ಬೆಂಗಳೂರು:ಕೊರೋನಾ ಸೋಂಕು ಹೆಚ್ಚಾಗುತ್ತಿರುವುದರ ನಡುವೆಯೂ ಸರ್ಕಾರ ಲಾಕ್ಡೌನ್ ನಿಯಮಾವಳಿಗಳನ್ನು ಹಂತಹಂತವಾಗಿ ಸಡಿಲಿಕೆ ಮಾಡುತ್ತಿದೆ. ಈ ಮೊದಲು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಪ್ರಯಾಣ ಮಾಡುವವರು ಕಡ್ಡಾಯವಾಗಿ 14 ದಿನಗಳ ಕಾಲ ಕ್ವಾರಂಟೈನ್ನಲ್ಲಿ ಇರಬೇಕಿತ್ತು. ಇದೀಗ ಸರ್ಕಾರ ಆ ನಿಯಮವನ್ನು ಬದಲಿಸಿದ್ದು, ಕ್ವಾರಂಟೈನ್ ನಿಯಮ ತೆಗೆದುಹಾಕಿದೆ.
ಕೋವಿಡ್ ಸಂಬಂಧಿತವಾಗಿ ರಾಜ್ಯ ಸರ್ಕಾರ ಹೇರಿದ್ದ ಎಲ್ಲಾ ನಿಯಮಗಳು ರದ್ದು ಮಾಡಿದೆ. ಈ ಮೊದಲು ಸೇವಾ ಸಿಂಧು ಪೋರ್ಟಲ್ನಲ್ಲಿ ಅಂತಾರಾಜ್ಯ ಪ್ರಯಾಣಕ್ಕೆ ನೋಂದಣಿ ಮಾಡಿಸಿಕೊಳ್ಳಬೇಕಿತ್ತು. ಗಡಿಯಲ್ಲಿ ಆರೋಗ್ಯ ತಪಾಸಣೆ, ಕ್ವಾರಂಟೈನ್ ನಿಯಮಗಳನ್ನು ಹೇರಲಾಗಿತ್ತು. ಇದೀಗ ಆ ಯಾವ ನಿಯಮ ಇರುವುದಿಲ್ಲ.
ದೇಶದ ಯಾವುದೇ ಮೂಲೆಯಿಂದ ರಾಜ್ಯಕ್ಕೆ ಜನ ಮತ್ತು ಸರಕು ಬರಲು ಅನುಮತಿ ಕಡ್ಡಾಯವಾಗಿತ್ತು. ಜನರು ಆಗಮಿಸುವಾಗ ಕೋವಿಡ್ ಸಂಬಂಧಿತ ರೋಗಲಕ್ಷಣ ಇದ್ದರೆ ಜನ ತಾವಾಗಿಯೇ ಪ್ರತ್ಯೇಕವಾಗಿ ಇದ್ದು ಆರೋಗ್ಯ ಇಲಾಖೆಯ ಸಹಾಯವಾಣಿಗೆ ಕರೆ ಮಾಡಬೇಕಿತ್ತು. ಆದಾಗ್ಯೂ ಜನರೇ ಬಂದರೆ 14 ದಿನಗಳವರೆಗೆ ತಮ್ಮ ಆರೋಗ್ಯದ ಮೇಲೆ ನಿಗಾ ಇರಿಸಲು ಸೂಚನೆ ನೀಡಲಾಗಿತ್ತು. ಈಗ ಎಲ್ಲಾ ನಿಯಮಗಳನ್ನು ತೆರವುಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.