ಮಸ್ಕತ್: ಭಾರತ ಸರಕಾರವು ವಿದೇಶ ಪ್ರಯಾಣಕ್ಕೆ ಸಂಬಂಧಿಸಿದಂತೆ ಪರಿಷ್ಕೃತ ಮಾರ್ಗಸೂಚಿಯೊಂದನ್ನು ಹೊರಡಿಸಿದ್ದು, ಇದರ ಅನ್ವಯ ಕೊವಿಡ್ 19 ನಿಂದಾಗಿ ದೇಶದಲ್ಲಿ ಅತಂತ್ರರಾಗಿರುವ ಕನಿಷ್ಟ ಮೂರು ತಿಂಗಳು ಅಥವಾ ಅದಕ್ಕಿಂತ ಹೆಚ್ಚು ವಿಸಾ ಅವಧಿಯನ್ನು ಹೊಂದಿರುವ ಅನಿವಾಸಿ ಭಾರತೀಯರಿಗಷ್ಟೇ ವಿದೇಶ ಪ್ರಯಾಣ ಕೈಗೊಳ್ಳಬಹುದಾಗಿದೆ.
ಈ ಪರಿಷ್ಕೃತ ಮಾರ್ಗಸೂಚಿಯಿಂದಾಗಿ ರಜೆ, ಶುಭ ಸಮಾರಂಭ ಮತ್ತಿತರ ಕಾರಣಗಳಿಗಾಗಿ ಕುಟುಂಬಿಕರನ್ನು ಸೇರಿಕೊಳ್ಳಲು ಊರಿಗೆ ಆಗಮಿಸಿ ಕೊರೋನಾ ಕಾರಣದಿಂದ ವಿಮಾನಯಾನವನ್ನು ಸರಕಾರ ಸ್ಥಗಿತಗೊಳಿಸಿದ್ದರ ಪರಿಣಾಮ ಕರ್ಮಭೂಮಿಗೆ ಪ್ರಯಾಣಿಸಲು ಸಾಧ್ಯವಾಗದೇ ಲಕ್ಷಾಂತರ ಅನಿವಾಸಿಗಳು ಅತಂತ್ರರಾಗಿದ್ದಾರೆ. ಮುಖ್ಯವಾಗಿ UAE ದೇಶವು ಡಿಸೆಂಬರ್ ವರೆಗೆ ವಿಸಾ ಅವಧಿಯನ್ನು ವಿಸ್ತರಿಸಿದ್ದರೂ, ಭಾರತ ಸರಕಾರದ ಈ ಮಾರ್ಗಸೂಚಿಯಿಂದಾಗಿ ವಿದೇಶ ಪ್ರಯಾಣ ಕೈಗೊಳ್ಳುವುದು ಅಸಾಧ್ಯವಾಗಲಿದೆ.
ಆದುದರಿಂದ ಸರಕಾರ ಮತ್ತು ಸಂಬಂಧಪಟ್ಟ ಇಲಾಖೆಗಳು ಕೂಡಲೇ ಗಮನಹರಿಸಿ ಈ ಸುತ್ತೋಲೆಗೆ ತಡೆಹಿಡಿಯಬೇಕೆಂದು ಕರ್ನಾಟಕ ಕಲ್ಚರಲ್ ಫೌಂಡೇಷನ್ ಒಮಾನ್(KCF) ಒಮಾನ್ ರಾಷ್ಟ್ರೀಯ ಸಮಿತಿಯು ಪತ್ರಿಕಾ ಪ್ರಕಟಣೆ ಮೂಲಕ ಆಗ್ರಹಿಸಿದೆ.