯೆಯಲ್ಲಿನ ಹೆಚ್ಚಳದಿಂದ ಮತ್ತು ಔಷಧಗಳ ಕೊರತೆಯಿಂದ ಸಂಕಷ್ಟಕ್ಕೀಡಾಗಿವೆ.
ಬೆಂಕಿ ಮತ್ತು ಮುಗ್ಧ ರೋಗಿಗಳ ಕೊಲೆಗೆ ಭ್ರಷ್ಟ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಬೇಕು. ನನ್ನ ತಂದೆಯ ದೇಹ ಎಲ್ಲಿದೆ” ಎಂದು ಯುವಕನೊಬ್ಬ ಆಕ್ರೋಶ ಹೊರಹಾಕಿದ್ದಾನೆ. ಆಸ್ಪತ್ರೆಯ ಅಂಗಳದಲ್ಲಿ ಸುಟ್ಟು ಕರಕಲಾದ ದೇಹಗಳ ನಡುವೆ ಆತ ತನ್ನ ತಂದೆಯ ದೇಹವನ್ನು ಹುಡುಕುತ್ತಿರುವ ಹೃದಯ ವಿದ್ರಾವಕ ದೃಶ್ಯ ಅಂತರಾಷ್ಟ್ರೀಯ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ.
















ಇನ್ನಷ್ಟು ಸುದ್ದಿಗಳು
ಡಿಕೆಯಸ್ಸಿ ಯು.ಎ.ಇ ರಾಷ್ಟ್ರೀಯ ಸಮಿತಿ- ಹಜ್ ಯಾತ್ರಿಗಳಿಗೆ ಆತ್ಮೀಯ ಬಿಳ್ಕೊಡುಗೆ
ಇರಾಕ್ನ ನೂತನ ಪ್ರಧಾನ ಮಂತ್ರಿಯಾಗಿ ಉದ್ಯಮಿ ಅಲಿ ಅಲ್-ಝೈದಿ ಆಯ್ಕೆ- ದೇಶದ ರಾಜಕೀಯದಲ್ಲಿ ಹೊಸ ಯುಗ?
ಮಾದರಿ ಮದುವೆ ಅಭಿಯಾನದ ಸಮಾರೋಪ ಪ್ರಚಾರ; ಎ.28, 29 ರಂದು ವಾಹನ ಸಂದೇಶ ಜಾಥಾ
ಅಮೆರಿಕಕ್ಕೆ ಇರಾನ್ನಿಂದ ‘ಬಿಗ್ ಡೀಲ್’: ಹೋರ್ಮುಜ್ ಜಲಸಂಧಿ ತೆರೆಯಲು ಸಿದ್ಧ, ಆದರೆ ಒಂದು ಷರತ್ತು!
ಮುಂಬೈಯನ್ನು ನಡುಗಿಸಿದ ಘಟನೆ: ಬಿರಿಯಾನಿ ಮತ್ತು ಕಲ್ಲಂಗಡಿ ತಿಂದ ಕುಟುಂಬ ಬೆಳಗಾಗುವಷ್ಟರಲ್ಲಿ ಅಂತ್ಯ
‘ಮಾದರಿ ಮದುವೆ ಅಭಿಯಾನ’ ಸಮಾರೋಪ ಸಮಾರಂಭ – ಎಸ್ವೈಎಸ್ ಬಂಟ್ವಾಳ ಝೋನ್ ಯಶಸ್ವಿಗೆ ಕರೆ
ಟ್ರಂಪ್ ಔತಣಕೂಟದಲ್ಲಿ ಶೂಟೌಟ್: ನಾಸಾ ಫೆಲೋಶಿಪ್ ಪಡೆದ ಎಂಜಿನಿಯರ್ ಬಂಧನ
ಮಂಗಳೂರು ಪೊಲೀಸ್ ಕಮಿಷನರ್: ವರ್ಗಾವಣೆ ವಿಚಾರ ಕೈಬಿಡುವಂತೆ ಮನವಿ- ಡಿಜಿಪಿಗೆ ಇಕ್ಬಾಲ್ ಬಾಳಿಲ ಪತ್ರ
ಇರಾನ್ ಜೊತೆಗಿನ ಸಂಧಾನಕ್ಕೆ ಬ್ರೇಕ್? – ಅಮೆರಿಕ ನಿಯೋಗದ ಪ್ರವಾಸ ರದ್ದುಪಡಿಸಿದ ಟ್ರಂಪ್
ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ‘ಜನಿವಾರ’ ತೆಗೆಸಿದ ಘಟನೆ: ಸಚಿವ ದಿನೇಶ್ ಗುಂಡೂರಾವ್ ತೀವ್ರ ಖಂಡನೆ