ಬೆಂಗಳೂರು:ನಗರದ ಕೆಜಿ ಹಳ್ಳಿ ಹಾಗೂ ಡಿಜಿ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಕೋಮು ಗಲಭೆಗೆ ಖೇದ ವ್ಯಕ್ತಪಡಿಸಿರುವ ಕಾಂಗ್ರೆಸ್ ಶಾಸಕ ಝಮೀರ್ ಅಹ್ಮದ್ ಖಾನ್, ಹಿಂಸಾಚಾರ ನಡೆದಿದ್ದು ದುರದೃಷ್ಟಕರ ಎಂದು ಹೇಳಿದ್ದಾರೆ.
ಯಾವುದೇ ಸಮಸ್ಯೆಗೂ ಗಲಭೆ ಪರಿಹಾರವಲ್ಲ. ಕೋಮು ಪ್ರಚೋದಕ ಪೋಸ್ಟ್ ಹಾಕಿದವನಿಗೆ ಶಿಕ್ಷೆಯಾಗಬೇಕು. ಆದರೆ ದಯಮಾಡಿ ಯಾರೂ ಕಾನೂನು ಕೈಗೆತ್ತಿಕೊಳ್ಳಬಾರದು ಎಂದು ಶಾಸಕ ಝಮೀರ್ ಅಹ್ಮದ್ ಅವರು ಮನವಿ ಮಾಡಿದ್ದು,ಘಟನೆ ನೂರಕ್ಕೆ ನೂರರಷ್ಟು ಹತೋಟಿಗೆ ಬಂದಿದೆ ಎಂದು ತಿಳಿಸಿದ್ದಾರೆ.
ಶಾಸಕ ಅಖಂಡ ಶ್ರೀನಿವಾಸಮೂರ್ತಿ ಸೋದರ ಅಳಿಯ ಅವಹೇಳನಕಾರಿ ಪೋಸ್ಟ್ ಹಾಕಿರುವುದು ನಿಜಕ್ಕೂ ಖಂಡನೀಯ. ಆದರೆ ಇದನ್ನು ಕಾನೂನಿನ ಚೌಕಟ್ಟಿನಲ್ಲಿ ವಿರೋಧಿಸಬೇಕೆ ಹೊರತು ಹಿಂಸಾಚಾರದಿಂದ ಏನೂ ಪ್ರಯೋಜನವಿಲ್ಲ ಎಂದು ಜಮೀರ್ ಅಹ್ಮದ್ ಖಾನ್ ಅಭಿಪ್ರಾಯಪಟ್ಟಿದ್ದಾರೆ.
ಯಾವುದೇ ಕಾರಣಕ್ಕೂ ಕಾನೂನಿಗೆ ಭಂಗ ಬರದಂತೆ ಶಾಂತಿಯುತ ಮಾರ್ಗದಲ್ಲಿ ಹೋರಾಟ ಮಾಡಬೇಕು ಎಂದು ಮನವಿ ಮಾಡಿರುವ ಜಮೀರ್ ಅಹ್ಮದ್, ಕಾನೂನು ಕಾಪಾಡಲು ನಮ್ಮ ಪೊಲೀಸರು ಶಕ್ತರಾಗಿದ್ದಾರೆ ಎಂದು ನುಡಿದಿದ್ದಾರೆ.